ದೆಹಲಿ ಪ್ರಯಾಣದಿಂದ ಕುತೂಹಲ ಹುಟ್ಟಿಸಿದ ರಾಜೇ
ನವದೆಹಲಿ, ಜೂ, 27 : ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿ ವೀಸಾ ಪ್ರಕರಣದಲ್ಲಿ ಸಿಲುಕಿರುವ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ನೀತಿ ಆಯೋಗದ ಸಭೆಯಲ್ಲಿ ಭಾಗವಹಿಸಲು ಶನಿವಾರ ದೆಹಲಿ ತಲುಪಿದ್ದಾರೆ.
ಲಲಿತ್ ಮೋದಿ ಲಂಡನ್ನಿಂದ ಪೋರ್ಚುಗಲ್ ತಲುಪಲು ಸಹಾಯ ಮಾಡಿರುವ ಆರೋಪವನ್ನು ಹೊರಲು ಸಿದ್ಧವಿಲ್ಲದ ವಸುಂಧರಾ ರಾಜೇ ಮೊದಲು ಅರ್ಜಿಗೆ ಸಹಿ ಹಾಕಿರುವುದರ ಬಗ್ಗೆ ಜ್ಞಾಪಕವಿಲ್ಲ ಎಂದಿದ್ದಾರೆ. ಬಳಿಕ ಅರ್ಜಿಗೆ ಸಹಿ ಮಾಡಿಲ್ಲ ಎಂದು ಹೇಳಿ ಎಲ್ಲರ ಅನುಮಾನಕ್ಕೆ ರೆಕ್ಕೆಪುಕ್ಕ ಹಚ್ಚಿದ್ದಾರೆ. ಬಿಜೆಪಿ ಪಕ್ಷ ಹಾಗೂ ನಾಯಕರನ್ನು ಇನ್ನಷ್ಟು ಬಿಕ್ಕಟ್ಟಿಗೆ ತಳ್ಳಿದ್ದಾರೆ. [ವಸುಂಧರಾ ರಾಜೇ ನಮ್ಮ ಫ್ಯಾಮಿಲಿ ಫ್ರೆಂಡ್: ಲಲಿತ್]

ವಸುಂಧರಾ ರಾಜೇ ರಾಜೀನಾಮೆ ನೀಡಬೇಕೆಂದು ರಾಜಕೀಯ ನಾಯಕರುಗಳು ಒತ್ತಾಯಿಸುತ್ತಿರುವುದು ಬಿಜೆಪಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ . ಇಂತಹ ಸಂದರ್ಭದಲ್ಲಿ ಬಿಜೆಪಿ ಮುಖಂಡರ ಭೇಟಿ ಮಾಡುವ ರಾಜೇ ಅವರ ದೆಹಲಿ ಪ್ರಯಾಣದ ಬಗ್ಗೆ ಎಲ್ಲರಲ್ಲೂ ಕುತೂಹಲ ಹುಟ್ಟಿದೆ.
ರಾಜೇ ಅವರ ಪುತ್ರ ಒಡೆತನದ ಹೋಟೆಲ್ಗಳ ಸರಣಿಯಲ್ಲಿ ಲಲಿತ್ ಮೋದಿ ಹೂಡಿಕೆ ಮಾಡಿರುವುದು ಸತ್ಯ. ಆದರೆ ಅದು ಕಾನೂನಿನ ಎಲ್ಲೆ ಮೀರಿಲ್ಲ ಎಂದು ರಾಜಸ್ಥಾನದ ಬಿಜೆಪಿ ನಾಯಕರು ಪ್ರತಿಪಾದಿಸಿದ್ದಾರೆ.












Click it and Unblock the Notifications