ಶ್ರಮಿಕ್ ರೈಲುಗಳಿಗೂ ಕೆಂಪು ಬಾವುಟ ತೋರಿದರಾ ಮಮತಾ ಬ್ಯಾನರ್ಜಿ?
ನವದೆಹಲಿ, ಮೇ.14: ನೊವೆಲ್ ಕೊರೊನಾ ವೈರಸ್ ಮತ್ತು ಭಾರತ ಲಾಕ್ ಡೌನ್ ನಡುವೆ ತವರು ಸೇರಲು ಹಾತೊರೆಯುತ್ತಿರುವ ವಲಸೆ ಕಾರ್ಮಿಕರನ್ನು ಗೂಡು ಸೇರಸಲು ಭಾರತೀಯ ರೈಲ್ವೆ ಇಲಾಖೆಯು ಶ್ರಮಿಕ್ ರೈಲುಗಳ ಸಂಚಾರಕ್ಕೆ ಅನುಮತಿ ನೀಡಿದೆ.
ದೇಶದಲ್ಲೇ ಇರುವ ಕೆಲವು ರಾಜ್ಯಗಳು ಶ್ರಮಿಕ್ ರೈಲುಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವುದು ಮನಸಿಗೆ ತುಂಬಾ ನೋವು ತರಿಸಿದೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಬೇಸರ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಬಂಗಾಳ ಸರ್ಕಾರವು ಮೊದಲ ಎರಡು ಶ್ರಮಿಕ್ ರೈಲುಗಳ ಪ್ರವೇಶಕ್ಕೆ ಮಾತ್ರ ಅನುಮತಿ ನೀಡಿದೆ. ಕೇಂದ್ರ ಗೃಹ ಸಚಿವಾಲಯವು ಪತ್ರ ಬರೆದ ನಂತರ ಹೆಚ್ಚುವರಿಯಾಗಿ ಎಂಟು ಶ್ರಮಿಕ್ ರೈಲುಗಳ ಪ್ರವೇಶಕ್ಕೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅನುಮತಿ ನೀಡಿದ್ದರು ಎಂದು ಗೋಯೆಲ್ ತಿಳಿಸಿದ್ದಾರೆ.

ಐದು ರೈಲುಗಳ ರಾಜ್ಯ ಪ್ರವೇಶಕ್ಕೆ ಅನುಮತಿ
ಕೇಂದ್ರ ಗೃಹ ಸಚಿವಾಲಯವು ಪತ್ರ ಬರೆದ ನಂತರದಲ್ಲಿ ಸಿಎಂ ಮಮತಾ ಬ್ಯಾನರ್ಜಿ ಎಂಟು ಶ್ರಮಿಕ್ ರೈಲುಗಳ ಪ್ರವೇಶಕ್ಕೆ ರಾಜ್ಯದಲ್ಲಿ ಅನುಮತಿ ನೀಡಿದ್ದರು. ಆದರೆ ಗುರುವಾರ ಮಧ್ಯಾಹ್ನದವರೆಗೂ ಐದು ವಿಶೇಷ ಶ್ರಮಿಕ್ ರೈಲುಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದ ಮೂರು ರೈಲುಗಳಿದೆ ನಿರ್ಬಂಧ ವಿಧಿಸಿದ್ದಾರೆ ಎಂದು ಪಿಯೂಷ್ ಗೋಯೆಲ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರಕ್ಕೆ ಪಿಯೂಶ್ ಗೋಯೆಲ್ ಮನವಿ
ಭಾರತ ಲಾಕ್ ಡೌನ್ ನಡುವೆ ಗೂಡು ಬಿಟ್ಟ ಹಕ್ಕಿಯಂತೆ ಆಗಿರುವ ವಲಸೆ ಕಾರ್ಮಿಕರನ್ನು ಪಶ್ಚಿಮ ಬಂಗಾಳಕ್ಕೆ ವಾಪಸ್ ಕಳುಹಿಸುವ ನಿಟ್ಟಿನಲ್ಲಿ ಕಾರ್ಯವನ್ನು ಮಾಡಲಾಗುತ್ತಿದೆ. ಪಶ್ಚಿಮ ಬಂಗಾಳ ಸರ್ಕಾರವು ಇದಕ್ಕೆ ಸಹಕಾರ ನೀಡಬೇಕು ಎಂದು ಸಚಿವ ಪಿಯೂಶ್ ಗೋಯೆಲ್ ಮನವಿ ಮಾಡಿಕೊಂಡಿದ್ದಾರೆ.

"50 ರೈಲುಗಳ ಪ್ರವೇಶಕ್ಕೆ ಅನುಮತಿ ನೀಡಿ"
ಪಶ್ಚಿಮ ಬಂಗಾಳ ಮೂಲದ ವಲಸೆ ಕಾರ್ಮಿಕರನ್ನು ಮರಳಿ ಕಳುಹಿಸಲು ಶ್ರಮಿಕ್ ರೈಲುಗಳ ವ್ಯವಸ್ಥೆ ಕಲ್ಪಿಸಲಾಗಿದೆ. 30 ದಿನಗಳ ಕಾಲ ಒಟ್ಟು 105 ರೈಲುಗಳು ಸಂಚರಿಸಲು ಪಶ್ಚಿಮ ಬಂಗಾಳ ಸರ್ಕಾರವು ಅನುಮತಿ ನೀಡಬೇಕು ಎಂದು ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಮನವಿ ಮಾಡಿಕೊಂಡಿದ್ದಾರೆ.

ನಾಲ್ಕು ರಾಜ್ಯಗಳಿಂಗ ಶ್ರಮಿಕ್ ರೈಲಿಗೆ ನಿರ್ಬಂಧ
ಇನ್ನು, ಪಶ್ಚಿಮ ಬಂಗಾಳ ಸರ್ಕಾರವಷ್ಟೇ ಅಲ್ಲ. ಛತ್ತೀಸ್ ಗಢ್, ಜಾರ್ಖಂಡ್, ರಾಜಸ್ಥಾನ್ ಸರ್ಕಾರಗಳಿಂದಲೂ ಶ್ರಮಿಕ್ ರೈಲುಗಳ ಪ್ರವೇಶಕ್ಕೆ ವಿರೋಧ ವ್ಯಕ್ತವಾಗಿದೆ. ಕಾರ್ಮಿಕರನ್ನು ವಾಪಸ್ ಕರೆಸಿಕೊಳ್ಳಲು ಹೀಗೆ ಹಿಂದುಮುಂದು ನೋಡುವುದೇಕೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯೆಲ್ ಪ್ರಶ್ನೆ ಮಾಡಿದ್ದಾರೆ.












Click it and Unblock the Notifications