'RSS, ಬಿಜೆಪಿಯವರ ನುಡಿಯಲ್ಲಿ ರಾಮ, ನಡೆಯಲ್ಲಿ ನಾಥೂರಾಮ!'
ನವದೆಹಲಿ, ಅಕ್ಟೋಬರ್ 04: "ಆರೆಸ್ಸೆಸ್ ಮತ್ತು ಬಿಜೆಪಿಯವರಿಗೆ ಚುನಾವಣೆ ಹತ್ತಿರಬಂದಾಗ ಮಾತ್ರ ರಾಮ ನೆನಪಾಗುತ್ತಾನೆ. ಅವರ ನುಡಿಯಲ್ಲಿ ರಾಮನಿದ್ದಾನಷ್ಟೇ, ನಡೆಯಲ್ಲಿ ನಾಥುರಾಮನಿದ್ದಾನೆ" ಎಂದು ಕಾಂಗ್ರೆಸ್ ವಕ್ತಾರ ರಂದೀಪ್ ಸುರ್ಜೇವಾಲ ಆರೆಸ್ಸೆಸ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಮಜನ್ಮಭೂಮಿ ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಿಸುವುದನ್ನು ಯಾವ ಪಕ್ಷಗಳೂ ನೇರವಾಗಿ ವಿರೋಧಿಸಿಲ್ಲ ಎಂದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಗೆ ಅವರು ಪ್ರತಿಕ್ರಿಯೆ ನೀಡಿದರು.
"ಮಳೆ ಬಂದಾಗ ಕಪ್ಪೆಗಳು ಕೂಗುತ್ತವೆ. ಆಮೇಲೆ ಸುಮ್ಮನಾಗುತ್ತವೆ. ಹಾಗೆಯೇ ಆರೆಸ್ಸಿಗರು ಚುನಾವಣೆ ಹತ್ತಿರವಾದಾಗ ರಾಮ ಮಂದಿರದ ಬಗ್ಗೆ ಮಾತನಾಡುತ್ತಾರೆ. ಆಮೇಲೆ ಅದರ ಸುದ್ದಿ ಎತ್ತುವುದಿಲ್ಲ" ಎಂದರು.
ರಾಮ ಮಂದಿರ ನಿರ್ಮಾಣದ ವಿಷಯವನ್ನು ಬಿಜೆಪಿಗೆ ಚುನಾವಣಾ ಪ್ರಚಾರದ ಸಾಧನವಾಗಿ ಬಳಸುತ್ತಿದೆ ಎಂದು ಅವರು ದೂರಿದರು.

ನುಡಿಯಲ್ಲಿ ರಾಮ, ನಡೆಯಲ್ಲಿ ನಾಥೂರಾಮ!
"ಸತ್ಯಯುಗದಲ್ಲಿ ಒಂದು ಕಾಲದಲ್ಲಿ ಕೈಕೇಯಿ ಎಂಬುವವಳು ರಾಮನನ್ನು 16 ವರ್ಷ ವನವಾಸಕ್ಕೆ ಕಳಿಸಿದಳು. ಈಗ ಕಲಿಯುಗದಲ್ಲಿ ಬಿಜೆಪಿ ಮತ್ತು ಆರೆಸ್ಸೆಸ್ 30 ವರ್ಷಗಳ ಕಾಲ ರಾಮನನ್ನು ವನವಾಸಕ್ಕೆ ಕಳಿಸಿದೆ. ಪ್ರತಿ ಚುನಾವಣೆಯ ನಂತರವೂ ಅವರು ರಾಮನನ್ನು ವನವಾಸಕ್ಕೆ ಕಳಿಸುತ್ತಾರೆ, ಮತ್ತು ಚುನಾವಣೆಗೆ ನಾಲ್ಕು ತಿಂಗಳು ಬಾಕಿ ಇರುವಾಗ ವಾಪಸ್ ಕರೆಸಿಕೊಳ್ಳುತ್ತಾರೆ ಬಿಜೆಪಿ ಮತ್ತು ಆರೆಸ್ಸೆಸ್ ನ ಸ್ವಭಾವ ಹೇಗೆ? ಅವರ ನುಡಿಯಲ್ಲಿ ರಾಮನಿದ್ದಾನೆ, ನಡೆಯಲ್ಲಿ 'ನಾಥೂರಾಮ'ನಿದ್ದಾನೆ! ಇದು ಸತ್ಯ" - ರಂದೀಪ್ ಸುರ್ಜೇವಾಲಾ

ಕಲಿಯುಗದ ಕೈಕೇಯಿ ಬಿಜೆಪಿ-ಆರೆಸ್ಸೆಸ್!
"ಬಿಜೆಪಿ ಮತ್ತು ಆರೆಸ್ಸೆಸ್ ಕಲಿಯುಗದ ಕೈಕೇಯಿ ಇದ್ದಂತೆ! ಚುನಾವಣೆಗೆ ನಾಲ್ಕು ತಿಂಗಳ ಮೊದಲು ಅವರಿಗೆ ರಾಮ ನೆನಪಾಗುತ್ತಾನೆ. ಚುನಾವಣೆ ಮುಗಿಯುತ್ತಿದ್ದಂತೆಯೇ ರಾಮನನ್ನು ಅವರು ಗಡಿಪಾರು ಮಾಡುತ್ತಾರೆ" -ರಂದೀಪ್ ಸುರ್ಜೇವಾಲಾ

ರಾಮ ಎಲ್ಲೆಲ್ಲೂ ಇದ್ದಾನೆ
"ಮಳೆಗಾಲದಲ್ಲಿ ಕಪ್ಪೆಗಳು ಕೂಗುವಂತೆ, ಚುನಾವಣೆಯ ಸಮಯದಲ್ಲಿ ಕೆಲವರು ಸುಮ್ಮನೆ ಕೂಗುತ್ತಾರೆ. ಆದರೆ ಚುನಾವಣೆ ಮುಗಿದ ಮೇಲೆ ಸತ್ಯವೇನು ಎಂಬುದು ಅರ್ಥವಾಗುತ್ತದೆ. ರಾಮ ಈ ದೇಶದಲ್ಲಿ ಎಲ್ಲೆಡೆಯೂ ಇದ್ದಾನೆ. ಆತ ಎಲ್ಲರಿಗೂ ಬೇಕಾದವನು. ಆರೆಸ್ಸೆಸ್, ಬಿಜೆಪಿಯ ಸ್ವತ್ತಲ್ಲ" - ರಂದೀಪ್ ಸುರ್ಜೇವಾಲಾ

ಸುಪ್ರೀಂ ತೀರ್ಪಿಗೆ ಕಾಂಗ್ರೆಸ್ ಬದ್ಧ
"ರಾಮ ಜನ್ಮಭೂಮಿ ಮತ್ತು ಬಾಬ್ರಿಮಸೀದಿ ಪ್ರಕರಣಗಳು ಸುಪ್ರೀಂ ಕೋರ್ಟಿನಲ್ಲಿದೆ. ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡುತ್ತದೋ ಅದಕ್ಕೆ ಸರ್ಕಾರ ಬದ್ಧವಾಗಿರಬೇಕು. ಆದ್ದರಿಂದ ಈ ಕುರಿತು ಕಾಂಗ್ರೆಸ್ ಯಾವುದೇ ಹೇಳಿಕೆ ನೀಡುವುದಕ್ಕೂ ಇಷ್ಟಪಡುವುದಿಲ್ಲ"- ರಂದೀಪ್ ಸುರ್ಜೇವಾಲಾ












Click it and Unblock the Notifications