ರಾಷ್ಟ್ರಪತಿ ಆಯ್ಕೆ, ವೈಎಸ್ ಆರ್ ಕಾಂಗ್ರೆಸ್ ಬೆಂಬಲ ಬಿಜೆಪಿಗೆ
ಬಿಜೆಪಿಯಿಂದ ಯಾವ ಅಭ್ಯರ್ಥಿಯನ್ನು ರಾಷ್ಟ್ರಪತಿ ಚುನಾವಣೆಗೆ ಕಣಕ್ಕೆ ಇಳಿಸಲಾಗುತ್ತದೋ ಅವರನ್ನು ನಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ವೈಎಸ್ ಆರ್ ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ನವದೆಹಲಿಯಲ್ಲಿ ಪ್ರಧಾನಿ ಭೇಟಿ ನಂತರ ಹೇಳಿದ್ದಾರೆ
ನವದೆಹಲಿ, ಮೇ 10: ಬಿಜೆಪಿಯು ಕಣಕ್ಕೆ ಇಳಿಸುವ ರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯನ್ನು ವೈಎಸ್ ಆರ್ ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಪಕ್ಷದ ಅಧ್ಯಕ್ಷ ವೈಎಸ್ ಜಗನ್ ಮೋಹನ್ ರೆಡ್ಡಿ ಬುಧವಾರ ಹೇಳಿದ್ದಾರೆ. ಪ್ರಧಾನಿ ನಿವಾಸದಲ್ಲಿ ನರೇಂದ್ರ ಮೋದಿ ಅವರನ್ನು ಅರ್ಧ ಗಂಟೆ ಕಾಲ ಮಾತನಾಡಿಸಿದ ನಂತರ ಈ ಹೇಳಿಕೆ ನೀಡಿದ್ದಾರೆ.
ಬಿಜೆಪಿಯಿಂದ ಕಣಕ್ಕೆ ಇಳಿಸುವ ಯಾವುದೇ ಅಭ್ಯರ್ಥಿಗೆ ನಮ್ಮ ಬೆಂಬಲವಿದೆ. ಏಕೆಂದರೆ ನಮ್ಮ ಅಭಿಪ್ರಾಯದಲ್ಲಿ ದೊಡ್ಡ ವ್ಯತ್ಯಾಸವಿಲ್ಲ. ಭೂಸ್ವಾಧೀನ ಮಸೂದೆ ಮತ್ತು ಆಂಧ್ರಕ್ಕೆ ವಿಶೇಷ ಸ್ಥಾನ ಮಾನ ವಿಚಾರ ಬಿಟ್ಟು ಉಳಿದ ವಿಷಯಗಳಲ್ಲಿ ನಮ್ಮ ಅಭಿಪ್ರಾಯಗಳು ಒಂದೇ ಥರ ಇವೆ" ಎಂದು ಜಗನ್ ಹೇಳಿದ್ದಾರೆ.[ಸಿಬಿಐಗೆ ಹಿನ್ನಡೆ, ಜಗನ್ ರೆಡ್ಡಿ ಜಾಮೀನು ಮುಂದುವರಿಕೆ]
ಅಗತ್ಯ ಸಂಖ್ಯೆಯ ಬಲವಿರುವ ಬಿಜೆಪಿಯು ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲಿದೆ. ಅಂಥದ್ದರಲ್ಲಿ ಆ ಅಭ್ಯರ್ಥಿ ವಿರುದ್ಧ ಮತ್ತೊಬ್ಬರನ್ನು ಕಣಕ್ಕೆ ಇಳಿಸುವುದು ವಿವೇಚನೆಯಲ್ಲ ಎಂದು ಹೇಳಿದ್ದಾರೆ. ಅಚ್ಚರಿ ಸಂಗತಿ ಏನೆಂದರೆ, ಆಂಧ್ರದಲ್ಲಿ ವೈಎಸ್ ಆರ್ ಕಾಂಗ್ರೆಸ್ ವಿಪಕ್ಷವಾಗಿ ಕಾರ್ಯ ನಿರ್ವಹಿಸುತ್ತಿದೆ. ಅಧಿಕಾರದಲ್ಲಿರುವುದು ಬಿಜೆಪಿಯ ಮಿತ್ರ ಪಕ್ಷವಾಗಿರುವ ಟಿಡಿಪಿ.
ಅಗ್ರಿಗೋಲ್ಡ್ ಕಂಪೆನಿಯಿಂದ ವಂಚಿತರದವರಿಗೆ ನ್ಯಾಯ ಒದಗಿಸಬೇಕು. ಮೆಣಸಿನಕಾಯಿ ಬೆಳೆಗಾರರಿಗೆ ಉತ್ತಮ ಬೆಂಬಲ ನೀಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಜಗನ್ ಮೋಹನ್ ರೆಡ್ಡಿ ಮನವಿ ಮಾಡಿದರು.