ಹಳೆಯ ಕನಸೊಂದನ್ನು ನನಸು ಮಾಡಿದಿರಿ : ಎಲ್.ಕೆ.ಅಡ್ವಾಣಿ ಸಂತಸ
ನವದೆಹಲಿ, ಆಗಸ್ಟ್ 05: ಬಿಜೆಪಿ ಸರ್ಕಾರದ ಸಾಧನೆಗೆ ಬಿಜೆಪಿ ಹಿರಿಯ ಎಲ್.ಕೆ.ಅಡ್ವಾಣಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡುವ 370ನೇ ವಿಧಿಯನ್ನು ರದ್ದು ಮಾಡುವ ತೀರ್ಮಾನವನ್ನು ಇಂದು ಮೋದಿ ಸರ್ಕಾರ ಕೈಗೊಂಡಿದೆ. ಇದಕ್ಕೆ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸಂತಸ ವ್ಯಕ್ತಪಡಿಸಿದ್ದಾರೆ.
ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು : ಯಾರು, ಏನು ಹೇಳಿದರು?
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಎಲ್.ಕೆ.ಅಡ್ವಾಣಿ, 'ಸರ್ಕಾರವು 370ನೇ ವಿಧಿಯನ್ನು ಕಿತ್ತೊಗೆದದ್ದು ಸಂತಸದ ವಿಷಯ. ರಾಷ್ಟ್ರೀಯ ಏಕತೆಯನ್ನು ಸುಭದ್ರಗೊಳಿಸುವೆಡೆ ಇದು ಅತ್ಯಂತ ಪ್ರಮುಖ ಹೆಜ್ಜೆ ಎಂದು ಅವರು ಹೇಳಿದ್ದಾರೆ.
370ನೇ ವಿಧಿಯನ್ನು ರದ್ದು ಮಾಡುವುದು ಬಿಜೆಪಿಯ ಹಳೆಯ ನಿರ್ಧಾರವಾಗಿತ್ತು. ಬಿಜೆಪಿಯು ಜನ ಸಂಘ ಆಗಿದ್ದಾಗಿನಿಂದಲೂ ನಾವು 370 ವಿರುದ್ಧ ಹೋರಾಟ ಮಾಡುತ್ತಲೇ ಇದ್ದೆವು ಎಂದು ಅಡ್ವಾಣಿ ಹೇಳಿದ್ದಾರೆ.
'ಈ ಐತಿಹಾಸಿಕ ನಿರ್ಣಯಕ್ಕೆ ನಾನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹಾಗೆಯೇ ಜಮ್ಮು ಕಾಶ್ಮೀರ ಮತ್ತು ಲಡಾಕ್ನಲ್ಲಿ ಶಾಂತಿ ನೆಲೆಸಲಿ ಎಂದು ನಾನು ಪ್ರಾರ್ಥಿಸುತ್ತೇನೆ' ಎಂದು ಎಲ್.ಕೆ.ಅಡ್ವಾಣಿ ಹೇಳಿದ್ದಾರೆ.