ವಾಟರ್ ಟ್ಯಾಂಕರ್ ಹಗರಣ: ಶೀಲಾ ದೀಕ್ಷಿತ್ ಗೆ ನೋಟಿಸ್
ನವದೆಹಲಿ, ಜುಲೈ 04: ಉತ್ತರಪ್ರದೇಶದ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶೀಲಾ ದೀಕ್ಷಿತ್ ಅವರಿಗೆ ದೆಹಲಿ ಸಿಎಂ ಆಗಿದ್ದ ಕಾಲದಲ್ಲಿನ ಹಗರಣವೊಂದು ಕಾಡುತ್ತಿದೆ. ವಾಟರ್ ಟ್ಯಾಂಕರ್ ಹಗರಣದಲ್ಲಿ ದೆಹಲಿ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಹೆಸರು ಸಿಲುಕಿಕೊಂಡಿದ್ದು, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಿಂದ ವಿಚಾರಣೆಗಾಗಿ ನೋಟಿಸ್ ಜಾರಿಗೊಂಡಿದೆ.
ಆಗಸ್ಟ್ 26ರಂದು ವಿಚಾರಣೆಗೆ ಹಾಜರಾಗುವಂತೆ ದೆಹಲಿ ಮಾಜಿ ಸಿಎಂ ಶೀಲಾ ದೀಕ್ಷಿತ್ ಹಾಗೂ ದೆಹಲಿ ಜಲಮಂಡಳಿ ಅಧಿಕಾರಿಗಳಿಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ನೋಟಿಸ್ ಜಾರಿಗೊಳಿಸಿದೆ.

ವಾಟರ್ ಟ್ಯಾಂಕರ್ ಪ್ರಕರಣಕ್ಕೆ ಸಂಬಂಧಿಸಿ ಶೀಲಾ ದೀಕ್ಷಿತ್ ಅವರ ಮೇಲೂ ಆರೋಪ ಕೇಳಿಬಂದಿದೆ. ಹೀಗಾಗಿ ನೋಟಿಸ್ ಜಾರಿ ಮಾಡಿದ್ದೇವೆ. ಅಗಸ್ಟ್ 26ರಂದು ವಿಚಾರಣೆ ನಡೆಸಲಾಗುವುದು ಎಂದು ಎಸಿಬಿ ಮುಖ್ಯಸ್ಥ ಎಂಕೆ ಮೀನಾ ತಿಳಿಸಿದ್ದಾರೆ.
ಜೂನ್ 20ರಂದು ಶೀಲಾ ದೀಕ್ಷಿತ್ ವಿರುದ್ಧ ಎಸಿಬಿ ಪ್ರಕರಣ ದಾಖಲಿಸಿತ್ತು. ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಅರವಿಂಡ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರ್ಕಾರ ಪ್ರಬಲವಾದ ಆರೋಪ ಮಾಡಿದೆ. ಈ ಬಗ್ಗೆ ದಾಖಲಾತಿಗಳನ್ನು ಬಿಡುಗಡೆ ಮಾಡಿದೆ. ಈ ಹಗರಣದಿಂದ ಸರ್ಕಾರಕ್ಕೆ ಸುಮಾರು 400 ಕೋಟಿ ರೂ. ನಷ್ಟವಾಗಿದೆ ಎಂದು ಎಸಿಬಿ ತನ್ನ ವರದಿಯಲ್ಲಿ ಹೇಳಿದೆ.
ಆದರೆ, ಇದೊಂದು ರಾಜಕೀಯ ಪ್ರೇರಿತ ದೂರು, ನಾನು ಯಾವುದೇ ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ ಎಂದು ಶೀಲಾ ದೀಕ್ಷಿತ್ ಅವರು ಪ್ರತಿಕ್ರಿಯಿಸಿದ್ದಾರೆ. ಈ ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿ ಸಿಂ ಅರವಿಂದ್ ಕೇಜ್ರಿವಾಲ್ ಅವರ ಹೇಳಿಕೆಯನ್ನು ಎಸಿಬಿ ಪಡೆಯಲಿದೆ. (ಪಿಟಿಐ)












Click it and Unblock the Notifications