ಗಣೇಶ ಹಬ್ಬದ ನಂತರವೂ ನೌಕರರ ಬಾಯಿಗೆ ಲಡ್ಡು
ನವದೆಹಲಿ, ಸೆ.5: ಕೇಂದ್ರ ಸರ್ಕಾರಿ ನೌಕರರ ಬಾಯಿಗೆ ಗೌರಿ ಗಣೇಶ ಹಬ್ಬದ ನಂತರವೂ ಎನ್ ಡಿಎ ಸರ್ಕಾರ ಲಡ್ಡು ಹಾಕಿದೆ. ನೌಕರರ ತುಟ್ಟಿ ಭತ್ಯೆಯನ್ನು (ಡಿಎ) ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಶೇ.7ರಷ್ಟು ಏರಿಸುವ ಮೂಲಕ ಕೇಂದ್ರ ಸರ್ಕಾರವು ವಿಶೇಷ ಕೊಡುಗೆ ನೀಡಿದೆ.
ಈ ಮೂಲಕ ಪ್ರಮಾಣ ಶೇ.100ರಿಂದ ಶೇ.107ಕ್ಕೆ (ಮೂಲ ವೇತನದ ಮೇಲೆ) ಏರಿದೆ. ಹೀಗಾಗಿ ನೌಕರರ ಮೂಲ ವೇತನಕ್ಕಿಂತ ಇನ್ನು ಡಿ.ಎ. ಪ್ರಮಾಣವೇ ಹೆಚ್ಚಲಿದೆ.
ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದಾಗಿ 30 ಲಕ್ಷ ಕೇಂದ್ರ ಸರ್ಕಾರಿ ನೌಕರರು ಹಾಗೂ 50 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

6ನೇ ವೇತನ ಆಯೋಗದ ಶಿಫಾರಸಿನಂತೆ ಕೈಗೊಳ್ಳಲಾಗಿರುವ ಈ ಕ್ರಮದಿಂದ ಸರ್ಕಾರದ ಬೊಕ್ಕಸಕ್ಕೆ ವಾರ್ಷಿಕ 12,808 ಕೋಟಿ ರೂ. ಹೊರೆಯಾಗಲಿದೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.
ತುಟ್ಟಿ ಭತ್ಯೆಯನ್ನು 12 ತಿಂಗಳಿನ ಗ್ರಾಹಕ ಬೆಲೆ ಸೂಚ್ಯಂಕದ ಆಧಾರದ ಮೇರೆಗೆ ನಿಗದಿಪಡಿಸಲಾಗುತ್ತದೆ. 2013ರ ಜುಲೈ 1ರಿಂದ 2014ರ ಜೂನ್ 30ರವರೆಗೆ ಚಿಲ್ಲರೆ ಹಣದುಬ್ಬರ ಶೇ.7.25 ಇದ್ದಿದ್ದರಿಂದ ತುಟ್ಟಿಭತ್ಯೆಯನ್ನು ಶೇ.7ರಷ್ಟು ಏರಿಸಲಾಗಿದೆ.
ಮನಮೋಹನ್ ಸಿಂಗ್ ಅವರ ಯುಪಿಎ 2 ಸರ್ಕಾರ ವೇತನ ಮತ್ತು ನಿವೃತ್ತಿ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ 7ನೇ ವೇತನ ಆಯೋಗವನ್ನು ಕೇಂದ್ರದ ಯುಪಿಎ ಸರ್ಕಾರ ಪ್ರಕಟ ಮಾಡಿತ್ತು.ಫೆ.28ರಂದು ಶೇ 10ರಷ್ಟು ಡಿಎ ಹೆಚ್ಚಳ ಮಾಡಿತ್ತು[ವಿವರ ಇಲ್ಲಿ ಓದಿ]
ಉದ್ದಿಮೆಗಳ ನಿಯಂತ್ರಕಕ್ಕೆ ಸಮಿತಿ: ಸುಪ್ರೀಂಕೋರ್ಟ್ ನಿರ್ದೇಶನದಂತೆ ಉದ್ದಿಮೆಗಳಿಂದ ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ. ಈ ಸಮಿತಿಯಲಿ ನಿತಿನ್ ಗಡ್ಕರಿ, ಅನಂತ್ ಕುಮಾರ್, ಪಿಯೂಶ್ ಗೋಯಲ್, ಪ್ರಕಾಶ್ ಜಾವಡೇಕರ್ ಸದಸ್ಯರಾಗಿದ್ದಾರೆ.












Click it and Unblock the Notifications