ದೂರಸಂಪರ್ಕ ಸಚಿವ ರವಿಶಂಕರ್ ಪ್ರಸಾದ್ಗೆ ಸ್ವಪಕ್ಷದವರಿಂದಲೇ 'ಕೌಂಟರ್'
ನವದೆಹಲಿ, ಜೂನ್ 26: ಸಾಮಾನ್ಯವಾಗಿ ಲೋಕಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧಪಕ್ಷದವರ ನಡುವೆ ವಾದ ವಿವಾದಗಳು ನಡೆಯುತ್ತವೆ. ಆಡಳಿತ ಪಕ್ಷದ ನಾಯಕರು ಉತ್ತರ ನೀಡುವಾಗ ಅವರಿಗೆ ಸ್ವಪಕ್ಷದವರು ಹಾಗೂ ಸರ್ಕಾರದ ಮಿತ್ರ ಪಕ್ಷಗಳಿಂದ ಬೆಂಬಲ ದೊರಕುತ್ತದೆ.
ಆದರೆ, ಲೋಕಸಭೆಯಲ್ಲಿ ಬುಧವಾರ ಇದಕ್ಕೆ ವಿರುದ್ಧವಾದ ಸನ್ನಿವೇಶ ಕಂಡುಬಂತು. ದೂರಸಂಪರ್ಕ ಖಾತೆ ಸಚಿವ ರವಿಶಂಕರ್ ಪ್ರಸಾದ್ ಅವರು ತಮ್ಮ ಪಕ್ಷದ ಸಂಸದರೊಬ್ಬರಿಂದಲೇ ತರಾಟೆಗೆ ಒಳಗಾದರು. ನೈಸರ್ಗಿಕ ವಿಪತ್ತುಗಳಂತಹ ಸನ್ನಿವೇಶ ಉಂಟಾದಾಗ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳು ಮಾತ್ರ ಗ್ರಾಹಕರಿಗೆ ಉಚಿತ ಸೇವೆಗಳನ್ನು ಒದಗಿಸುತ್ತದೆ ಎಂದು ಸಚಿವರು ಹೇಳಿದಾಗ ಅದಕ್ಕೆ ಬಿಜೆಪಿ ಸಂಸದ ರಾಜೀವ್ ಪ್ರತಾಪ್ ರೂಡಿ ಆಕ್ಷೇಪ ವ್ಯಕ್ತಪಡಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ರವಿಶಂಕರ್ ಪ್ರಸಾದ್, ಪ್ರವಾಹ ಮತ್ತು ಸೈಕ್ಲೋನ್ನಂತಹ ನೈಸರ್ಗಿಕ ವಿಕೋಪಗಳು ಉಂಟಾದ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆಗಳಾದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ಮಾತ್ರ ಗ್ರಾಹಕರಿಗೆ ಉಚಿತ ಸೇವೆ ಒದಗಿಸುತ್ತವೆ ಎಂದರು.

ಆಗ ರಾಜೀವ್ ಪ್ರತಾಪ್ ರೂಡಿ, ಇತರೆ ಖಾಸಗಿ ದೂರಸಂಪರ್ಕ ಸಂಸ್ಥೆಗಳೂ ಉಚಿತ ಸೇವೆಗಳನ್ನು ಒದಗಿಸುತ್ತವೆ ಎಂದು ತಿಳಿಸಿದರು. ಆಗ ಪ್ರಸಾದ್, ಒಂದೆರಡು ದಿನ ಮಾತ್ರ ಖಾಸಗಿ ಸಂಸ್ಥೆಗಳು ಉಚಿತ ಸೇವೆ ನೀಡುತ್ತವೆ. ಆದರೆ, ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ ವಿಪತ್ತಿನ ಸಮಸ್ಯೆ ನಿವಾರಣೆ ಆಗುವವರೆಗೂ ಉಚಿತ ಸೌಲಭ್ಯ ನೀಡುತ್ತವೆ ಎಂದು ಪ್ರತಿಪಾದಿಸಿದರು.
ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್ಗಳಲ್ಲಿ ಪದೇ ಪದೇ ಕಾಲ್ ಡ್ರಾಪ್ ಸಮಸ್ಯೆ ಎದುರಾಗುತ್ತದೆ. ಆದರೆ, ಅದಕ್ಕೆ ಹಣವನ್ನೂ ಕಡಿತಗೊಳಿಸುತ್ತಾರೆ. ಸರ್ಕಾರಿ ಸ್ವಾಮ್ಯದ ಕಂಪೆನಿಗಳಾಗಿರುವುದರಿಂದ ಜನರು ನೆಟ್ವರ್ಕ್ ಸಿಗದೆ ಇದ್ದಾಗ ಸರ್ಕಾರವನ್ನು ಬೈದುಕೊಳ್ಳುತ್ತಾರೆ ಎಂದು ರೂಡಿ ದೂರಿದರು.
ಆಗ ವಿರೋಧಪಕ್ಷದ ಕೆಲವು ಸದಸ್ಯರು, ಈ ಸಮಸ್ಯೆ ಬಗೆಹರಿಸಲು ರಾಜೀವ್ ರೂಡಿ ಅವರನ್ನು ರಾಜ್ಯ ಖಾತೆ ಸಚಿವರನ್ನಾಗಿ ಮಾಡಬೇಕು ಎಂದು ಹೇಳಿದರು. ರಾಜೀವ್ ರೂಡಿ ಅವರು ಕಳೆದ ಬಿಜೆಪಿ ಸರ್ಕಾರದಲ್ಲಿ ರಾಜ್ಯ ಖಾತೆ ಸಚಿವರಾಗಿದ್ದರು.
ಸರ್ಕಾರಿ ಸ್ವಾಮ್ಯದ ಕಂಪೆನಿಗಳು ಉತ್ತಮ ಆರ್ಥಿಕ ಆರೋಗ್ಯ ಹೊಂದುವುದು ಮುಖ್ಯ ಎಂದು ರವಿಶಂಕರ್ ಪ್ರಸಾದ್ ಹೇಳಿದರು.












Click it and Unblock the Notifications