ಇನ್ನಷ್ಟು ವಿಮಾನ ನಿಲ್ದಾಣಗಳ ಖಾಸಗೀಕರಣ: ಹರದೀಪ್ ಸಿಂಗ್ ಪುರಿ
ನವದೆಹಲಿ, ಆಗಸ್ಟ್ 18: ವಿಮಾನ ನಿಲ್ದಾಣಗಳನ್ನು ಇನ್ನಷ್ಟು ಖಾಸಗೀಕರಣಗೊಳಿಸಲು ಪ್ರಸ್ತಾವನೆಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಬುಧವಾರ ಇರಿಸಲಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರದೀಪ್ ಸಿಂಗ್ ಪುರಿ ತಿಳಿಸಿದರು.
ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಮೊದಲ ಸುತ್ತಿನ ಖಾಸಗೀಕರಣ ಪ್ರಕ್ರಿಯೆಯ ಅಡಿಯಲ್ಲಿ ಲಖನೌ, ಅಹಮದಾಬಾದ್, ಜೈಪುರ, ಮಂಗಳೂರು, ತಿರುವನಂತಪುರ ಮತ್ತು ಗುವಾಹಟಿ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಪಿಪಿಪಿ (ಖಾಸಗಿ ಮತ್ತು ಸರ್ಕಾರಿ ಸಹಭಾಗಿತ್ವ) ಮಾದರಿಯಲ್ಲಿ ನಿಭಾಯಿಸಲು ಅನುಮತಿ ನೀಡಿತ್ತು.
ವಿಮಾನ ಹಾರಾಟ ನಿರ್ಬಂಧ ಸಡಿಲಿಕೆ: ಏನಿದು ಏರ್ ಟ್ರಾನ್ಸ್ಪೋರ್ಟ್ ಬಬಲ್ಸ್? ಇಲ್ಲಿದೆ ವಿವರ
ತರುವಾಯ, ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) 2019 ರ ಸೆಪ್ಟೆಂಬರ್ನಲ್ಲಿ ಅಮೃತಸರ, ವಾರಣಾಸಿ, ಭುವನೇಶ್ವರ, ಇಂದೋರ್, ರಾಯ್ಪುರ ಮತ್ತು ತಿರುಚ್ಚಿ ವಿಮಾನ ನಿಲ್ದಾಣಗಳನ್ನು ಖಾಸಗೀಕರಣಗೊಳಿಸಲು ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಶಿಫಾರಸು ಮಾಡಿತ್ತು.
"ಮುಂದಿನ ಹಲವು ವಿಮಾನ ನಿಲ್ದಾಣ ಖಾಸಗೀಕರಣಕ್ಕಾಗಿ ನಾವು ನಾಳೆ ಕ್ಯಾಬಿನೆಟ್ಗೆ ಹೋಗುತ್ತಿದ್ದೇವೆ. ಇನ್ನೂ ಹಲವು ವಿಮಾನ ನಿಲ್ದಾಣಗಳು ಖಾಸಗೀಕರಣಕ್ಕೆ ಸಾಲಾಗಿ ನಿಂತಿವೆ, ಅವುಗಳಲ್ಲಿ ಡಜನ್ಗಟ್ಟಲೆ ಇವೆ ಮತ್ತು 2030 ರ ನಡುವೆ ನಾವು 100 ಹೊಸ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಿದ್ದೇವೆ" ಎಂದು ವೆಬಿನಾರ್ನಲ್ಲಿ ಪುರಿ ಹೇಳಿದರು.
ನಾಗರಿಕ ವಿಮಾನಯಾನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಎಎಐ, ದೇಶಾದ್ಯಂತ 100 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಹೊಂದಿದೆ ಮತ್ತು ನಿರ್ವಹಿಸುತ್ತದೆ.