ಮಾಲಿನ್ಯ ತಗ್ಗಿಸಲು ಕ್ರಮ: ನಗರದಲ್ಲಿ ಹೊಸ ಕೈಗಾರಿಕೆಗಳಿಗೆ ಅನುಮತಿಯಿಲ್ಲ
ನವದೆಹಲಿ, ನವೆಂಬರ್ 2: ಹೆಚ್ಚುತ್ತಿರುವ ಮಾಲಿನ್ಯದ ಮಟ್ಟವನ್ನು ತಗ್ಗಿಸುವ ಉದ್ದೇಶದಿಂದ ನಗರದ ಕೈಗಾರಿಕಾ ಪ್ರದೇಶಗಳಲ್ಲಿ ಹೊಸ ಉತ್ಪಾದನಾ ಘಟಕಗಳಿಗೆ ಅನುಮತಿ ನೀಡುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ.
ಇನ್ನು ಮುಂದೆ ದೆಹಲಿ ನಗರದಲ್ಲಿ ಸೇವಾ ಉದ್ಯಮ ಮತ್ತು ಹೈಟೆಕ್ ಕೈಗಾರಿಕೆಗಳಿಗೆ ಮಾತ್ರವೇ ಅವಕಾಶ ನೀಡಲಾಗುವುದು. ಕೈಗಾರಿಕಾ ವಲಯಗಳಲ್ಲಿ ಈ ಕ್ಷೇತ್ರಗಳಿಗೆ ಕಡಿಮೆ ದರದಲ್ಲಿ ಭೂಮಿ ನೀಡಲಾಗುವುದು ಎಂದು ಕೇಜ್ರಿವಾಲ್ ಸೋಮವಾರ ಹೇಳಿದ್ದಾರೆ.
ದೆಹಲಿಯ ಆರ್ಥಿಕತೆಯು ಸೇವಾ ಆಧಾರಿತವಾಗಿಯೇ ವಿನಾ ಉತ್ಪಾದನೆ ಆಧಾರಿತವಾಗಿಲ್ಲ. ಹೀಗಾಗಿ ಯಾವುದೇ ಹೊಸ ಉತ್ಪಾದನಾ ಘಟಕಗಳ ಆರಂಭಕ್ಕೆ ಅವಕಾಶ ನೀಡುವುದಿಲ್ಲ. ಹೊಸ ನಿಯಮದಿಂದ ಐಟಿ, ಮಾಧ್ಯಮ, ಸಕಾಲ್ ಸೆಂಟರ್ಗಳು, ಎಚ್ ಆರ್ ಸೇವೆಗಳು, ಬಿಪಿಒ, ಟಿವಿ ವಿಡಿಯೋ ಉತ್ಪಾದನಾ ಸಂಸ್ಥೆಗಳು, ಮಾರುಕಟ್ಟೆ ಸಂಶೋಧನೆ ಮತ್ತು ನೇಮಕಾತಿ ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.

ಅಧಿಕ ಆಸ್ತಿ ವೆಚ್ಚದ ಕಾರಣದಿಂದ ಉಪ ನಗರಗಳಿಗೆ ತೆರಳಲು ಬಯಸುತ್ತಿದ್ದ ವಕೀಲರು, ಲೆಕ್ಕ ಪರಿಶೋಧಕರು ಮತ್ತು ವಾಸ್ತುಶಿಲ್ಪಿಗಳಂತಹ ವಿವಿಧ ವೃತ್ತಿಪರರಿಗೆ ದೆಹಲಿಯಲ್ಲಿ ಕಚೇರಿಗಳು ಸುಲಭವಾಗಿ ಸಿಗಲಿದೆ. ಏಕೆಂದರೆ ವಾಣಿಜ್ಯ ಪ್ರದೇಶಗಳಲ್ಲಿನ ಅಧಿಕ ದರದಿಂದ ಅವರು ಗುರುಗಾಂವ್, ನೋಯ್ಡಾ ಅಥವಾ ಫರೀದಾಬಾದ್ಗೆ ಹೋಗಬೇಕಾಗಿತ್ತು. ಅವರು ಇನ್ನು ಕಡಿಮೆ ದರದಲ್ಲಿ ಕೈಗಾರಿಕಾ ವಲಯಕ್ಕೆ ಬರಲು ಅವಕಾಶವಿದೆ. ದೆಹಲಿಯಲ್ಲಿ ಮಲಿನಗೊಳಿಸುತ್ತಿರುವ ಕೈಗಾರಿಕೆಗಳು ಅಂತ್ಯಗೊಳ್ಳಲಿದೆ. ನಮ್ಮ ಕೈಗಾರಿಕಾ ವಲಯಗಳು ಪುನಃ ಸ್ವಚ್ಛ ಮತ್ತು ಹಸಿರಿನಿಂದ ಕೂಡಲಿವೆ ಎಂದು ಕೇಜ್ರಿವಾಲ್ ಆಶಯ ವ್ಯಕ್ತಪಡಿಸಿದರು.












Click it and Unblock the Notifications