ಸಲ್ಮಾನ್ ಗೆ ಮಧ್ಯಾಹ್ನ ಜೈಲ್, ಸಂಜೆ ಬೇಲ್ ಏಕೆ?
ನವದೆಹಲಿ, ಮೇ.7: 2002ರ ಹಿಟ್ ಅಂಡ್ ರನ್ ಕೇಸಿನಲ್ಲಿ ಅಪರಾಧಿ ಎನಿಸಿರುವ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಜೈಲು, ಬೇಲ್ ಎರಡು ಮೂರು ಗಂಟೆಯೊಳಗೆ ಸಿಕ್ಕಿದ್ದು ಹೇಗೆ? ಎಂದು ಜನ ಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ. ಇದೇ ವಿಷಯವನ್ನು ವಕೀಲರೊಬ್ಬರು ಸುಪ್ರೀಂಕೋರ್ಟಿಗೆ ಎಳೆದಿದ್ದಾರೆ. ಸಲ್ಮಾನ್ ಗೆ ಮಧ್ಯಂತರ ಜಾಮೀನು ಸಿಕ್ಕಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಪಿಟೀಷನ್ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ 304 II ಅಡಿಯಲ್ಲಿ ಪ್ರಕರಣ ದಾಖಲಾಗಿ ವಿಚಾರಣೆ ನಡೆದ ಕಾರಣ ಸಲ್ಮಾನ್ ಖಾನ್ ಅವರು 10 ವರ್ಷ ಶಿಕ್ಷೆ ಭೀತಿಯಲ್ಲಿದ್ದರು. ಅದರೆ, ಸಲ್ಮಾನ್ ಪರ ವಕೀಲ ಶ್ರೀಕಾಂತ್ ಶಿವಾಡೆ ಮಂಡಿಸಿದ ವಾದ ಅವರ ಶಿಕ್ಷೆ ಪ್ರಮಾಣವನ್ನು ತಗ್ಗಿಸಿದೆ. ಸಲ್ಮಾನ್ ಖಾನ್ ಅವರ 'ಬೀಯಿಂಗ್ ಹ್ಯೂಮನ್' ಸಂಸ್ಥೆ ಕೈಗೊಂಡಿರುವ ಸಾಮಾಜಿಕ ಕಳಕಳಿ ಕಾರ್ಯಗಳು ಅವರಿಗೆ ಸ್ವಲ್ಪ ರಿಲೀಫ್ ನೀಡಿದೆ. [ಎರಡು ಹೊತ್ತು ಊಟಕ್ಕೂ ಕಷ್ಟವಾಗಿದೆ : ಸತ್ತ ನೂರುಲ್ಲಾ ಪತ್ನಿ]

ಸೆಷನ್ಸ್ ಕೋರ್ಟಿನಲ್ಲಿ ಐದು ವರ್ಷ ಶಿಕ್ಷೆ ಪಡೆದ ಸಲ್ಮಾನ್ ಖಾನ್ ಅವರು ಬುಧವಾರ ಸಂಜೆ ಜಾಮೀನು ಕೋರಿ ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದರು. ಅರ್ಜಿ ವಿಚಾರಣೆಯಾಗಿ 2 ದಿನಗಳ ಮಟ್ಟಿಗೆ ಮಧ್ಯಂತರ ಜಾಮೀನು ಮಂಜೂರಾಗಿತ್ತು. ಶುಕ್ರವಾರ (ಮೇ.8) ಬಾಂಬೆ ಹೈಕೋರ್ಟ್ ನಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ ಎಂದು ಹೈಕೋರ್ಟ್ ಜಸ್ಟೀಸ್ ಅಭಯ್ ತಿಪ್ಸೆ ಆದೇಶದಲ್ಲಿ ಹೇಳಿದ್ದಾರೆ.
ಈ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಹಾಕಲಾಗಿದೆ. ಜೊತೆಗೆ ಸೆಷನ್ಸ್ ಕೋರ್ಟ್ ಜಡ್ಜ್ ಡಬ್ಲ್ಯೂ ಡಿ ದೇಶಪಾಂಡೆ ನೀಡಿರುವ 5 ವರ್ಷ ಶಿಕ್ಷೆ ಆದೇಶ ರದ್ದುಕೋರಿ ಸಲ್ಮಾನ್ ಖಾನ್ ಪರ ವಕೀಲ ಶ್ರೀಕಾಂತ್ ಶಿವಾಡೆ ಅವರು ಅರ್ಜಿ ಸಲ್ಲಿಸಲಿದ್ದಾರೆ. ಹೀಗಾಗಿ ಸುಪ್ರೀಂಕೋರ್ಟಿನಲ್ಲಿ ಕಾನೂನು ಸಮರ ಮುಂದುವರೆಯಲಿದೆ. (ಒನ್ ಇಂಡಿಯಾ ಸುದ್ದಿ)












Click it and Unblock the Notifications