ಸಹೋದರನ ಧೈರ್ಯವನ್ನು ಮೆಚ್ಚಿಕೊಂಡ ಪ್ರಿಯಾಂಕಾ ಗಾಂಧಿ
ನವದೆಹಲಿ, ಜುಲೈ 4: ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮರುದಿನ ಪ್ರಿಯಾಂಕಾ ಗಾಂಧಿ ವಾಧ್ರಾ ಅವರು ಸಹೋದರನ ನಿರ್ಧಾರವನ್ನು ಗೌರವಿಸಿ ಹೇಳಿಕೆ ನೀಡಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ರಾಹುಲ್ ಗಾಂಧಿ ನಾಲ್ಕು ಪುಟಗಳ ಸುದೀರ್ಘ ಪತ್ರ ಬರೆದು ಟ್ವಿಟ್ಟರ್ನಲ್ಲಿ ಅದನ್ನು ಪ್ರಕಟಿಸಿದ್ದರು. ಅದರಲ್ಲಿ ತಮ್ಮ ರಾಜೀನಾಮೆ ನಿರ್ಧಾರದ ಬಗ್ಗೆ, ಹೊಸ ಅಧ್ಯಕ್ಷರ ಆಯ್ಕೆ ಬಗ್ಗೆ, ಪಕ್ಷದ ಪುನರ್ ಸಂಘಟನೆಯ ಕುರಿತು, ಮೋದಿ ಮತ್ತು ಬಿಜೆಒಇ ವಿರುದ್ಧದ ತಮ್ಮ ಹೋರಾಟದ ಕುರಿತು ಹಾಗೂ ಆರೆಸ್ಸೆಸ್ ಮತ್ತು ಬಿಜೆಪಿ ನಿಯಂತ್ರಣದಲ್ಲಿ ಮುಂದೆ ದೇಶಕ್ಕೆ ಗಂಡಾಂತರ ಎದುರಾಗಲಿದೆ ಎಂಬ ಕಳವಳವನ್ನು ಅದರಲ್ಲಿ ವಿವರಿಸಿದ್ದರು.
ಮುಖ್ಯವಾಗಿ ಅವರು ಲೋಕಸಭೆ ಚುನಾವಣೆಯಲ್ಲಿನ ಸೋಲಿಗೆ ನೈತಿಕ ಹೊಣೆ ಹೊತ್ತು ಕಾಂಗ್ರೆಸ್ನ ಅಧ್ಯಕ್ಷ ಸ್ಥಾನದಿಂದ ಕೆಳಕ್ಕಿಳಿದಿದ್ದಾರೆ. ಸಹೋದರನ ನಿರ್ಧಾರವನ್ನು ಪ್ರಿಯಾಂಕಾ ಶ್ಲಾಘಿಸಿದ್ದಾರೆ.

'ನೀನು ತೋರಿಸಿದ ಧೈರ್ಯವನ್ನು ಕೆಲವರು ಮಾತ್ರ ಹೊಂದಿದ್ದಾರೆ. ನಿನ್ನ ನಿರ್ಧಾರವನ್ನು ತೀವ್ರವಾಗಿ ಗೌರವಿಸುತ್ತೇನೆ' ಎಂದು ಅವರು ಟ್ವೀಟ್ ಮಾಡಿದ್ದಾರೆ.
ಭಾರತವನ್ನು ನಾನು ಪ್ರೀತಿಸುತ್ತೇನೆ ನಾವು ಚುನಾವಣೆಯಲ್ಲಿ ಬಲವಾಗಿ ಮತ್ತು ಘನತೆಯಿಂದ ಹೋರಾಡಿದ್ದೇವೆ. ನಮ್ಮ ಪ್ರಚಾರವು ಸಹೋದರತೆ, ಸಹಿಷ್ಣುತೆ ಮತ್ತು ದೇಶದ ಎಲ್ಲ ಜನರಿಗೆ, ಧರ್ಮಗಳಿಗೆ ಹಾಗೂ ಸಮುದಾಯಗಳಿಗೆ ಗೌರವವನ್ನು ನೀಡುವುದಾಗಿತ್ತು. ನಾನು ವೈಯಕ್ತಿಕವಾಗಿ ಪ್ರಧಾನಿ, ಅರೆಸ್ಸೆಸ್ ಮತ್ತು ಅವರು ಹಿಡಿದಿಟ್ಟುಕೊಂಡಿರುವ ಸಂಸ್ಥೆಗಳ ಕುರಿತು ಹೋರಾಟ ನಡೆಸಿದ್ದೇನೆ. ನಾನು ಭಾರತವನ್ನು ಪ್ರೀತಿಸುತ್ತೇನೆ. ಅದಕ್ಕಾಗಿ ಹೋರಾಟ ಮಾಡಿದೆ. ಭಾರತವನ್ನು ನಿರ್ಮಿಸಿದ ಮಾದರಿಗಳನ್ನು ಸಮರ್ಥಿಸಿಕೊಳ್ಳಲು ಹೋರಾಡಿದೆ ಎಂದು ರಾಹುಲ್ ಗಾಂಧಿ ತಮ್ಮ ಪತ್ರದಲ್ಲಿ ಬರೆದಿದ್ದರು.












Click it and Unblock the Notifications