ನವೆಂಬರ್ ನಲ್ಲಿ ಸುಪ್ರೀಂ ಕೋರ್ಟ್ ನಿಂದ ಹೊರಬೀಳಲಿರುವ ಐತಿಹಾಸಿಕ ತೀರ್ಪುಗಳು
ಅಕ್ಟೋಬರ್, ನವದೆಹಲಿ 31: ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರು ನಿವೃತ್ತರಾಗುವ ಮುನ್ನ ಕೆಲವು ಮಹತ್ವದ ತೀರ್ಪುಗಳನ್ನು ನೀಡಲಿದ್ದು, ನವೆಂಬರ್ ತಿಂಗಳು ಆ ಎಲ್ಲ ತೀರ್ಪುಗಳಿಗೆ ಸಾಕ್ಷಿಯಾಗಲಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಅವರ ನೇತೃತ್ವದದ ಸುಪ್ರೀಂ ಕೋರ್ಟ್ ನ ವಿವಿಧ ಪೀಠಗಳು ನೀಡಲಿರುವ ತೀರ್ಪುಗಳಲ್ಲಿ ಅಯೋಧ್ಯೆ ವಿವಾದ, ಶಬರಿಮಲೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ವಿವಾದ ಸೇರಿದಂತೆ ನಾಲ್ಕು ಮಹತ್ವದ ಕೇಸುಗಳ ತೀರ್ಪು ನವೆಂಬರ್ ನಲ್ಲಿ ಹೊರಬೀಳಲಿದೆ.
ಈಗಾಗಲೇ ರಂಜನ್ ಗೊಗೊಯ್ ಅವರ ನಿವೃತ್ತಿ ನಂತರ ಶರದ್ ಅರವಿಂದ್ ಬೊಬ್ಡೆ ಅವರು ಸುಪ್ರೀಂ ಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿ ಎಂದು ಈಗಾಗಲೇ ಘೋಷಿಸಲಾಗಿದೆ.
ನವೆಂಬರ್ 17 ರಂದು ರಂಜನ್ ಗೊಗೊಯ್ ಅವರು ನಿವೃತ್ತರಾಗಲಿದ್ದು, ನಿವೃತ್ತಿಗೂ ಮುನ್ನ ಅವರು ಈ ಕೆಳಗಿನ ಪ್ರಕರಣಗಳಲ್ಲಿ ಐತಿಹಾಸಿಕ ತೀರ್ಪು ನೀಡಲಿದ್ದಾರೆ.

ಅಯೋಧ್ಯೆ ಭೂ ವಿವಾದ ಪ್ರಕರಣ
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಪಂಸದಸ್ಯರ ಪೀಠ ನವೆಂಬರ್ 17 ರೊಳಗೆ ನೀಡಬೇಕಾದ ಮಹತ್ವದ ತೀರ್ಪುಗಳಲ್ಲಿ ಅಯೋಧ್ತೆ ತೀರ್ಪು ಅಗ್ರಪಂಕ್ತಿಯಲ್ಲಿದೆ. ಅಯೋಧ್ಯೆಯಲ್ಲಿರುವ ರಾಮಜನ್ಮ ಭೂಮಿ ಆಸ್ತಿ ಹಕ್ಕು ಪ್ರಕರಣಕ್ಕೆ ಸಂಬಂಧಿಸಿದಂತೆ 40 ದಿನಗಳ ನಡೆದ ಪ್ರತಿದಿನ ವಿಚಾರಣೆ ಅಕ್ಟೋಬರ್ 16ರಂದು ಅಂತ್ಯ ಕಂಡಿತ್ತು.

ಶಬರಿಮಲೆ ಮೇಲ್ಮನವಿ ತೀರ್ಪು
ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಕ್ಕೆ ಹೇರಿದ್ದ ನಿಷೇಧ ತೆರವುಗೊಳಿಸಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಯ ಕುರಿತ ತೀರ್ಪು ಸಹ ನವೆಂಬರ್ ನಲ್ಲೇ ಹೊರಬೀಳಬೇಕಿದೆ. ದೇವಸ್ಥಾನದ ಆಡಳಿತ ಮಂಡಳಿಯ ನಿಯಮಾವಳಿ ಪ್ರಕಾರ 10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ದೇವಸ್ಥಾನದ ಆವರಣಕ್ಕೆ ಭೇಟಿ ನೀಡಲು ಅವಕಾಶವಿರಲಿಲ್ಲ. ಋತುಮತಿಯಾಗುವ ವಯಸ್ಸಿನ ಹೆಣ್ಣುಮಕ್ಕಳು ದೇವಾಲಯದ ಆವರಣಕ್ಕೆ ಪ್ರವೇಶಿಸಿದರೆ ಮಂದಿರದ ಪಾವಿತ್ರ್ಯಕ್ಕೆ ಧಕ್ಕೆಯಾಗುತ್ತದೆ ಎಂಬುದು ದೇವಾಲಯದ ಆಡಳಿತ ಮಂಡಳಿಯ ವಾದವಾಗಿತ್ತು. ಆದರೆ 2018 ರ ಸೆಪ್ಟೆಂಬರ್ ನಲ್ಲಿ ಈ ನಿಷೇಧವನ್ನು ತೆರವುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತ್ತು.

ರಫೇಲ್ ತೀರ್ಪು ಮರುಪರಿಶೀಲನಾ ಅರ್ಜಿ
2018ರ ಡಿಸೆಂಬರ್ನಲ್ಲಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ಸುಪ್ರೀಂಕೋರ್ಟ್ ನ್ಯಾಯಪೀಠವು ಕೇಂದ್ರ ಸರ್ಕಾರಕ್ಕೆ ನೀಡಿದ್ದ ಕ್ಲೀನ್ ಚಿಟ್ ತೀರ್ಪಿನ ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಈ ಪ್ರಕರಣದ ತೀರ್ಪನ್ನೂ ಸುಪ್ರೀಂ ಕೋರ್ಟ್ ನೀಡಲಿದೆ.

ಚೌಕಿದಾರ್ ಚೋರ್ ಹೈ
ರಾಹುಲ್ ಗಾಂಧಿಯವರ ಚೌಕಿದಾರ್ ಚೋರ್ ಪ್ರಕರಣ ರಫೇಲ್ ತೀರ್ಪಿನ ಮರುಪರಿಶೀಲನೆಗೆ ಒಪ್ಪಿಕೊಂಡ ಸುಪ್ರೀಂ ಕೋರ್ಟ್ ಆದೇಶನ್ನು ಸ್ವಾಗತಿಸಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತಿನ ಭರದಲ್ಲಿ, "ಚೌಕಿದಾರ ಚೋರ್ ಹೈ" ಎಂದಿದ್ದರು. ಅವರ ಈ ಹೇಳಿಕೆಯ ವಿರುದ್ಧ ಬಿಜೆಪಿ ಹೇರಿದ್ದ ಪ್ರಕರಣದ ತೀರ್ಪೂ ಇದೇ ನವೆಂಬರ್ ನಲ್ಲಿ ಹೊರಬೀಳಲಿದೆ.












Click it and Unblock the Notifications