ಭಾರತದಲ್ಲಿ ಅಳಿವಿನ ಅಂಚಿನಲ್ಲಿದೆಯಾ ಹುಲಿ ಸಂತತಿ?
ನವದೆಹಲಿ, ಆಗಸ್ಟ್, 12 : ದಿನಂಪ್ರತಿ ಸಾವನ್ನಪ್ಪುತ್ತಿರುವ ಹುಲಿಗಳ ಅಂಕಿ ಅಂಶ ನೋಡಿದರೆ ಹುಲಿ ಸಂತತಿ ಅಳಿವಿನ ಅಂಚಿಗೆ ತಲುಪುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿದೆ. ಕಳೆದ ಏಳು ತಿಂಗಳುಗಳಿನಲ್ಲಿ ಭಾರತದಲ್ಲಿ 41 ಹುಲಿಗಳು ಸಾವನ್ನಪ್ಪಿರುವುದರ ಬಗ್ಗೆ ವರದಿಯಾಗಿದೆ.
ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮತ್ತು ವನ್ಯ ಜೀವಿ ವ್ಯಾಪಾರ ಮೇಲ್ವಿಚಾರಣ ಜಾಲ ಸಂಸ್ಥೆ ಟ್ರಾಫಿಕ್ ಇಂಡಿಯಾ ಕೈಗೊಂಡ ಅಧ್ಯಯನದಿಂದ ಈ ಮಾಹಿತಿ ದೊರೆತಿದ್ದು, ಅತಿಹೆಚ್ಚು ಹುಲಿಗಳು ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ತಮಿಳುನಾಡಿನಲ್ಲಿ ಸಾವನ್ನಪ್ಪಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.[ಕುದುರೆಮುಖ ಇನ್ನು ಸಂರಕ್ಷಿತ ಹುಲಿಧಾಮ]
ಅಧ್ಯಯನ ಮಾಹಿತಿ ನೀಡಿದ ಕಂದಾಯ ಮತ್ತು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ವಿಕಾಸ್ ಖರ್ಗೆ ಹುಲಿಸಂರಕ್ಷಣಾ ಯೋಜನೆ ಮೂಲಕ ಜನರಿಗೆ ಅರಿವು ಮೂಡಿಸುವ ಎಲ್ಲಾ ಪ್ರಯತ್ನ ಕೈಗೊಳ್ಳಲಿದ್ದೇವೆ. ಇದಕ್ಕಾಗಿ ವಿಶೇಷ ಹುಲಿ ರಕ್ಚಣಾ ಪಡೆಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು
ವಿಶೇಷ ತಂಡವು ಸುಮಾರು 120 ಮಂದಿಯನ್ನು ಒಳಗೊಳ್ಳಲಿದ್ದು, ಇವರು ರಾಜ್ಯದ 4 ಮೀಸಲು ಅರಣ್ಯಪ್ರದೇಶದಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಜೊತೆಯಲ್ಲಿ ಗ್ರಾಮಸ್ಥರನ್ನು ಹುಲಿ ಸಂರಕ್ಷಣಾ ಪಡೆಯಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹುಲಿ ಚರ್ಮಕ್ಕೆ ಭಾರೀ ಬೇಡಿಕೆ ಇರುವುದೇ ಈ ದುಸ್ಥಿತಿಗೆ ಪ್ರಮುಖ ಕಾರಣ. ಕೆಲವೊಂದು ಹುಲಿಗಳು ಸಹಜವಾಗಿ ಸಾವನ್ನಪ್ಪಿದರೆ, ಇನ್ನು ಕೆಲವು ಊರೊಳಗೆ ಪ್ರವೇಶ ಪಡೆದ ಕಾರಣ ನೀಡಿ ವಿಷ ಪ್ರಾಶನ, ಬಲೆ ಬೀಸಿ ಗ್ರಾಮಸ್ಥರು, ಪೊಲೀಸರು ಕೊಂದು ಹಾಕಿದ್ದಾರೆ. ಇನ್ನಷ್ಟು ಹುಲಿಗಳನ್ನು ಶಾರ್ಪ್ ಶೂಟರ್ ಗಳು ಹತ್ಯೆ ಮಾಡಿರುವುದರಿಂದ ಹುಲಿಗಳ ಸಂತತಿ ಅಪಾಯದ ಅಂಚಿಗೆ ತಲುಪಿದೆ ಎಂದು ಹಿರಿಯ ಅರಣ್ಯ ಅಧಿಕಾರಿ ತಿಳಿಸಿದರು.
ಶಿವಮೊಗ್ಗ, ಆಗಸ್ಟ್, 12 : ನಗರದಿಂದ ಸುಮಾರು 3 ರಿಂದ 4 ಕಿಮೀ ಅಂತರದಲ್ಲಿರುವ ತ್ಯಾವರೆಕೊಪ್ಪ ಹುಲಿ ಸಿಂಹಧಾಮದಲ್ಲಿ ಹುಲಿಯೊಂದು ಮೃತಪಟ್ಟಿದೆ. ಕಳೆದ ಕೆಲವು ದಿನಗಳಿಂದ ಕಿಡ್ನಿ ವೈಫಲ್ಯದ ಸಮಸ್ಯೆಯಿಂದ ಬಳಲುತ್ತಿದ್ದ 14 ವರ್ಷದ ಕುಶ ಎಂಬ ಗಂಡು ಹುಲಿ ಬುಧವಾರ ಸಾವನ್ನಪ್ಪಿದೆ.
ನೋವಿನಿಂದ ನರಳುತ್ತಿದ್ದ ಹುಲಿಯು ಆಹಾರ ಸೇವಿಸದೆ ತೀವ್ರ ನಿತ್ರಾಣವಾಗಿದ್ದ ಹುಲಿಗೆ ವೈದ್ಯರಿಂದ ಶುಶ್ರೂಷೆ ಮಾಡಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದೆ ಎಂದು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಸಿಬ್ಬಂದಿ ಹಾಗೂ ಸಿಂಹಧಾಮದ ಪಶು ವೈದ್ಯರು ತಿಳಿಸಿದರು.