ಸದನದಲ್ಲಿ ಪೆಪ್ಪರ್ ಸ್ಪ್ರೇ ಎರಚಿ ಗದ್ದಲ ಮಾಡಿದ ಸಂಸದ
ನವದೆಹಲಿ, ಫೆ.13 : ಲೋಕಸಭೆಯಲ್ಲಿ ಗುರುವಾರ ತೆಲಂಗಾಣ ವಿವಾದದ ಕಿಚ್ಚು ಹೆಚ್ಚಾಗಿದ್ದು, ವಿಜಯವಾಡ ಸಂಸದ ಎಲ್ ರಾಜಗೋಪಾಲ್ ಸದನದಲ್ಲಿ ಪೆಪ್ಪರ್ ಸ್ಪ್ರೇ ಎರಚುವ ಮೂಲಕ ಲೋಕಸಭೆ ಕಲಾಪಕ್ಕೆ ಅಡ್ಡಿ ಉಂಟುಮಾಡಿದ್ದಾರೆ. ಇದರಿಂದ ಸ್ಪೀಕರ್ ಮೀರಾ ಕುಮಾರ್ ತಕ್ಷಣ ಸದನದಿಂದ ಹೊರ ನಡೆದರು.
ಗುರುವಾರದ ಲೋಕಸಭೆ ಕಲಾಪ ಮಧ್ಯಾಹ್ನ 12 ಗಂಟೆಗೆ ಆರಂಭವಾಯಿತು. ಸದನದಲ್ಲಿ ವಿವಾದಿತ ತೆಲಂಗಾಣಾ ಮಸೂದೆ ಮಂಡನೆ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ತೆಲಂಗಾಣಾ ಮಸೂಧೆ ಮಂಡನೆ ಮಾಡಲು ಸಿದ್ಧಗೊಳ್ಳುತ್ತಿದ್ದಂತೆ ಸಂಸದ ರಾಜಗೋಪಾಲ್ ಪೆಪ್ಪರ್ ಸ್ಪ್ರೇ ಎರಚುವ ಮೂಲಕ ಕಲಾಪಕ್ಕೆ ಅಡ್ಡಿ ಪಡಿಸಿದರು.
ಪೆಪ್ಪರ್ ಸ್ಪ್ರೇ ಎರಚಿದ್ದರಿಂದ ಸ್ಪೀಕರ್ ಮೀರಾ ಕುಮಾರ್ ಸದನದಿಂದ ಹೊರ ನಡೆದರು. ಸಂಸದರು ಕರವಸ್ತ್ರದಿಂದ ಮುಖ ಮುಚ್ಚಿಕೊಂಡರು. ತಕ್ಷಣ ಸದನಕ್ಕೆ ವೈದ್ಯರು ಆಗಮಿಸಿದರು. ಪೆಪ್ಪರ್ ಸ್ಪ್ರೇ ಎರಚಿದ್ದರಿಂದ ಸದನದಲ್ಲಿ ತಳ್ಳಾಟ ನಡೆದು ಮೂವರು ಸಂಸದರು ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿಕೊಡಲಾಯಿತು. [ತೆಲಂಗಾಣಕ್ಕೆ ಮಸೂದೆ ಅಸ್ತು ಎಂದ ಸಚಿವ ಸಂಪುಟ]
ರಾಜಗೋಪಾಲ್ ಜೊತೆಗಿದ್ದ ಸೀಮಾಂಧ್ರದ ಭಾಗದ ಸಂಸದರು, ಸದನದ ಬಾವಿಗಿಳಿದು ಸಭಾಧ್ಯಕ್ಷರ ಮೈಕ್ರೋಫೋನ್ ಮುರಿಯಲು ಪ್ರಯತ್ನಿಸಿದ್ದಾರೆ. ಸಂಸದರ ಈ ಗದ್ದಲದಿಂದ ಸದನದಲ್ಲಿ ಕೆಲವು ಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಇದರಿಂದ ಸದನವನ್ನು ಮುಂದೂಡಬೇಕಾಯಿತು. ಸದನದೊಳಗೆ ಪೆಪ್ಪರ್ ಸ್ಪ್ರೇ ಎರಚಿದ್ದನ್ನು ಹಲವು ಸಂಸದರು ತೀವ್ರವಾಗಿ ಖಂಡಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಟಿಎಂಸಿ ಪಕ್ಷದ ದಿನೇಶ್ ತ್ರಿವೇದಿ ಹೇಳಿದ್ದಾರೆ.
ಸಂಸತ್ತಿನಲ್ಲಿ ಇಂತಹ ಪ್ರಸಂಗ ನಡೆಯುವಾಗ ಪ್ರಧಾನಿ ಮನಮೋಹನ್ ಸಿಂಗ್, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಸದನದಲ್ಲಿ ಹಾಜರಿರಲಿಲ್ಲ ಎಂದು ತಿಳಿದುಬಂದಿದೆ. ಇದೇ ವೇಳೆ ಸಂಸದರ ಕೈಯಲ್ಲಿ ಚಾಕು ಇರುವುದನ್ನು ನೋಡಿದ್ದೇನೆ ಎಂದು ಪ್ರೇಕ್ಷಕರೊಬ್ಬರು ಹೇಳಿದ್ದಾರೆ.
17 ಸಂಸದರ ಅಮಾನತು : ತೆಲಂಗಾಣ ರಾಜ್ಯ ರಚನೆ ವಿರೋಧಿಸಿ ಸದನದಲ್ಲಿ ಗದ್ದಲವೆಬ್ಬಿಸಿ, ಸದನದ ಕಲಾಪಕ್ಕೆ ತಡೆ ಉಂಟುಮಾಡಿದ ಆಂಧ್ರಪ್ರದೇಶದ 17 ಮಂದಿ ಸಂಸದರನ್ನು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಅಮಾನತುಗೊಳಿಸಿದ್ದಾರೆ.