ಮೊಬೈಲ್ ನಲ್ಲಿ ಟಿಕೆಟ್,ಆನ್ ಲೈನ್ ನಲ್ಲಿ ಊಟ ಬುಕ್
ನವದೆಹಲಿ, ಫೆ.13 : ಚೊಚ್ಚಲ ರೈಲ್ವೆ ಬಜೆಟ್ ಮಂಡಿಸಿದ ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಇಲಾಖೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದ್ದಾರೆ. ಎಸ್ಎಂಎಸ್ ಅಲರ್ಟ್ ಸೇವೆ, ರೈಲ್ವೆ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆ ಕುರಿತು ಹಲವು ಯೋಜನೆಗಳನ್ನು ಮಧ್ಯಂತರ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ.
ತಮ್ಮ ಬಜೆಟ್ ಭಾಷಣದಲ್ಲಿ ಕಳೆದ ಕೆಲವು ವರ್ಷಗಳಿಂದ ನಮ್ಮ ಗ್ರಾಹಕರನ್ನು ಸಂಪರ್ಕಿಸುವಲ್ಲಿ ಐಟಿ ಕ್ರಾಂತಿ ಮಹತ್ವದ ಪಾತ್ರವಹಿಸಿದೆ. ನಾವು ಈ ಪ್ರಕ್ರಿಯೆಯನ್ನು ಮುಂದುವರಿಸುತ್ತೇವೆ ಎಂದು ಮಲ್ಲಿಕಾರ್ಜುನ ಖರ್ಗೆ ಲೋಕಸಭೆಗೆ ತಿಳಿಸಿದರು. [ಕರ್ನಾಟಕಕ್ಕೆ ರೈಲ್ವೆ ಬಜೆಟ್ ನಲ್ಲಿ ಸಿಕ್ಕಿದ್ದೇನು]

ರೈಲುಗಳಲ್ಲಿ ಪ್ರಯಾಣಿಕರಿಗೆ ಆನ್ಲೈನಲ್ಲಿ ಊಟದ ಬುಕ್ಕಿಂಗ್ ವ್ಯವಸ್ಥೆ ಮತ್ತು ಎಸ್ಎಂಎಸ್ ಅಲರ್ಟ್ ಸೇವೆ ಸೇರಿದಂತೆ ರೈಲ್ವೆ ನಿರ್ವಹಣೆಯಲ್ಲಿ ಮಾಹಿತಿ ತಂತ್ರಜ್ಞಾನ ಬಳಕೆಯ ಹಲವು ಕ್ರಮಗಳನ್ನು ತಮ್ಮ ಬಜೆಟ್ ನಲ್ಲಿ ಖರ್ಗೆ ಪ್ರಕಟಿಸಿದರು. [ರೈಲ್ವೆ ಬಜೆಟ್ ಮುಖ್ಯಾಂಶಗಳು]
ಮೊಬೈಲ್ ಮೂಲಕ ಟಿಕೆಟ್ : ಕಾಯ್ದಿರಿಸದ ವಿಭಾಗದಲ್ಲಿ ಪ್ರಯಾಣಿಕರು ಟಿಕೆಟ್ ಪಡೆಯಲು ಅನುಕೂಲವಾಗುವಂತೆ, ಸ್ವಯಂಚಾಲಿತ ಟಿಕೆಟ್ ಮಾರಾಟ ಯಂತ್ರಗಳು, ಮೊಬೈಲ್ ಫೋನ್ ಮೂಲಕ ಟಿಕೆಟ್ ಪಡೆಯುವ ವ್ಯವಸ್ಥೆಗಳನ್ನು ಆರಂಭಿಸುವುದಾಗಿ ಖರ್ಗೆ ಪ್ರಕಟಿಸಿದರು.
ಸೀಟು ಕಾಯ್ದಿರಿಸಿರುವವರ ಹೆಸರು ವೇಯ್ಟಿಂಗ್ ಲಿಸ್ಟ್ನಲ್ಲಿದ್ದರೆ, ಅವರ ಟಿಕೆಟ್ ಖಾತ್ರಿಯಾದ ತಕ್ಷಣ ಅವರಿಗೆ ಪಿಎನ್ಆರ್ ಮಾಹಿತಿ ಎಸ್ಎಂಎಸ್ ಮೂಲಕ ರವಾನೆಯಾಗುವ ವ್ಯವಸ್ಥೆಯನ್ನು ಆರಂಭಿಸಲಾಗುವುದು ಎಂದರು.
ರೈಲ್ವೆ ನಿಲ್ದಾಣದ ಆವರಣದಲ್ಲಿ ಓಡುತ್ತಿರುವ ರೈಲುಗಳ ತಾಜಾ ಮಾಹಿತಿಯನ್ನು ಪ್ರದರ್ಶಿಸುವ ವಿದ್ಯುನ್ಮಾನ ಫಲಕಗಳನ್ನು ರೈಲ್ವೆ ನಿಲ್ದಾಣಗಳಲ್ಲಿ ಅಳವಡಿಸಲಾಗುವುದು ಎಂದು ಖರ್ಗೆ ಘೋಷಿಸಿದರು.
ಭೋಜನಕ್ಕೂ ಬುಕ್ಕಿಂಗ್ : ರೈಲ್ವೆ ಇಲಾಖೆಯು ಆಯ್ದ ಮಾರ್ಗಗಳಲ್ಲಿ ಚಲಿಸುವ ರೈಲುಗಳೊಳಗೆ ಭೋಜನದ ಬುಕ್ಕಿಂಗ್ಗೆ ಆನ್ಲೈನ್ ವ್ಯವಸ್ಥೆ ಆರಂಭಿಸಲಾಗುವುದು ಹಾಗೂ ಸರಕು ಸಾಗಣೆಯ ಸ್ಥಿತಿಗತಿಯ ಬಗ್ಗೆ ಎಲೆಕ್ಟ್ರಾನಿಕ್ ರಸೀತಿಗಳನ್ನು ಒದಗಿಸಲಾಗುವುದು ಎಂದು ಖರ್ಗೆ ಪ್ರಕಟಿಸಿದರು.
ನಿಮ್ಮ ದೂರು ಆನ್ ಲೈನ್ ಮೂಲಕ ಸಲ್ಲಿಸಿ : ಪ್ರಯಾಣಿಕರ ದೂರುದುಮ್ಮಾನಗಳನ್ನು ಕಂಪ್ಯೂಟರ್ ನಲ್ಲಿ ದಾಖಲಿಸಿ, ಪರಿಹಾರ ಪಡೆದುಕೊಳ್ಳುವಂತೆ ಮಾಡಲು ಕ್ರಮ ತೆಗೆದುಕೊಳ್ಳುವ ಘೋಷಣೆ.












Click it and Unblock the Notifications