ರಾಜ್ಯಸಭೆಯಿಂದ ಸಂಸದ ಮಲ್ಯರನ್ನು ಹೊರದೂಡಲು ನಿರ್ಧಾರ!
ನವದೆಹಲಿ, ಏಪ್ರಿಲ್ 26: ಮದ್ಯದ ದೊರೆ ವಿಜಯ್ ಮಲ್ಯ ಅವರ ರಾಜ್ಯಸಭಾ ಸದಸ್ಯತ್ವವನ್ನು ರದ್ದುಗೊಳಿಸಲು ರಾಜ್ಯಸಭಾ ನೀತಿ ಸಮಿತಿ ನಿರ್ಧರಿಸಿದೆ. 9ಸಾವಿರ ಕೋಟಿ ರು ಗೂ ಅಧಿಕ ಸಾಲದ ಹೊರೆ ಹೊತ್ತಿರುವ ಮಲ್ಯ ಅವರು ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡಿಲ್ಲದ ಕಾರಣ ಕ್ರಮ ಜರುಗಿಸಲು ಶಿಫಾರಸು ಮಾಡಲು ಮುಂದಾಗಿದೆ.
ಪಾಸ್ ಪೋರ್ಟ್ ರದ್ದುಗೊಂಡ ಬಳಿಕ ತನ್ನ ಬ್ರಿಟನ್ ನಿವಾಸದ ಬಗ್ಗೆ ಮಲ್ಯ ಮಾಹಿತಿ ನೀಡಿದ್ದರು. ನೂರಾರು ಕೋಟಿ ರು ಮೌಲ್ಯದ ಬಂಗಲೆಯಲ್ಲಿ ಐಷಾರಾಮಿ ಜೀವನ ನಡೆಸುತ್ತಿರುವ ಮಲ್ಯ ಅವರು ತಮ್ಮ ಆಸ್ತಿ ವಿವರಗಳನ್ನು ಸುಮಾರು 10 ವರ್ಷಗಳಿಂದ ಅಪ್ಡೇಟ್ ಮಾಡಿಲ್ಲ ಎಂಬ ಆಪಾದನೆ ಎದುರಾಗಿದೆ. [100 ಕೋಟಿ ರು ಮೌಲ್ಯದ ಬಂಗಲೆಯಲ್ಲಿ ಮಲ್ಯ ನೆಲೆ]
ಮಾರ್ಚ್ 2 ರಿಂದ ಭಾರತದಿಂದ ನಾಪತ್ತೆಯಾಗಿರುವ ಕರ್ನಾಟಕದ ಸ್ವತಂತ್ರ ರಾಜ್ಯಸಭಾ ಸದಸ್ಯ ಮಲ್ಯ ಅವರು ತಮ್ಮ ಮೇಲಿನ ಆರೋಪದ ಬಗ್ಗೆ ಉತ್ತರಿಸಲು 8 ದಿನಗಳ ಕಾಲಾವಕಾಶ ನೀಡಿ ನೋಟೀಸ್ ಜಾರಿಗೊಳಿಸಲಾಗಿದೆ. ಒಂದು ವೇಳೆ ಮಲ್ಯ ಅವರು ಇದಕ್ಕೆ ಉತ್ತರ ನೀಡದಿದ್ದಲ್ಲಿ ರಾಜ್ಯ ಸಭಾ ಸದಸ್ವತ್ಯವು ರದ್ದುಗೊಳ್ಳಲಿದೆ. [ಮಲ್ಯ ಮುಂದಿರುವ ನಾಲ್ಕು ಆಯ್ಕೆಗಳು?]
ಮಲ್ಯ ಅವರು 2002ರಲ್ಲಿ ಮೊದಲ ಬಾರಿಗೆ ರಾಜ್ಯ ಸಭಾ ಸದಸ್ಯತ್ವ ಪಡೆದುಕೊಂಡರು. ಹೀಗಾಗಿ 2002ರಿಂದ ಇಲ್ಲಿ ತನಕ ಮಲ್ಯ ಅವರ ಆಸ್ತಿ ವಿವರ ಘೋಷಣೆ ಬಗ್ಗೆ ಸಮಿತಿ ವಿವರಣೆ ಕೇಳಿದೆ.[ನನ್ನ ಆಸ್ತಿ ವಿವರ ಕೇಳುವ ಹಕ್ಕು ಬ್ಯಾಂಕುಗಳಿಗಿಲ್ಲ : ಮಲ್ಯ]