ಕಲ್ಲಿದ್ದಲು ಹಗರಣ: 214 ಕಂಪನಿಗೆ 'ಸುಪ್ರೀಂ' ಶಾಕ್
ನವದೆಹಲಿ, ಸೆ.24: ಎರಡು ಅಲ್ಟ್ರಾ ಮೆಗಾಪವರ್ ಯೋಜನೆಯಲ್ಲಿ ತೊಡಗಿರುವ ಕಂಪನಿಗಳು, ಸರ್ಕಾರಿ ಸ್ವಾಮ್ಯದ ನಾಲ್ಕು ಕಂಪನಿಗಳಿಗೆ ಕಲ್ಲಿದ್ದಲು ಹಂಚಿಕೆಯಾಗಿರುವುದನ್ನು ಹೊರತುಪಡಿಸಿ ಸುಮಾರು 214ಕ್ಕೂ ಅಧಿಕ ಖಾಸಗಿ ಕಂಪನಿಗಳಿಗೆ ಸಿಕ್ಕಿರುವ ಕಲ್ಲಿದ್ದಲು ಹಂಚಿಕೆಯನ್ನು ಸುಪ್ರೀಂಕೋರ್ಟ್ ಬುಧವಾರ ರದ್ದುಗೊಳಿಸಿದೆ.
ಕಲ್ಲಿದ್ದಲು ನಿಕ್ಷೇಪ ಹಂಚಿಕೆಯಲ್ಲಿ ಅಕ್ರಮ ಕಂಡು ಬಂದಿದ್ದು ದೇಶದ ಸಂಪತ್ತನ್ನು ಲೂಟಿಯಾಗುತ್ತಿದೆ. ನಿಯಮ ಪಾಲಿಸದ ಕಂಪನಿಗಳಿಗೆ ನೀಡಿರುವ ಹಂಚಿಕೆ ರದ್ದುಗೊಳಿಸಲಾಗುವುದು ಎಂದು ಆಗಸ್ಟ್ 25 ರಂದು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಆದೇಶಕ್ಕೆ ಅನುಗುಣವಾಗಿ ಬುಧವಾರ ಸುಪ್ರೀಂಕೋರ್ಟ್ ಪ್ರತಿ ಆದೇಶ ನೀಡಿ ಒಟ್ಟು 214 ಖಾಸಗಿ ಕಂಪನಿಗಳನ್ನು ರದ್ದುಗೊಳಿಸಿದೆ. ಮುಖ್ಯ ನ್ಯಾಯಮೂರ್ತಿ ಆರ್ ಎಂ ಲೋಧಾ ಅವರು ಮಹತ್ವದ ಆದೇಶ ನೀಡಿದೆ.

1993ರಿಂದ 2010ರವರೆಗಿನ ಹಂಚಿಕೆಯಾಗಿದ್ದ ಕಲ್ಲಿದ್ದಲು ನಿಕ್ಷೇಪಗಳ ಪೈಕಿ ಸರ್ಕಾರಿ ಸ್ವಾಮ್ಯದ ನಾಲ್ಕು ಹಂಚಿಕೆಗಳನ್ನು ಹೊರತುಪಡಿಸಿ ಖಾಸಗಿ ಸ್ವಾಮ್ಯದ 214 ಹಂಚಿಕೆಗಳನ್ನು ರದ್ದುಗೊಳಿಸಿದ್ದು, ಅವುಗಳನ್ನು ಮುಚ್ಚಲು 6 ತಿಂಗಳ ಕಾಲಾವಕಾಶವನ್ನು ಸುಪ್ರೀಂಕೋರ್ಟ್ ನೀಡಿದೆ. ಸರ್ಕಾರಿ ಸ್ವಾಮ್ಯದ ಸಸನ್, ಯುಎಂಪಿಪಿ, ಎನ್ಟಿಪಿಸಿ ಹಾಗೂ ಸೇಲ್ ಕಂಪನಿಗಳು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿರುವುದರಿಂದ ಈ ನಾಲ್ಕು ಕಂಪನಿಗಳ ಹಂಚಿಕೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿಲ್ಲ.
ಕಲ್ಲಿದ್ದಲು ಹಗರಣಕ್ಕೆ ಸಂಬಂಧಿಸಿದಂತೆ ಸಿಎಜಿ ನೀಡಿರುವ ವರದಿ ಆಧಾರಿಸಿ 42 ಕಂಪನಿಗಳಿಗೆ ಪ್ರತಿ ಮೆಟ್ರಿಕ್ ಟನ್ ಕಲ್ಲಿದ್ದಲು ಹಂಚಿಕೆಗೆ ಹೆಚ್ಚುವರಿ 295 ರು ನೀಡುವಂತೆ ಕೋರ್ಟ್ ಸೂಚಿಸಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಕುಮಾರ್ ಮಂಗಲಂ ಬಿರ್ಲಾ, ಪಿಸಿ ಪಾರಖ್, ನವೀನ್ ಜಿಂದಾಲ್, ದಾಸರಿ ನಾರಾಯಣ ರಾವ್ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದೆ. ತನಿಖಾ ವರದಿಯನ್ನು ಸರ್ಕಾರದೊಡನೆ ಹಂಚಿಕೊಳ್ಳದಂತೆ ಸಿಬಿಐಗೆ ಸುಪ್ರೀಂಕೋರ್ಟ್ ನಿರ್ಬಂಧ ಹೇರಿದೆ. ಈ ಹಗರಣದಿಂದ ದೇಶದ ಬೊಕ್ಕಸಕ್ಕೆ ಸುಮಾರು 1.86 ಲಕ್ಷ ಕೋಟಿ ಮೊತ್ತದಷ್ಟು ನಷ್ಟ ಉಂಟಾಗಿದೆ.












Click it and Unblock the Notifications