ಯುವಕರಿಗೆ ಗೊತ್ತಿರಲಿ, ಈ ದೇಶದ ಪ್ರಧಾನಿ ಭ್ರಷ್ಟ: ರಾಹುಲ್ ಗಾಂಧಿ
Recommended Video

ನವದೆಹಲಿ, ಅಕ್ಟೋಬರ್ 11: 'ಭಾರತದ ಯುವಕರಿಗೆ ನಾನು ಸ್ಪಷ್ಟವಾಗಿ ಹೇಳುವುದಿಷ್ಟೇ, ಈ ದೇಶದ ಪ್ರಧಾನಿ ಒಬ್ಬ ಭ್ರಷ್ಟ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದರು.
ನವದೆಹಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿದ ಅವರು ರಫೇಲ್ ಡೀಲ್ ಕುರಿತಂತೆ ಮತ್ತೊಮ್ಮೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ತಾನು ಈ ದೇಶದ ಚೌಕಿದಾರ ಎಂದ ನರೇಂದ್ರ ಮೋದಿ ಅವರ ಒಂದೊಂದೇ ಹಗರಣಗಳು ಈಗ ಹೊರಬರುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಭಾರತದ ತಾಳಕ್ಕೆ ಕುಣಿವ ಡಸಾಲ್ಟ್
ಡಸಾಲ್ಟ್ ಕಂಪನಿಯು ಭಾರತ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿಯುತ್ತದೆ. ಭಾರತ ಏನು ಹೇಳುವುದಕ್ಕೆ ಹೇಳುತ್ತದೋ ಅದನ್ನೇ ಅದು ಹೇಳುತ್ತದೆ. ತಾನು ಹೇಳಬೇಕಿರುವುದನ್ನು ಭಾರತದ ಡಸಾಲ್ಟ್ ಮೂಲಕ ಹೇಳಿಸುತ್ತಿದೆ ಎಂದು ಫ್ರೆಂಚ್ ಏರೋಸ್ಪೇಸ್ ಕಂಪನಿಯ ಮೇಲೂ ಅವರು ಹರಿಹಾಯ್ದರು.

ಫ್ರಾನ್ಸ್ ಪ್ರವಾಸ ಏಕೆ?
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಫ್ರಾನ್ಸ್ ಪ್ರವಾಸಕ್ಕೆ ಹೋಗುತ್ತಿರುವುದೇಕೆ? ರಫೇಲ್ ಡೀಲ್ ಹಗರಣವನ್ನು ಅನ್ನು ಮುಚ್ಚಿಹಾಕುವ ಯೋಜನೆಯೇ ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು. ಮೊದಲು ಭಾರತದ ಪ್ರಧಾನಿಯೇ ರಿಲಯನ್ಸ್ ಕಂಪನಿಗೆ ರಫೇಲ್ ಯುದ್ಧವಿಮಾನದ ಬಿಡಿ ಭಾಗಗಳ ತಯಾರಿಕೆಯ ಒಪ್ಪಂದ ಮಾಡಿಕೊಳ್ಳುವಂತೆ ಫ್ರಾನ್ಸ್ ಸರ್ಕಾರವನ್ನು ಕೋರಿದ್ದರು. ಇದನ್ನು ರಫೇಲ್ ಡೀಲ್ ನ ಹಿರಿಯ ಅಧಿಕಾರಿಯೊಬ್ಬರೂ ದೃಢಪಡಿಸಿದ್ದಾರೆ. ಅಂದರೆ ಇದು ಸ್ಪಷ್ಟವಾಗಿ ಒಂದು ಭ್ರಷ್ಟಾಚಾರ ಪ್ರಕರಣವೇ ಎಂದಿದ್ದಾರೆ ರಾಹುಲ್.

ಪ್ರಧಾನಿಯವರದು ಮೌನವೇ ಉತ್ತರ!
ರಫೇಲ್ ಡೀಲ್ ಬಗ್ಗೆ ಇಷ್ಟೆಲ್ಲ ಆರೋಪ ಕೇಳಿಬಂದರೂ ಪ್ರಧಾನಿ ನರೇಂದ್ರ ಮೋದಿಯವರದು ಮಾತ್ರ ಮೌನದ ಪ್ರತಿಕ್ರಿಯೆ. ಇದು ಒಂದು ಹಗರಣವಷ್ಟೇ. ಕೇಂದ್ರ ಸರ್ಕಾರದ ಇನ್ನೆಷ್ಟೊ ಹಗರಣಗಳು ಇನ್ನು ಕೆಲವೇ ದಿನಗಳಲ್ಲಿ ಹೊರಬರಲಿವೆ ಎಂದು ರಾಹುಲ್ ಗಾಂಧಿ ಹೇಳಿದರು.

MeToo ಅಭಿಯಾನದ ಬಗ್ಗೆ
ಚಿತ್ರರಂಗ, ಪತ್ರಿಕಾರಂಗಗಳಲ್ಲಿ ಕೇಳಿಬರುತ್ತಿರುವ ಲೈಂಗಿಕ ದೌರ್ಜನ್ಯ ಪ್ರಕರಣದ ವಿರುದ್ಧ ದನಿ ಎತ್ತಿರುವ MeToo ಅಭಿಯಾನದ ಬಗ್ಗೆ ಈ ಸಮದರ್ಭದಲ್ಲಿ ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ರಾಹುಲ್, 'ಇದು ರಫೇಲ್ ಡಿಲ್ ಕುರಿತಾಗಿ ಏರ್ಪಡಿಸಿದ ಪತ್ರಿಕಾಗೋಷ್ಠಿ. ಲೈಂಗಿಕ ದೌರ್ಜನ್ಯದ ಬಗ್ಗೆ ಮಾತನಾಡುವುದಕ್ಕೆ ಬೇರೆ ಸಮಯವಿದೆ' ಎಂದು ಪತ್ರಿಕಾ ಗೋಷ್ಠಿಯನ್ನು ಮುಗಿಸಿದರು.












Click it and Unblock the Notifications