ಪ್ರಣಬ್ ಮುಖರ್ಜಿಯವರಿಗೆ ಮೋದಿ ಭಾವುಕರಾಗಿ ಬರೆದ ಪತ್ರ
ನವದೆಹಲಿ, ಆಗಸ್ಟ್ 3: ರಾಷ್ಟ್ರಪತಿ ಮತ್ತು ಪ್ರಧಾನಿಯರ ನಡುವೆ ಪತ್ರ ವ್ಯವಹಾರಗಳು ನಡೆಯುತ್ತಲೇ ಇರುತ್ತವೆ. ಬಹುತೇಕ ಪತ್ರಗಳಲ್ಲಿ ರೂಟೀನ್ ಎನ್ನುವಂತಹ ಉಭಯ ಕುಶಲೋಪರಿ ಸಾಂಪ್ರತಗಳಿರುತ್ತವೆಯೇ ಹೊರತು, ಮನಸ್ಸಿಗೆ ತಟ್ಟುವಂಥ ಪತ್ರ ವಿನಿಮಯಗಳು ನಡೆಯುವುದು ಕಡಿಮೆಯೆ.
ಆದರೆ, ತಾವು ರಾಷ್ಟ್ರಪತಿ ಪದವಿಯಿಂದ ನಿರ್ಗಮಿಸುತ್ತಿರುವ ಸಮಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ತಮಗೆ ಬರೆದ ಸರಳ, ಸುಂದರ ಪತ್ರ ತಮ್ಮ 'ಹೃದಯಕ್ಕೆ ತಟ್ಟಿದೆ' ಎಂದು, ಡಿಸೆಂಬರ್ 11ರಂದು 81ನೇ ವರ್ಷಕ್ಕೆ ಕಾಲಿಟ್ಟಿರುವ, ಸರಳತೆ ಸಜ್ಜನಿಕೆಯ ನಿಗರ್ವಿ ರಾಜಕಾರಣಿ ಪ್ರಣಬ್ ಮುಖರ್ಜಿ ಅವರು ಬಣ್ಣಿಸಿದ್ದಾರೆ.
ಜುಲೈ 25 ರಂದು ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದ ಪ್ರಣಬ್ ಮುಖರ್ಜಿ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಭಾವುಕರಾಗಿ ಬರೆದ ಈ ಪತ್ರವನ್ನು ಸ್ವತಃ ಪ್ರಣಬ್ ಮುಖರ್ಜಿಯವರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
"ನನ್ನ ಅಧಿಕಾರಾವಧಿಯ ಕೊನೆಯ ದಿನ, ಪ್ರಧಾನಿ ಮೋದಿಯವರಿಂದ ನಾನೊಂದು ಪತ್ರ ಪಡೆದೆ. ಆ ಪತ್ರ ನನ್ನ ಹೃದಯವನ್ನು ಸ್ಪರ್ಶಿಸಿತು. ಅದನ್ನು ನಿಮ್ಮೊಂದಿಗೂ ಹಂಚಿಕೊಳ್ಳುತ್ತಿದ್ದೇನೆ" ಎಂದು ಮೋದಿಯವರು ಬರೆದ ಪತ್ರವನ್ನು ಮಾಜಿ ರಾಷ್ಟ್ರಪತಿ, ಟ್ವಿಟ್ಟರಿನಲ್ಲಿ ಲಗತ್ತಿಸಿದ್ದಾರೆ.
ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ಭಾವಪೂರ್ಣ ವಿದಾಯ
"ಪ್ರಣಬ್ ದಾ, ನಿಮ್ಮೊಂದಿಗೆ ಕೆಲಸ ಮಾಡುವುದಕ್ಕೆ ನನಗೆ ಸದಾ ಖುಷಿಯಿದೆ" ಎಂದು ಟ್ವೀಟ್ ಮಾಡಿರುವ ಮೋದಿಯವರು ಸಹ ಆ ಪತ್ರವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ಅಷ್ಟಕ್ಕೂ ಈ ಪತ್ರದಲ್ಲೇನಿದೆ? ಪಕ್ಷಭೇದ ಮರೆತು, ರಾಷ್ಟ್ರಪತಿ ಜವಾಬ್ದಾರಿಯನ್ನು ನಿಷ್ಕಳಂಕವಾಗಿ ನಿಭಾಯಿಸಿದ ಪ್ರಣಬ್ ಮುಖರ್ಜಿ ಅವರ ವ್ಯಕ್ತಿತ್ವದ ಕುರಿತು ಮೋದಿಯವರು ಗೌರವ ತುಂಬಿದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋದಿಯರು ಪ್ರಧಾನಿಯಾದಾಗಿನಿಂದಲೂ, ಒಂದಿಲ್ಲೊಂದು ವಿಷಯದಲ್ಲಿ ಪ್ರಣಬ್ ಮುಖರ್ಜಿ ಅವರು ಮೋದಿಯವರಿಗೆ ಮಾರ್ಗದರ್ಶನ ಮಾಡಿದ್ದಾರೆ. ಅವಕ್ಕೆಲ್ಲ ಕೃತಜ್ಞತೆ ಅರ್ಪಿಸಿರುವ ಮೋದಿ, ನಿಮ್ಮ ಸಹಕಾರ ಮುಂದೆಯೂ ಹೀಗೆಯೇ ಇರಲಿ ಎಂದಿದ್ದಾರೆ.
ಮೋದಿ ಪತ್ರದಲ್ಲಿರುವ ಪ್ರಮುಖ ಅಂಶಗಳು ಇಲ್ಲಿವೆ...
ಅನುಕರಣೀಯ ನಾಯಕತ್ವ
"ನೀವೀಗ ನಿಮ್ಮ ಬದುಕಿನ ಹೊಸ ಪಯಣವನ್ನು ಆರಂಭಿಸಿದ್ದೀರಿ. ಐದು ವರ್ಷಗಳ ಕಾಲ ಈ ದೇಶದ ರಾಷ್ಟ್ರಪತಿಯಾಗಿ ನೀವು ಈ ದೇಶಕ್ಕೆ ನೀಡಿದ ಕೊಡುಗೆ ಅಪಾರ. ಸರಳತೆ, ಉನ್ನತ ತತ್ತ್ವ ಮತ್ತು ಅನುಕರಣೀಯ ನಾಯಕತ್ವದಿಂದಅಗಿ ನೀವು ನಮಗೆಲ್ಲ್ ಸ್ಫೂರ್ತಿ ತುಂಬಿದ್ದೀರಿ"
ನಿಮ್ಮ ಮಾರ್ಗದರ್ಶನ ಮರೆಯಲಾರೆ
"ಮೂರು ವರ್ಷದ ಹಿಂದೆ, ಹೊರಗಿನವನಾದ ನಾನು ದೆಹಲಿಗೆ ಬಂದಾಗ(ಸಂಸತ್ತಿಗೆ) ನನ್ನ ಮುಂದಿದ್ದ ಸವಾಲುಗಳು ಹಲವು. ಈ ಸಂದರ್ಭಗಳಲ್ಲಿ ನೀವು ನನ್ನ ತಂದೆಯಂತೆಯೂ, ಗುರುವಿನಂತೆಯೂ ನಿಂತು ಮಾರ್ಗದರ್ಶನ ಮಾಡಿದಿರಿ. ನಿಮ್ಮ ಪಾಂಡಿತ್ಯ, ಮಾರ್ಗದರ್ಶನ ನನಗೆ ಸಾಕಷ್ಟು ಶಕ್ತಿ ಮತ್ತು ಆತ್ಮವಿಶ್ವಾಸ ತುಂಬಿದೆ."
|
ಸಮಸ್ತ ಭಾರತಕ್ಕೂ ಸ್ಫೂರ್ತಿ ನೀವು
"ನೀವು ನಿಮ್ಮ ರಾಜಕೀಯ ಪಯಣದಲ್ಲಿ ಮತ್ತು ರಾಷ್ಟ್ರಪತಿ ಹಾದಿಯಲ್ಲಿ ರಾಷ್ಟ್ರದ ಒಳಿತಿಗಾಗಿ ಉಳಿದೆಲ್ಲವನ್ನೂ ಗೌಣವಾಗಿ ಕಂಡಿದ್ದೀರಿ. ರಾಜಕೀಯ ಎಂದರೆ, 'ನಿಸ್ವಾರ್ಥವಾಗಿ ಸಮಾಜಕ್ಕೆ ನೀಡುವುದು' ಎಂಬ ಪೀಳಿಗೆಯಲ್ಲಿ ಜನಿಸಿದ ನೀವು ಅದನ್ನೇ ಪಾಲಿಸಿದ್ದೀರಿ. ನೀವು ಸಮಸ್ತ ಭಾರತೀಯರಿಗೂ ಸ್ಫೂರ್ತಿಯಾಗಿ ನಿಂತಿದ್ದೀರಿ"
|
ಮುಂದೆಯೂ ಮಾರ್ಗದರ್ಶನ ಮಾಡಿ
"ನೀವು ಹಾಕಿಕೊಟ್ಟ ಪರಂಪರೆ ನಮ್ಮನ್ನು ಮುಂದೆಯೂ ಮುನ್ನಡೆಸುತ್ತದೆ. ನಿಮ್ಮ ದೂರದೃಷ್ಟಿತ್ವ ಮತ್ತು ಸಾರ್ವಜನಿಕರ ಬದುಕಿನಲ್ಲಿ ನಿಮಗಿರುವ ಅಗಾದ ಅನುಭವ ನಮಗೆ ಮುಂದೆಯೂ ಮಾರ್ಗದರ್ಶನ ನೀಡಲಿ ಎಂಬುದು ನಮ್ಮ ಮನವಿ. ರಾಷ್ಟ್ರಪತಿ ಜೀ, ನಿಮ್ಮ ಪ್ರಧಾನ ಮಂತ್ರಿಯಾಗಿ ಕೆಲಸ ಮಾಡಿರುವುದು ನನಗೆ ಸಿಕ್ಕ ನಿಜವಾದ ಗೌರವ."