ವಿಧಾನಸಭೆಯಲ್ಲಿ ಸಿಎಎ ವಿರುದ್ಧ ನಿರ್ಣಯ ಪಾಸ್, ಇದು 2ನೇ ರಾಜ್ಯ
ನವದೆಹಲಿ, ಜನವರಿ.17: ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೊಂದಣಿ ವಿರುದ್ಧ ಕೇರಳದ ನಂತರ ಮತ್ತೊಂದು ರಾಜ್ಯವು ಸಮರ ಸಾರಿದೆ. ಪಂಜಾಬ್ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಪಂಜಾಬ್ ನಲ್ಲಿ ಜನವರಿ.16ರಂದು ವಿಧಾನಸಭೆಯ ಎರಡು ದಿನಗಳ ವಿಶೇಷ ಅಧಿವೇಶನ ಆರಂಭಗೊಂಡಿತ್ತು. ಎರಡನೇ ದಿನವಾದ ಶುಕ್ರವಾರ ರಾಜ್ಯ ಸಚಿವ ಬ್ರಹ್ಮ ಮೋಹಿಂದ್ರ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕ್ರಾಂತಿ ಮಾಡುವುದಾಗಿ ಹೇಳಿದರು.
ಕೇಂದ್ರ ಸರ್ಕಾರ ಜಾರಿಗೊಳಿಸಲು ಮುಂದಾಗಿರುವ ಸಿಎಎ ಹಾಗೂ ಎನ್ಆರ್ ಸಿ ವಿರುದ್ಧ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಧ್ವನಿ ಎತ್ತಿದ್ದಾರೆ. ಕೇರಳ, ಪಶ್ಚಿಮ ಬಂಗಾಳ ಹಾಗೂ ಪಂಜಾಬ್ ನಲ್ಲಿ ಆರಂಭದಿಂದಲೂ ಈ ಕಾಯ್ದೆಗೆ ವಿರೋಧ ವ್ಯಕ್ತವಾಗಿತ್ತು.

ಸುಪ್ರೀಂಕೋರ್ಟ್ ಮೊರೆ ಹೋಗಿರುವ ಕೇರಳ:
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇರಳ ಸರ್ಕಾರವು ಮೊದಲ ಬಾರಿಗೆ ಸಮರ ಸಾರಿತ್ತು. ಕೇಂದ್ರ ಸರ್ಕಾರದ ಸಿಎಎ ಅನುಷ್ಠಾನವನ್ನು ಪ್ರಶ್ನಿಸಿ ಜನವರಿ.14ರಂದು ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಭಾರತದಲ್ಲಿ ಸಿಎಎ ಮೂಲಕ ಸಂವಿಧಾನದಲ್ಲಿ ಹೇಳಿರುವ ಸಮಾನತೆ ಹಕ್ಕಿಗೆ ಧಕ್ಕೆ ಉಂಟು ಮಾಡಲಾಗುತ್ತಿದೆ ಎಂದು ಕೇರಳ ಸರ್ಕಾರವು ಆರೋಪಿಸಿತ್ತು. ಭಾರತವು ಜಾತ್ಯಾತೀತ ದೇಶವಾಗಿದ್ದು, ಸಿಎಎ ಅನುಷ್ಠಾನಗೊಂಡರೆ ಸಂವಿಧಾನದ 14, 21 ಹಾಗೂ 25ನೇ ಕಲಂನ ಉಲ್ಲಂಘನೆ ಆಗುತ್ತದೆ ಎಂದು ಕೇರಳ ಸರ್ಕಾರವು ವಾದಿಸಿತ್ತು.












Click it and Unblock the Notifications