ನವದೆಹಲಿಯ ಕರ್ನಾಟಕ ಭವನದಲ್ಲಿ 63ನೇ ಕರ್ನಾಟಕ ರಾಜ್ಯೋತ್ಸವ
ನವದೆಹಲಿ, ನವೆಂಬರ್ 02 : ರಾಷ್ಟ್ರದ ರಾಜಧಾನಿಯಲ್ಲಿ ಕರ್ನಾಟಕ ಭವನದಲ್ಲಿ 63ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರ ಆಯೋಜಿಸುವ ಮೂಲಕ ಸಾರ್ಥಕವಾಗಿ ರಾಜ್ಯೋತ್ಸವ ಆಚರಿಸಲಾಯಿತು.
ಕೌಟಿಲ್ಯ ಮಾರ್ಗದಲ್ಲಿರುವ ಕರ್ನಾಟಕ ಭವನದಲ್ಲಿ ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಸಯ್ಯದ್ ಮೊಹಿದ್ ಅಲ್ತಾಫ್ ಅವರು ಧ್ವಜಾರೋಹಣ ಮಾಡಿ, ಭುವನೇಶ್ವರಿ ದೇವಿಯ ಪೂಜೆ ಮಾಡಿದರು. ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಹಾಗೂ ಆಯುಕ್ತರಾದ ನಿಲಯ ಮಿತಾಶ್ ಹಾಗೂ ಕರ್ನಾಟಕ ಭವನದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. 40ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಹಾಗೂ ಪತ್ರಕರ್ತರು ರಕ್ತದಾನ ಮಾಡಿದರು. ಆಯೋಜಿಸಲಾಗಿದ್ದ ಉಚಿತ ನೇತ್ರ ತಪಾಸಣಾ ಶಿಬಿರದ ಪ್ರಯೋಜನವನ್ನು ಸಹ ಸಿಬ್ಬಂದಿಯವರು ಪಡೆದುಕೊಂಡರು. ಕರ್ನಾಟಕ ಭವನದ ವೈದ್ಯಾಧಿಕಾರಿ ಡಾ.ಕಾರ್ತಿಕ್ ಅವರ ನೇತೃತ್ವದಲ್ಲಿ ರಕ್ತದಾನ ಹಾಗೂ ಉಚಿತ ನೇತ್ರ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದವರನ್ನು ರಂಜಿಸಿದವು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ ಸಯ್ಯದ್ ಮೊಹಿದ್ ಅಲ್ತಾಫ್ ಅವರು, ವಿಶೇಷ ಅತಿಥಿಗಳಾಗಿ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ವಸಂತ ಶೆಟ್ಟಿ ಬೆಳ್ಳಾರೆ ಉಪಸ್ಥಿತರಿದ್ದರು. ನಿಲಯ ಮಿತಾಶ್ ಅವರು ಸ್ವಾಗತಿಸಿದರೆ, ಅಶೋಕ ಕುಂಬಾರ ಅವರು ನಿರೂಪಿಸಿದರು.

ಕರ್ನಾಟಕದಿಂದ ಬಹಳ ದೂರವಿದ್ದರೂ ಕನ್ನಡ ಭಾಷೆ ಅಲ್ಲಿ ಎಲ್ಲರನ್ನೂ ಒಂದುಗೂಡಿಸಿತ್ತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕದ ಇತಿಹಾಸ, ಪರಂಪರೆ, ಸಾಹಿತ್ಯ ಹಾಗೂ ಕಲೆ ಹಾಗೂ ಜಾನಪದ ಕಲಾ ಪ್ರದರ್ಶನಗಳು ಪ್ರೇಕ್ಷಕರ ಮನ ಸೂರೆಗೊಂಡವು. ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.

ರೇಣು ಕುಮಾರ ಅವರು ರಚಿಸಿರುವ, ಕರ್ನಾಟಕ ಭವನದ ಸಿಬ್ಬಂದಿ ವರ್ಗದವರು ಪ್ರಸ್ತುತಪಡಿಸಿದ ನಾಟಕ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕಾರ್ಯಕ್ರಮದಲ್ಲಿ ಉಪ ನಿವಾಸಿ ಆಯುಕ್ತರಾದ ಮೋನಿಕಾ ಕಷ್ಕರಿ, ಸಹಾಯಕ ನಿವಾಸಿ ಆಯುಕ್ತರಾದ ಶೈಲೇಂದ್ರ ಸಿಂಗ್, ಸಮನ್ವಯಾಧಿಕಾರಿ, ಸಂಸದರ ಕೋಶ ಬಿ.ವಿ ವಿಠ್ಠಲ್, ವಾರ್ತಾಧಿಕಾರಿ ಡಾ.ಮೈಸೂರ ಗಿರೀಶ, ಕರ್ನಾಟಕ ಸಂಘದ ಕಾರ್ಯದರ್ಶಿ ಸಿ.ಎಂ.ನಾಗರಾಜ್ ಮತ್ತಿತರರು ಉಪ ಸ್ಥಿತರಿದ್ದರು.












Click it and Unblock the Notifications