ಯಾರ ಮಗನಾದರೂ ಇದು ಒಪ್ಪುವಂಥದ್ದಲ್ಲ: ಪ್ರಧಾನಿ ಮೋದಿ ಸಿಡಿಮಿಡಿ
ನವದೆಹಲಿ, ಜುಲೈ 2: ಮಧ್ಯಪ್ರದೇಶದಲ್ಲಿ ಪಾಲಿಕೆ ಅಧಿಕಾರಿಯನ್ನು ಕ್ರಿಕೆಟ್ ಬ್ಯಾಟ್ನಿಂದ ಥಳಿಸಿದ್ದ ಬಿಜೆಪಿ ಶಾಸಕ ಆಕಾಶ್ ವಿಜಯ್ವರ್ಗಿಯಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನ ಹೊರಹಾಕಿದ್ದಾರೆ. ಆಕಾಶ್ ಅವರ ಕೃತ್ಯ ಒಪ್ಪುವಂತಹದ್ದಲ್ಲ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಬಿಜೆಪಿಯ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಆತ ಯಾರದ್ದೇ ಮಗನಾಗಿದ್ದರೂ ಈ ರೀತಿಯ ವರ್ತನೆಯನ್ನು ಒಪ್ಪಲಾಗದು ಎಂದಿದ್ದಾರೆ.
ಭ್ರಷ್ಟಾಚಾರ ನಿಲ್ಲಿಸದಿದ್ದರೆ ಧನ್ ಧನಾ ಧನ್! ಇದು ಬಿಜೆಪಿ ಎಂಎಲ್ಎ ಬ್ಯಾಟಿಂಗ್ ಸ್ಟೈಲ್
'ಈ ಘಟನೆಯಿಂದ ಪ್ರಧಾನಿ ತೀವ್ರ ಬೇಸರಗೊಂಡಿದ್ದಾರೆ. ಯಾರಿಗೂ ದುರ್ವರ್ತನೆ ತೋರುವ, ಪಕ್ಷವನ್ನು ಮನಸ್ಸಿಗೆ ಬಂದ ಹಾಗೆ ಬಳಸಿಕೊಳ್ಳಲು ಅಥವಾ ಸಾರ್ವಜನಿಕವಾಗಿ ದುರಹಂಕಾರದ ಕೃತ್ಯಗಳನ್ನು ಎಸಗುವ ಅಧಿಕಾರವಿಲ್ಲ ಎಂದು ಹೇಳಿದರು' ಎಂಬುದಾಗಿ ಬಿಜೆಪಿ ಮುಖಂಡರ ರಾಜೀವ್ ಪ್ರತಾಪ್ ರೂಡಿ ತಿಳಿಸಿದರು.
ಮಧ್ಯಪ್ರದೇಶದ ಇಂದೋರ್ನ ಬಿಜೆಪಿ ಶಾಸಕ ಅಕಾಶ್ ವಿಜಯ್ವರ್ಗಿಯಾ, ಭ್ರಷ್ಟಾಚಾರ ನಡೆಸಿದ ಆರೋಪದಲ್ಲಿ ಕಳೆದ ಬುಧವಾರ ಪಾಲಿಕೆ ಅಧಿಕಾರಿಯೊಬ್ಬರನ್ನು ಬ್ಯಾಟ್ನಿಂದ ಥಳಿಸಿದ್ದರು. ಅಧಿಕಾರಿಯನ್ನು ಅಟ್ಟಾಡಿಸಿಕೊಂಡು ಬಾರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬ್ಯಾಟ್ನಿಂದ ಬಾರಿಸಿದ್ದ ಶಾಸಕನ ಕೃತ್ಯ ಸಮರ್ಥಿಸಿಕೊಂಡ ತಂದೆ
ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಆಕಾಶ್ ಅವರು ಜೈಲಿನಿಂದ ಬಿಡುಗಡೆಗೊಂಡ ಬಳಿಕ ಅವರ ಬೆಂಬಲಿಗರು ಕಚೇರಿ ಮುಂಭಾಗದಲ್ಲಿ ಗುಂಡು ಹಾರಿಸಿ ಸಂಭ್ರಮಿಸಿದ್ದರು.
ಪಕ್ಷದಿಂದ ಉಚ್ಚಾಟಿಸಬೇಕು
ಈ ರೀತಿ ನಡೆದುಕೊಳ್ಳುವ ಮುಖಂಡರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು. ಜಾಮೀನಿನ ಮೇಲೆ ಜೈಲಿನಿಂದ ಬಿಡುಗಡೆಗೊಂಡು ಹೊರಬಂದಾಗ ಅವರನ್ನು ಸ್ವಾಗತಿಸಿದವರನ್ನು ಕೂಡ ಪಕ್ಷದಿಂದ ಹೊರಹಾಕಬೇಕು ಎಂದು ಮೋದಿ ಅವರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.
ಜೈಲಿನಿಂದ ಹೊರ ಬಂದ 'ಬ್ಯಾಟ್ ಬೀಸಿದ' ಬಿಜೆಪಿ ಶಾಸಕ ಆಕಾಶ್
ಸಂಸದರು ಜವಾಬ್ದಾರಿಯಿಂದ ವರ್ತಿಸಬೇಕು
ಈ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಯಬೇಕು. ಅಂತಹ ವರ್ತನೆಯನ್ನು ಬೆಂಬಲಿಸುವವರನ್ನೂ ಪ್ರಶ್ನಿಸಬೇಕಿದೆ ಎಂದಿರುವ ಪ್ರಧಾನಿ, ಪಕ್ಷದ ಸಂಸದರು ಜವಾಬ್ದಾರಿಯುತ ಹಾಗೂ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಸತ್ ಕಲಾಪಗಳಿಗೆ ಪೂರ್ಣಾವಧಿ ಸಮಯ ನೀಡಬೇಕು ಮತ್ತು ಸಾಮಾನ್ಯ ಜನರಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಧ್ವನಿ ಎತ್ತಬೇಕು ಎಂದು ಸೂಚನೆ ನೀಡಿದರು.
ಬ್ಯಾಟ್ನಿಂದ ಹಲ್ಲೆ ನಡೆಸಿದ್ದರು
ಒತ್ತುವರಿಯ ಕಟ್ಟಡವನ್ನು ತೆರವುಗೊಳಿಸುವ ತಂಡದಲ್ಲಿದ್ದ ಅಧಿಕಾರಿಯ ಮೇಲೆ ಆಕಾಶ್ ಮತ್ತು ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರು. ಬ್ಯಾಟ್ನಿಂದ ಬಾರಿಸಿದ್ದ ತಮ್ಮ ಕೃತ್ಯವನ್ನು ಅವರು ಸಮರ್ಥಿಸಿಕೊಂಡಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಅವರು ಜಾಮೀನಿನ ಮೇಲೆ ಹೊರಬಂದಾಗ ಭವ್ಯ ಸ್ವಾಗತ ನೀಡಲಾಗಿತ್ತು.
ಮಗ ಮಾತ್ರ ಅಲ್ಲ, ಶಾಸಕನ ಅಪ್ಪನೂ ಹೀಗೆಯೇ ಇದ್ದಿದ್ದು!
ಸಾರ್ವಜನಿಕ ಹಿತಾಸಕ್ತಿಗಾಗಿ ಮಾಡಿದ್ದು
'ನಾನು ಮಾಡಿದ್ದು ಸಾರ್ವಜನಿಕ ಒಳಿತಿಗಾಗಿ. ಹೀಗಾಗಿ ನಾನು ತಪ್ಪಿತಸ್ಥನಲ್ಲ ಮತ್ತು ಅದರ ಬಗ್ಗೆ ಮುಜುಗರವೂ ಇಲ್ಲ. ಪೊಲೀಸರ ಮುಂದೆಯೇ ಮಹಿಳೆಯೊಬ್ಬರನ್ನು ಅತ್ಯಂತ ಅಮಾನವೀಯವಾಗಿ ಹೊರಗೆ ಎಳೆದುಕೊಂಡು ಬರಲಾಯಿತು. ಇದನ್ನು ನೋಡಿ ನನಗೆ ಬೇರೇನೂ ಮಾಡಲು ಸಾಧ್ಯವಿರಲಿಲ್ಲ' ಎಂದು ಬಿಡುಗಡೆ ಬಳಿಕ ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡಿದ್ದರು. ಅಲ್ಲದೆ, ಈ ಘಟನೆ ಬಳಿಕ ತಾವು ಮತ್ತೆ ಕ್ರಿಕೆಟ್ ಬ್ಯಾಟ್ ಕೈಗೆತ್ತಿಕೊಳ್ಳುವ ಪ್ರಮೇಯ ಬರುವುದಿಲ್ಲ ಎಂಬ ವಿಶ್ವಾಸವಿದೆ ಎಂದಿದ್ದರು.