ದೆಹಲಿ: ಏಮ್ಸ್ನ ಹಿರಿಯ ವೈದ್ಯರೊಬ್ಬರು ಕೊರೊನಾ ವೈರಸ್ಗೆ ಬಲಿ
ನವದೆಹಲಿ, ಮೇ 25: ದೆಹಲಿಯ ಆಲ್ ಇಂಡಿಯಾ ಇನ್'ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್'ನ ಹಿರಿಯ ವೈದ್ಯರೊಬ್ಬರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆಂದು ತಿಳಿದುಬಂದಿದೆ.
ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದ್ದ ಪ್ರೀಮಿಯರ್ ಆಸ್ಪತ್ರೆಯ ಮುಖ್ಯಸ್ಥರಾಗಿದ್ದ ಡಾ.ಜಿತೇಂದ್ರ ನಾಥ್ ಪಾಂಡೆ ಕೊರೋನಾಗೆ ಬಲಿಯಾದ ಹಿರಿಯ ವೈದ್ಯರಾಗಿದ್ದಾರೆ. ವೈದ್ಯರ ಆರೋಗ್ಯವನ್ನು ಪ್ರತೀನಿತ್ಯ ತಪಾಸಣೆ ಮಾಡಲಾಗುತ್ತಿತ್ತು. ಆರೋಗ್ಯ ಸುಧಾರಿಸುತ್ತಿತ್ತು. ಆದರೆ, ನಿನ್ನೆ ರಾತ್ರಿ ಊಟ ಮಾಡಿದ ಬಳಿಕ ಮಲಗಿದ್ದ ಅವರು, ಕೊನೆಯುಸಿರೆಳೆದಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಾಂಡೆಯವರ ನಿಧನ ಅತ್ಯಂತ ದುಃಖ ತರಿಸಿದೆ ಎಂದು ಹಿರಿಯ ವೈದ್ಯ ಡಾ.ಸಂಗೀತಾ ರೆಡ್ಡಿ ಟ್ವೀಟ್ ಮಾಡಿದ್ದಾರೆ. ಜಿತೇಂದ್ರ ನಾಥ್ ಪಾಂಡೆ ಮತ್ತು ಅವರ ಪತ್ನಿಗೂ ಕಳೆದ ಮಂಗಳವಾರ ಕೊರೊನಾದ ಕೆಲ ಲಕ್ಷಣಗಳು ಕಾಣಿಸಿಕೊಂಡಿದ್ದವು. ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊರೊನಾ ಪಾಸಿಟಿವ್ ಬಂದಿತ್ತು.

ನಂತರ ಅವರನ್ನು ಮನೆಯಲ್ಲೇ ಹೋಂ ಕ್ವಾರಂಟೈನ್ ಮಾಡಲಾಗಿತ್ತು. ಇತ್ತೀಚೆಗೆ ಅವರು ರೋಗದಿಂದ ಗುಣಮುಖರಾಗುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದರು ಎಂದು ಏಮ್ಸ್ ಆಸ್ಪತ್ರೆಯ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಮಾಹಿತಿ ನೀಡಿದ್ದಾರೆ.
ಈ ವಿಚಾರವಾಗಿ ಮಾತನಾಡಿರುವ ಗುಲೇರಿಯಾ, ಕೊರೊನಾ ಸೋಂಕು ಪಾಂಡೆಯವರಿಗೆ ಪಾಸಿಟಿವ್ ಬಂದ ನಂತರ ನಾವು ಅವರ ಆರೋಗ್ಯದ ಬಗ್ಗೆ ವಿಚಾರಿಸುತ್ತಲೇ ಇದ್ದೇವು. ಇತ್ತೀಚೆಗಷ್ಟೇ ಪಾಂಡೆಯವರೇ ಸೋಂಕಿನಿಂದ ನಾನು ಗುಣಮುಖನಾಗುತ್ತಿದ್ದೇನೆ.
ಬಹುಬೇಗ ಆಸ್ಪತ್ರೆಗೆ ಬರುತ್ತೇನೆ ಎಂದು ಹೇಳಿದ್ದರು. ಆದರೆ ಶನಿವಾರ ರಾತ್ರಿ ಊಟ ಮಾಡಿ ಮಲಗಿದವರು ಅಲ್ಲೇ ಸಾವನ್ನಪ್ಪಿದ್ದಾರೆ. ಅವರು ಹೃದಯಾಘಾತದಿಂದ ಸಾವನ್ನಪ್ಪಿರಬಹುದು ಎಂದು ಹೇಳಿದ್ದಾರೆ.
ಪಾಂಡೆ ಸಾವಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಏಮ್ಸ್ನ ಹಿರಿಯ ಮಹಿಳಾ ವೈದ್ಯೆ ಡಾ.ಸಂಗೀತಾ ರೆಡ್ಡಿ, ಈ ರೋಗವು ಅತ್ಯಂತ ಪ್ರಸಿದ್ಧ ವೈದ್ಯನನ್ನು ಬಲಿ ಪಡೆದುಕೊಂಡಿದೆ.
ಒಬ್ಬ ಪ್ರಖ್ಯಾತ ಶ್ವಾಸಕೋಶಶಾಸ್ತ್ರ ತಜ್ಞ ವೈದ್ಯ ಕೊರೊನಾಗೆ ಬಲಿಯಾದರು ಎಂದು ಕೇಳಿ ತುಂಬ ದುಖಃವಾಗಿದೆ. ಅವರ ಕುಟುಂಬಕ್ಕೆ ಅವರ ಸಾವನ್ನು ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಬರೆದುಕೊಂಡಿದ್ದಾರೆ.












Click it and Unblock the Notifications