ಛೇ.. ಕೊರೊನಾ ವೈರಸ್ ಚಿಕಿತ್ಸೆ ನೀಡಿದ 40 ವೈದ್ಯರಿಗೇ ಅಂಟಿದ ಮಹಾಮಾರಿ!
ನವದೆಹಲಿ, ಏಪ್ರಿಲ್.26: ಕೊರೊನಾ ವೈರಸ್ ಸೋಂಕಿನಿಂದ ಬಳಲುತ್ತಿರುವ ಸಾವಿರ ಸಾವಿರ ಜನರ ಪ್ರಾಣ ಉಳಿಸಲು ವೈದ್ಯರು ವಾರಿಯರ್ಸ್ ರೀತಿಯಲ್ಲಿ ಹಗಲು-ರಾತ್ರಿ ಶ್ರಮಿಸುತ್ತಿದ್ದಾರೆ. ನವದೆಹಲಿಯಲ್ಲಿ ಅಂಥ ವಾರಿಯರ್ಸ್ ಗೆ ಕೊರೊನಾ ಸೋಂಕು ಅಂಟಿಕೊಂಡಿದೆ.
ನವದೆಹಲಿಯ ಜಹಾಂಗೀರ್ ಪುರ್ ಪ್ರದೇಶದಲ್ಲಿ ಇರುವ ಬಾಬು ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಕೊರೊನಾ ವೈರಸ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿದ್ದ 44 ಮಂದಿ ವೈದ್ಯಕೀಯ ಸಿಬ್ಬಂದಿಗೆ ಕೊವಿಡ್-19 ಸೋಂಕು ತಗಲಿರುವುದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ.
ವಿಡಿಯೋ; ಕೊರೊನಾ ಪೀಡಿತರಿಗೆ ಔಷಧಿ, ಆಹಾರ ಕೊಡುವ ರೋಬೋಟ್
44 ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಾಕ್ಷಣ ಎಚ್ಚೆತ್ತುಕೊಂಡ ಆಸ್ಪತ್ರೆಯ ಆಡಳಿತ ಮಂಡಳಿಯು ಆಸ್ಪತ್ರೆಗೆ ಬೀಗ ಜಡಿದಿದ್ದು, ಸ್ಯಾನಿಟೈಸ್ ಮಾಡಲಾಗಿದೆ ಎಂದು ನವದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ.
ಬಾಬು ಜಗಜೀವನ್ ರಾಮ್ ಆಸ್ಪತ್ರೆಯಲ್ಲಿ ಸೇವೆ ಸ್ಥಗಿತ:
ನವದೆಹಲಿಯ ಬಾಬು ಜಗಜೀವನ್ ರಾಮ್ ಆಸ್ಪತ್ರೆಯ ವೈದ್ಯರು ಸೇರಿದಂತೆ 44 ಸಿಬ್ಬಂದಿಗೆ ಕೊರೊನಾ ವೈರಸ್ ಸೋಂಕು ತಗಲಿರುವುದು ಸ್ಪಷ್ಟವಾಗುತ್ತಿದ್ದಂತೆ ವೈದ್ಯಕೀಯ ಸೇವೆ ಸ್ಥಗಿತಗೊಳಿಸಲಾಗಿದೆ ಎಂದು ದೆಹಲಿ ಆರೋಗ್ಯ ಇಲಾಖೆಯು ತಿಳಿಸಿದೆ. ಬಾಬು ಜಗಜೀವನ್ ರಾಮ್ ಆಸ್ಪತ್ರೆಯನ್ನು ಕ್ಲೋಸ್ ಮಾಡಿದ್ದು ಸ್ಯಾನಿಟೈಸ್ ಮಾಡಲಾಗಿದೆ.
ಶನಿವಾರ ಪತ್ತೆಯಾದ 111 ಕೊರೊನಾ ವೈರಸ್ ಸೋಂಕಿತ ಪ್ರಕರಣಗಳು ಸೇರಿದಂತೆ ನವದೆಹಲಿಯಲ್ಲಿ 2,625 ಜನರಲ್ಲಿ ಸೋಂಕು ಇರುವುದು ಸ್ಪಷ್ಟವಾಗಿದೆ. ಈ ಪೈಕಿ 869 ಮಂದಿ ಗುಣಮುಖರಾಗಿದ್ದರೆ, 1,518 ಸೋಂಕಿತರಿಗೆ ಚಿಕಿತ್ಸೆಯನ್ನು ಮುಂದುವರಿಸಲಾಗಿದೆ. ಇದುವರೆಗೂ ರಾಷ್ಟ್ ರಾಜಧಾನಿಯಲ್ಲಿ ಕೊರೊನಾ ವೈರಸ್ ನಿಂದಾಗಿ 54 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಸತ್ಯಂದ್ರ ಜೈನ್ ಮಾಹಿತಿ ನೀಡಿದ್ದಾರೆ.