ಮಂಗಳಯಾನದ ಯಶಸ್ಸಿನಲ್ಲಿ ಮಹಿಳಾ ವಿಜ್ಞಾನಿಗಳು
ನವದೆಹಲಿ, ನ. 13: ಇಸ್ರೋ ಸಾಧನೆಯ ಮೈಲಿಗಲ್ಲಾದ ಮಂಗಳಯಾನದ ಯಶಸ್ಸಿನಲ್ಲಿ ಮಹಿಳೆಯರು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದಾರೆಂದು ಇಸ್ರೋ ಮುಖ್ಯಸ್ಥ ಡಾ. ಕೆ. ರಾಧಾಕೃಷ್ಣನ್ ಶ್ಲಾಘಿಸಿದ್ದಾರೆ.
ಮಂಗಳಯಾನ ಯಶಸ್ಸಿನಲ್ಲಿ ಮಹಿಳೆಯರು ಪ್ರಯೋಗಾಲಯದಿಂದ ಹಿಡಿದು ಉಪಗ್ರಹ ಸಾಗಿಸುವವರೆಗೂ ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದರು ಎಂದು ತಿಳಿಸಿದ್ದಾರೆ.
ಮಂಗಳಯಾನದ ಕುರಿತು ಪಲ್ಲವ ಬಾಗ್ಲಾ ಹಾಗೂ ಸುಭದ್ರಾ ಮೆನನ್ ಅವರು ಬರೆದ 'India's journey to Mars and beyond' ಪುಸ್ತಕವನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಿ ಅವರು ಮಾತನಾಡಿದರು. [ಮಂಗಳನಿಗೆ ಇಂದು ಮಾಮ್ ಸಿಕ್ಕಳು: ಮೋದಿ]
ಇಸ್ರೋದಲ್ಲಿ ಶೇ. 20ಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಕೆಲವರು ಪ್ರಯೋಗಾಲಯದ ಮಖ್ಯಸ್ಥರಾಗಿದ್ದಾರೆ. ಇನ್ನು ಕೆಲವರು ವಿಕ್ರಂ ಸಾರಾಭಾಯ್ ಅಂತರಿಕ್ಷ ಕೇಂದ್ರದ ಉಪ ನಿರ್ದೇಶಕರಾಗಿದ್ದಾರೆ. ನಮ್ಮ ಕೇಂದ್ರದಲ್ಲಿ ಅವರು ಹಗಲು, ರಾತ್ರಿ ಕೆಲಸ ಮಾಡುವುದನ್ನು ನೋಡಬಹುದು ಎಂದು ಹೊಗಳಿದರು. [ಮಂಗಳಯಾನ ನಡೆದುಬಂದ ದಾರಿ]
ಅಲ್ಲದೆ, ನಾವು ವಿದ್ಯಾರ್ಥಿಗಳಿಗೆ ಉಪಗ್ರಹ ನಿರ್ಮಿಸಲು ಪ್ರೇರೇಪಣೆ ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇಸ್ರೋ ಮಾಜಿ ಮುಖ್ಯಸ್ಥ ಡಾ. ಯು.ಆರ್. ರಾವ್ ಮಾತನಾಡಿ, "ಅಮೆರಿಕದ ನಾಸಾ ರಾಕೆಟ್ ಅಥವಾ ಪೊಪೆಲ್ಲಂಟ್ಗಳನ್ನು ತಯಾರಿಸುವುದಿಲ್ಲ. ಬದಲಿಗೆ ಅಲ್ಲಿನ ಕೈಗಾರಿಕೆಗಳು ಇವನ್ನು ತಯಾರಿಸುತ್ತವೆ. ಹಾಗೆಯೇ ಭಾರತದಲ್ಲಿಯೂ ಇದೇ ಪ್ರಕ್ರಿಯೆ ಶೀಘ್ರ ಜಾರಿಗೆ ಬರಬೇಕು" ಎಂದು ಹೇಳಿದರು. [ಅಮೆರಿಕ-ಭಾರತ ಜಂಟಿ ಮಂಗಳಯಾನ]
ಲೇಖಕರಾದ ಪಲ್ಲವ ಬಾಗ್ಲಾ ಹಾಗೂ ಸುಭದ್ರಾ ಮೆನನ್ ಸೇರಿದಂತೆ ಮಂಗಳಯಾನ ಯೋಜನೆಯ ಇತರ ವಿಜ್ಞಾನಿಗಳು ಪಾಲ್ಗೊಂಡಿದ್ದರು.