ಸುಪ್ರೀಂಕೋರ್ಟ್ ಸಮಿತಿಯು ಕೃಷಿ ಕಾನೂನಿನ ಪರವಾಗಿದೆ: ನಾವು ಒಪ್ಪಲ್ಲ ಎಂದ ರೈತ ಸಂಘಟನೆಗಳು
ನವದೆಹಲಿ, ಜನವರಿ 13: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾನೂನುಗಳನ್ನು ತಾತ್ಕಾಲಿಕವಾಗಿ ತಡೆದಿರುವ ಸುಪ್ರೀಂಕೋರ್ಟ್, ಈ ಬಗ್ಗೆ ಚರ್ಚೆ ನಡೆಸಲು ಸಮಿತಿಯೊಂದನ್ನು ರಚಿಸಿರುವುದಾಗಿ ಪ್ರಕಟಿಸಿದೆ. ಆದರೆ ಸುಪ್ರೀಂ ಕೋರ್ಟ್ ರಚಿಸಿರುವ ಸಮಿತಿಯಿ ಕೃಷಿ ಕಾನೂನುಗಳ ಪರವಾಗಿದ್ದು, ನಾವು ಯಾವುದೇ ಸಮಿತಿಯಲ್ಲೂ ಸೇರುವುದಿಲ್ಲ ಎಂದು ಪ್ರತಿಭಟನಾನಿರತ ರೈತ ಸಂಘಟನೆಗಳು ಹೇಳಿವೆ.
ಮಂಗಳವಾರ ಈ ಕುರಿತು ತಿಳಿಸಿರುವ ರೈತ ಸಂಘಟನೆಗಳು ಸುಪ್ರೀಂ ತೀರ್ಪನ್ನು ರೈತರು ಹಾಗೂ ರೈತ ಸಂಘಟನೆಗಳು ಸಂಪೂರ್ಣವಾಗಿ ಒಪ್ಪಿಲ್ಲ, ತಾವು ಯಾವುದೇ ಸಮಿತಿಯಲ್ಲಿ ಸೇರುವುದಿಲ್ಲ ಎಂದಿದ್ದಾರೆ. ಇದಲ್ಲದೆ, ತಾವು ಕಳೆದ ಹಲವು ದಿನಗಳಿಂದ ದೆಹಲಿ ಗಡಿಯಲ್ಲಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಮುಂದುವರಿಸುವುದಾಗಿ ಪುನರುಚ್ಚರಿಸಿದ್ದಾರೆ.
''ನಾವು ಈ ಸಮಿತಿಯನ್ನು ಸ್ವೀಕರಿಸುವುದಿಲ್ಲ, ಈ ಸಮಿತಿಯ ಎಲ್ಲ ಸದಸ್ಯರು ಸರ್ಕಾರದ ಪರವಾಗಿದ್ದಾರೆ ಮತ್ತು ಈ ಸದಸ್ಯರು ಕಾನೂನುಗಳನ್ನು ಸಮರ್ಥಿಸುತ್ತಿದ್ದಾರೆ" ಎಂದು ಪಂಜಾಬ್ ರೈತ ಸಂಘಗಳು ತಿಳಿಸಿವೆ.

ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಜೊತೆಗೆ, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಬದ್ಧಗೊಳಿಸುವ ಭರವಸೆ ಹೊರತುಪಡಿಸಿ ಯಾವುದೇ ಪ್ರಸ್ತಾಪವನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ರೈತರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಕೃಷಿ ಕಾಯ್ದೆಗಳ ವಿವಾದದ ಬಗ್ಗೆ ಚರ್ಚಿಸಲು ಸಮಿತಿಯನ್ನು ರಚಿಸುವುದಾಗಿ ಸುಪ್ರೀಂ ಕೋರ್ಟ್ ಪ್ರಕಟಿಸಿರುವ ಹಿಂದೆ ಕೇಂದ್ರ ಸರ್ಕಾರದ ಕೈವಾಡವಿದೆ ಎಂದು ಎಂದು ರೈತರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರ ನುಣುಚಿಕೊಳ್ಳಲು ಸುಪ್ರೀಂ ಕೋರ್ಟ್ ಮೂಲಕ ಸಮಿತಿ ರಚಿಸಲು ಪ್ರಯತ್ನಿಸುತ್ತಿದೆ ಎಂದು ದೂರಿದ್ದಾರೆ.












Click it and Unblock the Notifications