ತಡಮಾಡದೆ ಹೊಸ ಅಧ್ಯಕ್ಷರನ್ನು ಆರಿಸಿ: ನಾಯಕರಿಗೆ ರಾಹುಲ್ ಗಾಂಧಿ ಆದೇಶ
ನವದೆಹಲಿ, ಜುಲೈ 03: "ತಡಮಾಡದೆ ಪಕ್ಷದ ಅಧ್ಯಕ್ಷರನ್ನು ಆರಿಸಿ, ಈ ಪ್ರಕ್ರಿಯೆಯಲ್ಲಿ ನಾನು ಯಾವುದೇ ಕಾರಣಕ್ಕೂ ಭಾಗಿಯಾಗುವುದಿಲ್ಲ" ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪಕ್ಷದ ವರಿಷ್ಠರಿಗೆ ಆದೇಶಿಸಿದ್ದಾರೆ.
"ನಾನು ಈಗಾಗಲೇ ನನ್ನ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದೇನೆ. ಆದ್ದರಿಂದ ನಾನೀಗ ಪಕ್ಷದ ಅಧ್ಯಕ್ಷನಾಗಿ ಉಳಿದಿಲ್ಲ. ಕಾಂಗ್ರೆಸ್ ನ ಕಾರ್ಯಕಾರಿಣಿ ಸಮಿತಿ ಆದಷ್ಟು ಬೇಗ ಸಭೆ ಸೇರಿ ಅಧ್ಯಕ್ಷರನ್ನು ಆಯ್ಕೆ ಮಾಡಬೇಕು. ಇನ್ನೂ ವಿಳಂಬ ಮಾಡುವುದು ಸರಿಯಲ್ಲ. ನನ್ನ ನಿರ್ಧಾರದಲ್ಲಿ ಬದಲಾವಣೆ ಇಲ್ಲ" ಎಂದು ರಾಹುಲ್ ಗಾಂಧಿ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಹೀನಾಯ ಪ್ರದರ್ಶನದ ನಂತರ ನಾಯಕತ್ವದ ಕುರಿತು ದೂರು ಎದ್ದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ರಾಜೀನಾಮೆಗೆ ಮುಂದಾಗಿದ್ದರು. ಅವರು ರಾಜೀನಾಮೆ ನೀಡಬಾರದು ಎಂದು ಪಕ್ಷದ ವರಿಷ್ಟರು ದುಂಬಾಲು ಬಿದ್ದಿದ್ದರು. ಆದರೆ ಯಾರ ಮಾತನ್ನೂ ಕೇಳದ ರಾಹುಲ್ ಗಾಂಧಿ ಅವರು ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ರಾಹುಲ್ ಗಾಂಧಿ ರಾಜೀನಾಮೆ ನಿರ್ಧಾರದಿಂದ ಬೇಸತ್ತು ಈಗಾಗಲೇ ಕಾಂಗ್ರೆಸ್ ನ ಹಲವು ಪದಾಧಿಕಾರಿಗಳೂ ರಾಜೀನಾಮೆ ನೀದಿದ್ದಾರೆ.
ರಾಹುಲ್ ಗಾಂಧಿ ಅವರ ರಾಜೀನಾಮೆಯನು ವಿರೋಧಿಸಿ ದೆಹಲಿಯ ಕಾಂಗ್ರೆಸ್ ಕಚೇರಿಯ ಹೊರಗಿನ ಮರಕ್ಕೆ ವ್ಯಕ್ತಿಯೊಬ್ಬ ನೇಣುಹಾಕಿಕೊಳ್ಳುವುದಕ್ಕೆ ಪ್ರಯತ್ನಿಸಿದ ಘಟನೆಯೂ ನಡೆದಿತ್ತು. ಈತನನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಹನೀಫ್ ಖಾನ್ ಎಂದು ಗುರುತಿಲಾಗಿತ್ತು.












Click it and Unblock the Notifications