ಕೊರೊನಾ ಅಂಕಿ ಅಂಶ; ಭಾರತದಲ್ಲಿ ಜನಕ್ಕೂ, ವೈದ್ಯಕೀಯ ಸೇವೆಗಳಿಗೂ ಅಜಗಜಾಂತರ!
ನವದೆಹಲಿ, ಮಾರ್ಚ್ 22: ದೇಶದಲ್ಲಿ ಕೊರೊನಾ ರಣ ಕೇಕೆ ಹಾಕುತ್ತಿದೆ. 300 ಕ್ಕೂ ಹೆಚ್ಚು ಜನರಿಗೆ ಮಾರಕ ಸೋಂಕು ತಗುಲಿ, ಆರು ಜನ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಮುಂದೇನು ಎನ್ನುವ ಕಾರ್ಮೋಡ ಕವಿದಿದೆ.
ದೇಶದಲ್ಲಿ ಒಂದು ವೇಳೆ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾದರೆ ಅದನ್ನು ನಿಬಾಯಿಸಲು ಆಸ್ಪತ್ರೆಗಳು, ವೈದ್ಯಕೀಯ ಸಲಕರಣೆಗಳು ಯಾವ ಮಟ್ಟದಲ್ಲಿ ಇವೆ ಎಂಬುದನ್ನು ನೋಡಬೇಕಾಗುತ್ತದೆ. ಈ ಕುರಿತು ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆ ಬೆಳಕು ಚೆಲ್ಲಿದೆ.
ಕೊರೊನಾ; ಆತಂಕಕಾರಿ ಟ್ವೀಟ್ ಮಾಡಿದ ಕಾಂಗ್ರೆಸ್ ನಾಯಕ
ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳನ್ನು ಪರಿಶೀಲಿಸಿದರೆ, ಬೆಚ್ಚಿ ಬೀಳುವುದು ನಿಜ. ಏಕೆಂದರೆ ದೇಶದಲ್ಲಿ ಜನರ ಸಂಖ್ಯೆ ಹಾಗೂ ಆಸ್ಪತ್ರೆ ಸಂಖ್ಯೆಗೆ ಹೋಲಿಸಿದಾಗ ಅಜಗಜಾಂತರ ಕಂಡು ಬಂದಿದೆ. ಮುಂದೆ ಓದಿ.....
84,000 ಭಾರತೀಯರಿಗೆ ಒಂದು ಐಸೋಲೇಷನ್ ವಾರ್ಡ್
ಕೇಂದ್ರ ಆರೋಗ್ಯ ಸಚಿವಾಲಯ ಸಂಗ್ರಹಿಸಿದ ಮಾಹಿತಿಯ ಪ್ರಕಾರ, 11,600 ಭಾರತೀಯರಿಗೆ ಒಬ್ಬ ವೈದ್ಯ, ಆಸ್ಪತ್ರೆಯಲ್ಲಿ 1,826 ಭಾರತೀಯರಿಗೆ ಒಂದು ಹಾಸಿಗೆ ಸಿಗುತ್ತದೆ. 84,000 ಭಾರತೀಯರಿಗೆ ಒಂದು ಐಸೋಲೇಷನ್ ವಾರ್ಡ್, 36,000 ಭಾರತೀಯರಿಗೆ ಒಂದು ಕ್ಯಾರೆಂಟೈನ್ (ದಿಗ್ಬಂಧನದ) ಹಾಸಿಗೆ ಸಿಗುತ್ತದೆ. ದೇಶದಲ್ಲಿ 1,154,686 ನೋಂದಾಯಿತ ಅಲೋಪತಿ ವೈದ್ಯರು ಮತ್ತು ಸರ್ಕಾರಿ ಆಸ್ಪತ್ರೆಗಳಲ್ಲಿ 7,39,024 ಹಾಸಿಗೆಗಳಿವೆ. ಈ ಅಂಕಿ ಸಂಖ್ಯೆಗಳನ್ನು ನೋಡಿದರೆ, ಕೊರೊನಾ ಭಾರತದಲ್ಲಿ ಮುಂದಿನ ಹಂತಕ್ಕೆ ಹೋದರೆ ಏನಾಗಬಹುದು ಎಂಬುದನ್ನು ಊಹಿಸಿಕೊಳ್ಳಿ.
ಆರೋಗ್ಯ ಕ್ಷೇತ್ರದ ಮೇಲೆ ಹೊರೆ ತಗ್ಗಿಸಲು
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನತಾ ಕರ್ಫ್ಯೂಗೆ ಮನವಿ ಮಾಡಿರುವುದು ಸರಿಯಾಗಿಯೇ ಇದೆ. ಇದಕ್ಕೆ ಪ್ರಮುಖ ಕಾರಣವೇ ಕೇಂದ್ರ ಆರೋಗ್ಯ ಸಚಿವಾಲಯ ಸಂಗ್ರಹಿಸಿದ ಅಂಕಿ ಅಂಶಗಳು. ಸಾರ್ವಜನಿಕ ಆರೋಗ್ಯ ಹಾಗೂ ಮೂಲಸೌಕರ್ಯಗಳ ಮೇಲೆ ಹೊರೆಯನ್ನು ಕಡಿತಗೊಳಿಸಿ, ಕೊರೊನಾವನ್ನು ತಡೆಗಟ್ಟುವ ಉದ್ದೇಶದಿಂದಲೇ ಜನತಾ ಕರ್ಫ್ಯೂ ಜಾರಿಯಾಗಿದೆ.
2 ನೇ ಹಂತದಲ್ಲಿದ್ದೇವೆ
ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ (ಐಸಿಎಂಆರ್) ನಿರ್ದೇಶಕ ಅನುರಾಗ್ ಅಗರ್ವಾಲ್ ಅವರು, 'ನಾವು ಕೊರೊನಾ ಪ್ರಸರಣದ 2 ನೇ ಹಂತದಲ್ಲಿದ್ದೇವೆ. ಈ ಹಂತದಲ್ಲಿ ಜನತಾ ಕರ್ಫ್ಯೂ ಬಹಳ ಪರಿಣಾಮಕಾರಿಯಾಗಿದೆ. 3 ನೇ ಹಂತಕ್ಕೆ ಲಾಕ್ಡೌನ್ ಬೇಕೆಬೇಕು. ಪ್ರಸ್ತುತ ಮಾಹಿತಿಯ ಆಧಾರದ ಮೇಲೆ, ಕೇಂದ್ರ ಸರ್ಕಾರ ಸರಿಯಾದ ಕೆಲಸವನ್ನು ಮಾಡುತ್ತಿದೆ ಎಂದು ಹೇಳುತ್ತಾರೆ.
ಪ್ರತ್ಯೇಕ ವಾರ್ಡ್ಗಳ ಹೆಚ್ಚಳ
ಮೋದಿಯವರು ಶುಕ್ರವಾರ ಮುಖ್ಯಮಂತ್ರಿಗಳು ಮತ್ತು ರಾಜ್ಯ ಆರೋಗ್ಯ ಮಂತ್ರಿಗಳೊಂದಿಗೆ ನಡೆಸಿದ ಸಭೆಯಲ್ಲಿ, ಐಸಿಎಂಆರ್ ಡಿಜಿ ಡಾ. ಬಲರಾಮ್ ಭಾರ್ಗವ ಅವರು, ಪ್ರಸ್ತುತ ಕೊರೊನಾ ದೇಶದಲ್ಲಿ ಎರಡನೇ ಹಂತದಲ್ಲಿದೆ. ಮೂರನೇ ಹಂತಕ್ಕೆ ಹೋಗುವ ಎಲ್ಲ ಸೂಚನೆಗಳಿವೆ. ಈಗಲೇ ಏನನ್ನಾದರೂ ಮಾಡಲೇಬೇಕು ಎಂದು ಹೇಳಿದ್ದರು. ಅಲ್ಲದೇ ಪ್ರತ್ಯೇಕ ವಾರ್ಡ್ಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು ಎಂದು ಒತ್ತಿ ಹೇಳಿದ್ದರು.