ದೆಹಲಿಯಲ್ಲಿ ಕೇಜ್ರಿವಾಲ್ V/s ಕೇಸರಿ ಗ್ಯಾಂಗ್ ಜಿದ್ದಿಗೆ ಕಾರಣವಾಗಿದ್ದು ಹೇಗೆ ಕಾಶ್ಮೀರ್ ಫೈಲ್ಸ್?
ನವದೆಹಲಿ, ಮಾರ್ಚ್ 30: ಭಾರತದಲ್ಲಿ "ದಿ ಕಾಶ್ಮೀರ್ ಫೈಲ್ಸ್" ಸಿನಿಮಾ ಈಗ ಕೇವಲ ಸಿನಿಮಾ ಆಗಿ ಉಳಿದಿಲ್ಲ. ಬಾಲಿವುಡ್ ಅಂಗಳದಿಂದ ಹುಟ್ಟಿಕೊಂಡ ಚಿತ್ರವೊಂದು ರಾಜಕೀಯ ಅಂಗಳದಲ್ಲಿ ರಾಜಕಾರಣಿಗಳ ಪಾಲಿನ ಅಸ್ತ್ರವಾಗಿ ಬಳಕೆ ಆಗುತ್ತಿದೆ. ಸಿನಿಮಾವನ್ನೇ ಇಟ್ಟುಕೊಂಡು ನಡೆಯುತ್ತಿರುವ ಗದ್ದಲ, ಗಲಾಟೆ, ಪ್ರತಿಭಟನೆ ಮತ್ತು ವಾಗ್ಯುದ್ಧಗಳಿಗೆ ದೆಹಲಿ ಸಾಕ್ಷಿಯಾಗಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನಿವಾಸದ ಬಳಿ ಭಾರತೀಯ ಜನತಾ ಪಕ್ಷದ ಬೆಂಬಲಿಗರು ಬುಧವಾರ ಪ್ರತಿಭಟನೆ ನಡೆಸಿದರು. ಸಿಎಂ ನಿವಾಸದ ಬಳಿಯಿರುವ ಸಿಸಿ ಕ್ಯಾಮರಾಗಳನ್ನು ಒಡೆದು ಹಾಕಿದರು, ಬಿಜೆಪಿಗರು ರೌಡಿಗಳಂತೆ ವರ್ತಿಸಿದರು ಎಂದು ಆಪ್ ದೂಷಿಸಿದೆ.
ಬುಧವಾರದ ಬಿಜೆಪಿ ಬೆಂಬಲಿಗರ ಪ್ರತಿಭಟನೆ ಹೊರತಾಗಿ ದೆಹಲಿ ವಿಧಾನಸಭೆ ಕಲಾಪದಲ್ಲಿಯೂ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ಸಾಕಷ್ಟು ಸದ್ದು-ಗದ್ದಲಕ್ಕೆ ಕಾರಣವಾಗಿತ್ತು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಡಿದ ಅದೊಂದು ಮಾತು, ಕೇಸರಿ ಪಡೆಯ ಕಣ್ಣು ಕೆಂಪಾಗಿಸಿತ್ತು. ಹಾಗಿದ್ದರೆ ಕಾಶ್ಮೀರ್ ಫೈಲ್ಸ್ ಬಗ್ಗೆ ದೆಹಲಿ ಸಿಎಂ ಹೇಳಿದ ಆ ಮಾತು ಯಾವುದು?, ಕಳೆದ ಒಂದು ವಾರದಲ್ಲಿ ದೆಹಲಿ ರಾಜಕಾರಣದಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ ರಾಜಕಾರಣಕ್ಕೆ ಹೇಗೆಲ್ಲ ಬಳಕೆ ಆಯಿತು?, ಏನೆಲ್ಲಾ ರಾಜಕೀಯ ಬೆಳವಣಿಗೆಗಳಿಗೆ ಸಾಕ್ಷಿ ಆಯಿತು?, ಇಂದಿನ ಬಿಜೆಪಿಗರ ಪ್ರತಿಭಟನೆ ಹಿಂದಿನ ಅಸಲಿ ಕಥೆಯೇನು ಎಂಬುದರ ಕುರಿತು ಒಂದು ವಿಶ್ಲೇಷಣಾತ್ಮಕ ವರದಿ ಇಲ್ಲಿದೆ ಓದಿ.

ಖಾಕಿ ಎದುರಿನಲ್ಲೇ ಸಿಎಂ ನಿವಾಸದ ಸಿಸಿ ಕ್ಯಾಮರಾ ಪೀಸ್ ಪೀಸ್!
ಕಾಶ್ಮೀರ್ ಫೈಲ್ಸ್ ಬಗ್ಗೆ ಮಾತನಾಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಶ್ಮೀರದ ಪಂಡಿತರನ್ನು ಅವಮಾನಿಸಿದ್ದಾರೆ ಎನ್ನುವುದು ಬಿಜೆಪಿಗರ ವಾದವಾಗಿದೆ. ಇದೊಂದೇ ಕಾರಣಕ್ಕೆ ಬುಧವಾರ ದೆಹಲಿಯಲ್ಲಿ ಸಿಎಂ ಕೇಜ್ರಿವಾಲ್ ನಿವಾಸದ ಎದುರು ಸೇರಿದ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪೊಲೀಸರ ಜೊತೆಗೆ ಸಂಘರ್ಷಕ್ಕಿಳಿದ ಕೆಲವರು ಸಿಎಂ ನಿವಾಸದ ಬಳಿ ಸಿಸಿ ಕ್ಯಾಮರಾಗಳನ್ನು ಪೀಸ್ ಪೀಸ್ ಮಾಡಿದರು. ಮನೆ ಗೇಟ್ ಮೇಲೆ ಕೇಸರಿ ಬಣ್ಣವನ್ನು ಹಚ್ಚಿಸಿದರು.
ದೆಹಲಿ ವಿಧಾನಸಭೆ ಕಲಾಪದಲ್ಲಿ ಕಾಶ್ಮೀರಿ ಪಂಡಿತರ ಬಗ್ಗೆ ಅವಹೇಳನ ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು, ಸಿಎಂ ಕೇಜ್ರಿವಾಲ್ ಕ್ಷಮಾಪಣೆ ಕೇಳಬೇಕು ಎಂದು ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಆಗ್ರಹಿಸಿದರು.

ಯುಟ್ಯೂಬ್ ನಲ್ಲಿ ಸಿನಿಮಾ ಹಾಕಿ ಎಂದಿದ್ದ ಅರವಿಂದ್ ಕೇಜ್ರಿವಾಲ್
ದೆಹಲಿ ವಿಧಾನಸಭೆಯಲ್ಲಿ "ಕಾಶ್ಮೀರ್ ಫೈಲ್ಸ್" ಸಿನಿಮಾದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಶ್ಮೀರಿ ಪಂಡಿತರ ಹೆಸರಿನಲ್ಲಿ ಕೆಲವರು ಕೋಟಿಗಟ್ಟಲೆ ಸಂಪಾದಿಸುತ್ತಿದ್ದು, ನಿಮಗೆ ಕೇವಲ ಪೋಸ್ಟರ್ಗಳನ್ನು ಹಾಕುವ ಕೆಲಸವನ್ನು ನೀಡಿದ್ದಾರೆ," ಎಂದಿದ್ದರು. ಅಂದು ವಿಧಾನಸಭೆಯಲ್ಲಿ ಬಿಜೆಪಿ ನಾಯಕರ ವಿರುದ್ಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದರು.
"ಕಾಶ್ಮೀರ್ ಫೈಲ್ಸ್ ಸಿನಿಮಾಗೆ ತೆರಿಗೆ ವಿನಾಯಿತಿ ನೀಡಿ ಎಂದು ನಮ್ಮನ್ನು ಏಕೆ ಕೇಳುತ್ತೀರಿ. ನಿಮಗೆ ಅಷ್ಟೊಂದು ಶೋಕವಿದ್ದರೆ, ನಿರ್ದೇಶಕ ವಿವೇಕ್ ಅಗ್ನಿಹೋತ್ರಿಯವರಿಗೆ ಹೇಳಿ ಸಿನಿಮಾವನ್ನು ಯೂಟ್ಯೂಬ್ನಲ್ಲಿ ಹಾಕಿಸಿ. ಆಗ ಇಡೀ ಚಿತ್ರವೇ ಉಚಿತವಾಗಿರುತ್ತದೆ. ಎಲ್ಲರೂ ಅದನ್ನು ಒಂದು ದಿನದಲ್ಲಿ ನೋಡಬಹುದು,'' ಎಂಬ ಹೇಳಿದರು. ಇದೊಂದು ಮಾತು ದೆಹಲಿ ವಿಧಾನಸಭೆಯಲ್ಲಿ ನಗೆ ಚಟಾಕಿ ಸಿಡಿಯುವಂತೆ ಮಾಡಿತು. ಆದರೆ ಇದೇ ಹೇಳಿಕೆ ಬಿಜೆಪಿ ನಾಯಕರ ಕಣ್ಣು ಕೆಂಪಾಗಿಸಿತು.

ಅರವಿಂದ್ ಕೇಜ್ರಿವಾಲ್ ಹೇಳಿಕೆಗೆ ಬಿಜೆಪಿಗರು ಕೆಂಡಾಮಂಡಲ
ಕಾಶ್ಮೀರ್ ಫೈಲ್ಸ್ ಸಿನಿಮಾ ಬಗ್ಗೆ ಅಪಹಾಸ್ಯ ಮಾಡುವುದರ ಮೂಲಕ ಪಂಡಿತರನ್ನು ಅವಮಾನಿಸಿ ಇಡೀ ಕಲಾಪವನ್ನು ನಗುವಂತೆ ಮಾಡಿದ ಅರವಿಂದ್ ಕೇಜ್ರಿವಾಲ್ ನಡೆ ಸರಿಯಾಗಿಲ್ಲ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ದೂಷಿಸಿದ್ದರು. "ಇದು ಸರಿಯಾದ ಕ್ರಮವಲ್ಲ, ಚುನಾಯಿತ ಪ್ರತಿನಿಧಿಯೊಬ್ಬರು ಜನರ ನೋವಿನ ಬಗ್ಗೆ ಆಡಿಕೊಂಡು ನಗುತ್ತಾರೆ ಎನ್ನುವುದೇ ತಪ್ಪಾಗುತ್ತದೆ. ಅವರು ಈ ರೀತಿಯಾಗಿ ವರ್ತಿಸುತ್ತಾರೆ ಎಂದರೆ ನನಗೆ ನಂಬುವುದಕ್ಕೆ ಸಾಧ್ಯವಾಗುತ್ತಿಲ್ಲ. ಅವರು ಕಾಶ್ಮೀರದಲ್ಲಿ ಮನೆ ಮತ್ತು ಕುಟುಂಬ ಸದಸ್ಯರನ್ನು ಕಳೆದುಕೊಂಡವರನ್ನು ಬೇಕಿದ್ದರೆ ಮಾತನಾಡಿಸಿ ನೋಡಲಿ. ಆದರೆ ಈಗ ನೀವು ಕಾಶ್ಮೀರಿ ಪಂಡಿತರ ಬಗ್ಗೆ ತೋರಿದ ವರ್ತನೆಯನ್ನು ಇಡೀ ದೇಶ ಎಂದಿಗೂ ಮರೆಯುವುದಿಲ್ಲ," ಎಂದು ಸಂಬಿತ್ ಪಾತ್ರಾ ಹೇಳಿದರು.

ಸಿಎಂ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಆದೇಶ್ ಕುಮಾರ್
ಕಳೆದ ಮಾರ್ಚ್ 28ರಂದು ದೆಹಲಿ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಆದೇಶ್ ಕುಮಾರ್ ನೀಡಿದ ಅವಹೇಳನಕಾರಿ ಹೇಳಿಕೆ ತೀವ್ರ ಸದ್ದು-ಗದ್ದಲಕ್ಕೆ ಕಾರಣವಾಯಿತು. ಬಿಜೆಪಿ ನಾಯಕರ ಹೇಳಿಕೆಗೆ ಕೆಂಡವಾದ ಆಮ್ ಆದ್ಮಿ ಪಕ್ಷದ ಸದಸ್ಯರು ಪ್ರತಿಭಟನೆಗೆ ಮುಂದಾದರು. ಶಾಸಕ ಅನಿಲ್ ಬಾಜ್ಪೇಯ್, ಜಿತೇಂದರ್ ಮಹಾಜನ್ ಮತ್ತು ಅಜಯ್ ಮಹಾವರ್ ಅವರನ್ನು ಸಭಾಪತಿಯವರು ಕುಳಿತುಕೊಳ್ಳುವಂತೆ ಮನವಿ ಮಾಡಿದರೂ ಅವರು ಬೆಂಚ್ಗಳ ಮೇಲೆ ನಿಂತುಕೊಂಡರು. ತದನಂತರ ಅವರನ್ನು ದೆಹಲಿ ವಿಧಾನಸಭೆ ಸ್ಪೀಕರ್ ರಾಮ್ ನಿವಾಸ್ ಗೋಯೆಲ್ ದಿನದ ಮಟ್ಟಿಗೆ ಅಮಾನತುಗೊಳಿಸಿದ್ದರು.

ಬಿಜೆಪಿಗೆ 32 ವರ್ಷಗಳ ನಂತರದಲ್ಲಿ ಕಾಶ್ಮೀರ ನೆನಪಾಯಿತೇ?
1990ರ ವೇಳೆ ಕಾಶ್ಮೀರದಲ್ಲಿ ದುರಂತ ಸಂಭವಿಸಿ 32 ವರ್ಷಗಳೇ ಕಳೆದಿವೆ. 32 ವರ್ಷಗಳ ನಂತರ ಕಾಶ್ಮೀರಿ ಪಂಡಿತರಿಗೆ ನಾವು ನಿಮಗಾಗಿ ಸಿನಿಮಾ ಮಾಡಿದ್ದೇವೆ ಎಂದು ಕೇಂದ್ರ ಸರ್ಕಾರವು ಹೇಳುತ್ತಿದೆ. ಕಾಶ್ಮೀರದ ಪಂಡಿತರಿಗೆ ಸಿನಿಮಾ ಬೇಕಾಗಿಲ್ಲ, ಪುನರ್ ವಸತಿ ಬೇಕಾಗಿದೆ. ನನ್ನ ಪ್ರಕಾರ, ಚಲನಚಿತ್ರವನ್ನು ತೆರಿಗೆ ಮುಕ್ತಗೊಳಿಸುವುದು ಇಲ್ಲಿ ಮುಖ್ಯವಲ್ಲ. ಅದು ಬಿಜೆಪಿಯ ಮಟ್ಟಿಗೆ ಮಾತ್ರ ಮುಖ್ಯವಾದಂತೆ ಗೋಚರಿಸುತ್ತಿದೆ. ಬೇಕಿದ್ದರೆ ನೀವು ಯಾವುದೇ ಕಾಶ್ಮೀರಿ ಪಂಡಿತರನ್ನು ಕೇಳಿ ನೋಡಿ, ಅವರಿಗೆ ಪುನರ್ ವಸತಿ ಬೇಕು. ಕಳೆದ 8 ವರ್ಷಗಳಿಂದಲೂ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿದೆ. ಆದರೆ ಇದುವರೆಗೂ ಕಾಶ್ಮೀರಿ ಪಂಡಿತರಿಗೆ ಏಕೆ ಪುನರ್ ವಸತಿ ಕಲ್ಪಿಸಲು ಸಾಧ್ಯವಾಗಲಿಲ್ಲ," ಎಂದು ಪ್ರಶ್ನೆ ಮಾಡಿದ್ದರು.

ನಾನು ಸಿನಿಮಾ ಬಗ್ಗೆ ಅಪಹಾಸ್ಯ ಮಾಡಿ ನಕ್ಕಿಲ್ಲ ಎಂದ ಸಿಎಂ
ಕಳೆದ 1993ರಿಂದಲೂ ಕಾಶ್ಮೀರಿ ಪಂಡಿತರಿಗೆ ಸರ್ಕಾರಗಳು ಶಿಕ್ಷಕ ಹುದ್ದೆಯನ್ನು ಖಾಯಂಗೊಳಿಸಿರಲಿಲ್ಲ. ಆದರೆ ಆಪ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಕಾಶ್ಮೀರಿ ಪಂಡಿತರಿಗೆ ನಾವು ಕೈಲಾದಷ್ಟು ನೆರವು ನೀಡಿದ್ದೇವೆ. ಅವರ ಉದ್ಯೋಗವನ್ನು ಆಪ್ ಸರ್ಕಾರವು ಖಾಯಂಗೊಳಿಸಿದೆ. ಇದರ ಮಧ್ಯೆ ನಾನು ಕಾಶ್ಮೀರಿ ಪಂಡಿತರನ್ನಾಗಲಿ ಅಥವಾ ಕಾಶ್ಮೀರಿ ಫೈಲ್ಸ್ ಸಿನಿಮಾ ಕುರಿತಾಗಲಿ ಅಪಹಾಸ್ಯ ಮಾಡಿಲ್ಲ. ಬಿಜೆಪಿ ನಾಯಕರ ನೌಟಂಕಿ(ನಾಟಕ) ಅನ್ನು ನೋಡಿಯೇ ನಾನು ವಿಧಾನಸಭೆ ಕಲಾಪದಲ್ಲಿ ನಕ್ಕಿದ್ದೇನೆ," ಎಂದು ಅರವಿಂದ್ ಕೇಜ್ರಿವಾಲ್ ತಮ್ಮ ನಗುವಿನ ಹಿಂದಿನ ಆರೋಪಗಳಿಗೆ ಉತ್ತರ ನೀಡಿದರು.

ಏನಿದು ಕಾಶ್ಮೀರ್ ಫೈಲ್ಸ್ ಸಿನಿಮಾ ಮತ್ತು ತೆರಿಗೆ ವಿನಾಯಿತಿ?
ವಿವೇಕ್ ಅಗ್ನಿಹೋತ್ರಿ ನಿರ್ದೇಶಿಸಿದ ಕಾಶ್ಮೀರ್ ಫೈಲ್ಸ್ ಚಲನಚಿತ್ರದ ಕಳೆದ ಮಾರ್ಚ್ 11ರಂದು ಬಿಡುಗಡೆಯಾಗಿತ್ತು. 1990ರ ದಶಕದ ವೇಳೆಯಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಕೊಲ್ಲಲಾಯಿತು, ಎಷ್ಟರ ಮಟ್ಟಿಗೆ ಕಿರುಕುಳ ನೀಡಲಾಯಿತು ಎಂಬುದರ ಬಗ್ಗೆ ಈ ಸಿನಿಮಾದಲ್ಲಿ ಚಿತ್ರಿಸಲಾಗಿದೆ. ಅದಲ್ಲದೇ ರಾತ್ರೋರಾತ್ರಿ ಕಾಶ್ಮೀರಿ ಪಂಡಿತರನ್ನು ಮನೆಯಿಂದ ಓಡಿಸುವುದಕ್ಕೆ ನಡೆಸಿದ ದೌರ್ಜನ್ಯದ ಕುರಿತು ಎತ್ತಿ ತೋರಿಸಲಾಗಿದೆ. ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್, ಪಲ್ಲವಿ ಜೋಶಿ, ಮಿಥುನ್ ಚಕ್ರವರ್ತಿ ಹಾಗೂ ಪ್ರಕಾಶ್ ಬೆಳವಡಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದೇ ಸಿನಿಮಾದ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಶ್ಲಾಘನೆ ವ್ಯಕ್ತಪಡಿಸಿದ್ದು, ಎಲ್ಲರೂ ಸಿನಿಮಾ ನೋಡುವಂತೆ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಹಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ಅನ್ನು ನೀಡಲಾಗಿತ್ತು. ಅದು ದೆಹಲಿಯ ರಾಜಕಾರಣದಲ್ಲಿ ಚರ್ಚೆಗೆ ಕಾರಣವಾಗಿದ್ದು, ಇಂದಿನ ಈ ಪರಿಸ್ಥಿತಿಗೆ ಮೂಲವಾಗಿದೆ.












Click it and Unblock the Notifications