ಭಿಕ್ಷುಕರಿಗೆ ಲಸಿಕೆ, ಪುನರ್ವಸತಿ ಒದಗಿಸುವಂತೆ ಅರ್ಜಿ: ಕೇಂದ್ರಕ್ಕೆ ಸುಪ್ರೀಂ ನೋಟಿಸ್
ನವದೆಹಲಿ, ಜುಲೈ 27: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಭಿಕ್ಷುಕರಿಗೂ ಕೊರೊನಾ ಲಸಿಕೆ ಹಾಗೂ ಪುನರ್ವಸತಿ ಕಲ್ಪಿಸಿಕೊಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿಯ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್ ನೋಟಿಸ್ ನೀಡಿದೆ.
ಈ ಕುರಿತು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಡಿ.ವೈ. ಚಂದ್ರಚೂಡ್ ಮತ್ತು ಎಂ.ಆರ್ ಶಾ ಅವರ ಪೀಠವು, ಶಿಕ್ಷಣ ಮತ್ತು ಉದ್ಯೋಗದ ಕೊರತೆಯಿಂದಾಗಿ ಕೆಲವರು ಭಿಕ್ಷೆಗಾಗಿ ರಸ್ತೆಗಿಳಿಯುತ್ತಾರೆ. ಇದು ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಯಾಗಿದೆ. ಹಾಗಾಗಿ ಯಾವುದೇ ಭಿಕ್ಷುಕನನ್ನು ರಸ್ತೆಗಿಳಿಯದಂತೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
ಕೊರೊನಾ ಸೋಂಕಿನ ಸಂದರ್ಭದಲ್ಲಿ ಭಿಕ್ಷುಕರು ಮತ್ತು ಅಲೆಮಾರಿಗಳಿಗಾಗಿ ವಸತಿ, ಆಹಾರವನ್ನು ಒದಗಿಸಬೇಕು, ಲಸಿಕೆಯನ್ನು ನೀಡಬೇಕು ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

ಈ ವಿಷಯದಲ್ಲಿ ಏನು ಮಾಡಬಹುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಸಲಹೆ ನೀಡಿಬಹುದು ಎಂದ ಪೀಠವು, ಈ ಬಗ್ಗೆ ಎರಡು ವಾರಗಳೊಳಗೆ ಪ್ರತಿಕ್ರಿಯಿಸುವಂತೆ ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ.
ಮನೆಯಿಲ್ಲದವರು, ಭಿಕ್ಷುಕರಿಗೆ ಎಲ್ಲವನ್ನೂ ಸರ್ಕಾರ ನೀಡಲು ಸಾಧ್ಯವಿಲ್ಲ, ಅವರೂ ದುಡಿಯಬೇಕು ಎಂದು ಬಾಂಬೆ ಹೈಕೋರ್ಟ್ ಇತ್ತೀಚೆಗಷ್ಟೇ ಹೇಳಿತ್ತು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ವಿಲೇವಾರಿ ಮಾಡುವ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ದೀಪಾಂಕರ್ ದತ್ತಾ ಹಾಗೂ ನ್ಯಾ. ಜಿಎಸ್ ಕುಲಕರ್ಣಿ ನೇತೃತ್ವದ ಪೀಠವು ಈ ಹೇಳಿಕೆ ನೀಡಿದೆ.
ಬ್ರಿಜೇಶ್ ಆರ್ಯ ಎಂಬುವರು ಸಲ್ಲಿಸಿದ ಅರ್ಜಿಯಲ್ಲಿ ಮುಂಬೈ ಮಹಾನಗರ ಪಾಲಿಕೆಯು ಮನೆ ಇಲ್ಲದವರಿಗೆ ಮತ್ತು ಭಿಕ್ಷುಕರಿಗೆ ದೈನಂದಿನ ಮೂರು ಹೊತ್ತು ಪೋಷಕಾಂಶಯುಕ್ತ ಆಹಾರ, ನೀರು, ವಸತಿ ಹಾಗೂ ಸಾರ್ವಜನಿಕ ಶೌಚಾಲಯ ಒದಗಿಸಬೇಕು ಎಂದು ಉಲ್ಲೇಖಿಸಲಾಗಿತ್ತು.
ಎನ್ಜಿಒಗಳ ಸಹಾಯದಿಂದ ಮುಂಬೈನಾದ್ಯಂತ ನಿರ್ಗತಿಕರಿಗೆ ಹಾಗೂ ವಸತಿ ಇಲ್ಲದವರಿಗೆ ಆಹಾರದ ಪೊಟ್ಟಣಗಳನ್ನು ಮಹಾನಗರ ಪಾಲಿಕೆ ಈಗಾಗಲೇ ವಿತರಿಸುತ್ತಿದೆ.












Click it and Unblock the Notifications