ಯಾವುದೇ ಮುಸ್ಲಿಂ ಮಹಿಳೆ ಪತಿಗೆ 3 ಪತ್ನಿಯರು ಇರಲೆಂದು ಬಯಸಲ್ಲ: ಅಸ್ಸಾಂ ಸಿಎಂ
ನವದೆಹಲಿ, ಮೇ 1: ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗಾಗಿ ಬಲವಾಗಿ ಒತ್ತಾಯಿಸಿದ್ದಾರೆ. "ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿಗೆ ಮೂರು ಪತ್ನಿಯರು ಇರಲಿ ಎಂದು ಬಯಸಲ್ಲ," ಎಂದು ಹೇಳಿದ್ದಾರೆ.
ಭಾನುವಾರ ನವದೆಹಲಿಯಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಭೇಟಿ ಮಾಡಿದರು. ಇತ್ತೀಚೆಗೆ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಇತ್ತೀಚೆಗೆ ತಮ್ಮ ಬಿಜೆಪಿ ಸರ್ಕಾರವು ಉತ್ತರ ರಾಜ್ಯದಲ್ಲಿ ಜಾರಿಗೆ ತರಲು ಯುಸಿಸಿಯ ಕರಡನ್ನು ಸಿದ್ಧಪಡಿಸುತ್ತದೆ ಎಂದು ಹೇಳಿದ್ದರು.
ಈ ಬಳಿಕ ಮಾತನಾಡಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ನಾನು ಭೇಟಿಯಾದ ಎಲ್ಲಾ ಮುಸ್ಲಿಮರು ಯುಸಿಸಿಯನ್ನು ಬಯಸುತ್ತಾರೆ," ಎಂದು ಹೇಳಿದರು. ಈ ವೇಳೆಯೇ, "ಯಾವುದೇ ಮುಸ್ಲಿಂ ಮಹಿಳೆ ತನ್ನ ಪತಿಗೆ ಮೂವರು ಪತ್ನಿಯರು ಇರಲಿ ಎಂದು ಬಯಸಲ್ಲ. ಯಾರಿಗೂ ಇದು ಬೇಕಾಗಿಲ್ಲ," ಎಂದರು.

"ನೀವು ಯಾವುದೇ ಮುಸ್ಲಿಂ ಮಹಿಳೆಯನ್ನು ಕೇಳಬಹುದು. ಮುಸ್ಲಿಂ ಮಹಿಳೆಯರು ತಮ್ಮ ಪತಿ ಮೂರು ಮಹಿಳೆಯರನ್ನು ಮದುವೆಯಾಗಬೇಕು ಎಂದು ಬಯಸಲ್ಲ. ಹಾಗೆ ಹೇಳುವುದು ಕೂಡಾ ಇಲ್ಲ. ಇದು ಯಾರಿಗೆ ಬೇಕು," ಎಂದು ನವದೆಹಲಿಯಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುತ್ತಾ ತಿಳಿಸಿದರು.
"ಇದು ಮುಸ್ಲಿಂ ತಾಯಂದಿರ, ಸಹೋದರಿಯರ ಸಮಸ್ಯೆ"
"ಮುಸ್ಲಿಂ ಪುರುಷ ಒಂದಕ್ಕಿಂತ ಹೆಚ್ಚು ಮಹಿಳೆಯರನ್ನು ಮದುವೆಯಾಗುವುದು ಅವನ ಸಮಸ್ಯೆಯಲ್ಲ. ಆದರೆ ಮುಸ್ಲಿಂ ತಾಯಂದಿರು ಮತ್ತು ಸಹೋದರಿಯರ ಸಮಸ್ಯೆ," ಎಂದು ಹೇಳಿದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ, "ಮುಸ್ಲಿಂ ಮಹಿಳೆಯರು ಮತ್ತು ತಾಯಂದಿರಿಗೆ ಸಮಾಜದಲ್ಲಿ ಗೌರವ ನೀಡಬೇಕಾದರೆ ತ್ರಿವಳಿ ತಲಾಖ್ (ಕಾನೂನು) ನಂತರ ಯುಸಿಸಿ ಜಾರಿಗೆ ತರಬೇಕು," ಎಂದು ಅಭಿಪ್ರಾಯಿಸಿದರು.
"ನಾನು ಹಿಂದೂ ಮತ್ತು ನಾನು ಯುಸಿಸಿ ಹೊಂದಿದ್ದೇನೆ. ನನ್ನ ಸಹೋದರಿ ಮತ್ತು ಮಗಳಿಗೆ ಯುಸಿಸಿ ಇದೆ. ನನ್ನ ಮಗಳಿಗೆ ಯುಸಿಸಿ ಇದ್ದರೆ, ಮುಸ್ಲಿಂ ಹೆಣ್ಣುಮಕ್ಕಳಿಗೂ ಆ ರಕ್ಷಣೆ ಇರಬೇಕು," ಎಂದು ಕೂಡಾ ಹೇಳಿದರು.
ಎರಡನೇ ಬಾರಿಗೆ ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ, ಧಾಮಿ ಮಾರ್ಚ್ 24 ರಂದು ತಮ್ಮ ಸರ್ಕಾರವು ರಾಜ್ಯದಲ್ಲಿ ಜಾರಿಗೆ ತರಲು ಯುಸಿಸಿಯ ಕರಡನ್ನು ಸಿದ್ಧಪಡಿಸುತ್ತದೆ ಎಂದು ಹೇಳಿದರು. "ಕ್ಯಾಬಿನೆಟ್ ಈ ಪ್ರಸ್ತಾಪವನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಇತರ ರಾಜ್ಯಗಳು ನಮ್ಮನ್ನು ಅನುಸರಿಸುತ್ತವೆ ಎಂದು ನಾವು ನಿರೀಕ್ಷಿಸುತ್ತೇವೆ," ಎಂದಿದ್ದರು.
ಯುಸಿಸಿ ಜಾರಿ ಮಾಡುವ ಚಿಂತನೆ: ಯುಪಿ ಉಪಮುಖ್ಯಮಂತ್ರಿ
ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಏಪ್ರಿಲ್ 23 ರಂದು ಯುಸಿಸಿ ಅನುಷ್ಠಾನದ ಬಗ್ಗೆ ರಾಜ್ಯ ಸರ್ಕಾರ ಗಂಭೀರವಾಗಿ ಯೋಚಿಸುತ್ತಿದೆ," ಎಂದರು. "ಒಂದು ದೇಶದಲ್ಲಿ ಎಲ್ಲರಿಗೂ ಒಂದು ಕಾನೂನು ಸಮಯದ ಅಗತ್ಯವಾಗಿದೆ. ಒಬ್ಬ ವ್ಯಕ್ತಿಗೆ ಒಂದು ಮತ್ತು ಇತರರಿಗೆ ಇನ್ನೊಂದು ಕಾನೂನು ಎಂಬ ವ್ಯವಸ್ಥೆಯಿಂದ ನಾವು ಹೊರಬರಬೇಕು. ನಾವು ಸಾಮಾನ್ಯ ನಾಗರಿಕ ಸಂಹಿತೆಯ ಪರವಾಗಿರುತ್ತೇವೆ," ಎಂದು ತಿಳಿಸಿದ್ದಾರೆ.












Click it and Unblock the Notifications