ಕೆಂಪುಕೋಟೆಯಲ್ಲಿ ರೈತರು ಧ್ವಜ ಹಾರಿಸಿದ್ದು ಖಂಡನೀಯ: ಸಚಿವ ಪ್ರಹ್ಲಾದ್
ನವದೆಹಲಿ, ಜನವರಿ 26: ಐತಿಹಾಸಿಕ ಕೆಂಪುಕೋಟೆಗೆ ರೈತರು ಪ್ರವೇಶಿಸಿದ್ದು ಖಂಡನೀಯ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಪಟೇಲ್ ಹೇಳಿದ್ದಾರೆ.
ಐತಿಹಾಸಿಕ ಕೆಂಪು ಕೋಟೆಗೆ ಪ್ರವೇಶಿಸಿ ರೈತರು ಧ್ವಜ ಹಾರಿಸಿರುವುದು ದೇಶದ ಪ್ರಜಾಪ್ರಭುತ್ವದ ಘನತೆಗೆ ಮಾಡಿದ ಅಗೌರವ ಎಂದು ಅವರು ಹೇಳಿದ್ದಾರೆ.
ಕೆಂಪುಕೋಟೆ ನಮ್ಮ ಪ್ರಜಾಪ್ರಭುತ್ವದ ಘನತೆಯ ಸಂಕೇತವಾಗಿದೆ.
ರೈತರು ಅದರಿಂದ ದೂರ ಇರಬೇಕು.ಈ ಘನತೆಯನ್ನು ಉಲ್ಲಂಘಿಸಿರುವುದನ್ನು ಖಂಡಿಸುತ್ತೇನೆ. ಇದು ದುರದೃಷ್ಟಕರ ಮತ್ತು ವಿಷಾದದ ಘಟನೆಯಾಗಿದೆ ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ.

ಉದ್ದೇಶಿತ ಟ್ರ್ಯಾಕ್ಟರ್ ಪರೇಡ್ಗಾಗಿ ಗೊತ್ತುಪಡಿಸಿದ ಮಾರ್ಗದಿಂದ ವಿಮುಖರಾಗಿ ಪೊಲೀಸರಿಂದ ಹಿಂದಕ್ಕೆ ಕಳುಹಿಸಲಾದ ಪ್ರತಿಭಟನಾಕಾರರ ಗುಂಪೊಂದು ಕೆಂಪು ಕೋಟೆಯ ಕಡೆಗೆ ನುಗ್ಗಿದೆ. ಕೆಲ ರೈತರು ಹಾಗೂ ನಿಹಾಂಗ್ ( ಸಾಂಪ್ರದಾಯಿಕ ಸಿಖ್ ಯೋಧರು) ಕೆಂಪು ಕೋಟೆ ಪ್ರವೇಶಿಸಿದ್ದು, ಧ್ವಂಜಸ್ತಂಭವನ್ನೇರಿ ಬಾವುಟ ಹಾರಿಸಿದ್ದಾರೆ.
ರೈತರ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು ದೆಹಲಿಯ ಕೆಂಪುಕೋಟೆಗೆ ಮುತ್ತಿಗೆ ಹಾಕಿದ ರೈತರು ಧ್ವಜಸ್ತಂಭ ಮತ್ತು ಕೆಂಪುಕೋಟೆಯ ಗುಂಬಜ್ ಮೇಲೆ ಕಿಸಾನ್ ಮತ್ತು ಸಿಖ್ ಬಾವುಟವನ್ನು ಹಾರಿಸಲಾಗಿದೆ.
ಈ ವೇಳೆ ಪೊಲೀಸರು ಹರಸಾಹಸ ಪಟ್ಟು ರೈತರನ್ನು ಚದುರಿಸಬೇಕಾಯಿತು. ಲಾಠಿ ಚಾರ್ಜ್ ಮತ್ತು ಟಿಯರ್ ಗ್ಯಾಸ್ ಪ್ರಯೋಗಿಸುತ್ತಾ ಪೊಲೀಸರು ರೈತರನ್ನು ಕೆಂಪುಕೋಟೆ ಆವರಣದಿಂದ ಚದುರಿಸುತ್ತಿದ್ದಾರೆ.
ಕೆಂಪುಕೋಟೆಗೆ ನುಗ್ಗಿದ ರೈತರು ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರಧ್ವಜ ಹಾರಿಸುವ ಧ್ವಜಸ್ಥಂಭದ ಮೇಲೆ ಕಿಸಾನ್ ಮತ್ತು ಸಿಖ್ ಧ್ವಜವನ್ನು ಹಾರಿಸಿದ್ದಾರೆ. ಇನ್ನು ಕೆಲ ರೈತರು ಗುಂಜಬ್ ಮೇಲೆ ಸಿಖ್ ಧ್ವಜವನ್ನು ಹಾರಿಸಿದ್ದಾರೆ.












Click it and Unblock the Notifications