ಸಂಸತ್ತಿನಲ್ಲಿ ಕಾಂಗ್ರೆಸ್ಸಿನ ಗ್ರಹಚಾರ ಬಿಡಿಸಿದ ನರೇಂದ್ರ ಮೋದಿ
Recommended Video

ನವದೆಹಲಿ, ಫೆಬ್ರವರಿ 07: ಬಜೆಟ್ ಅಧಿವೇಶನದ ಕೊನೆಯ ದಿನವಾದ ಇಂದು ಮೋದಿ ಅವರು ತಮ್ಮ ಅವಧಿಯ ಕೊನೆಯ ಸಂಸತ್ ಭಾಷಣದಲ್ಲಿ ಕಾಂಗ್ರೆಸ್ ಮತ್ತು ಮಹಾಘಟಬಂಧನ್ ಮೇಲೆ ವಾಗ್ದಾಳಿ ನಡೆಸಿ, ತಾವು ಇಷ್ಟು ವರ್ಷ ಮಾಡಿದ ಕಾರ್ಯವನ್ನು ಸದನದ ಮುಂದಿಟ್ಟರು.
ವಂದನಾ ನಿರ್ಣಯದ ಭಾಷಣ ಮಾಡಿದ ಮೋದಿ ಕಾಂಗ್ರೆಸ್ ಕಾಲದಲ್ಲಿ ಯಾವ ರೀತಿ ಕೆಲಸ ಆಗಿತ್ತು ನಾವು ಹೇಗೆ ಕೆಲಸ ಮಾಡುತ್ತಿದ್ದೇವೆ ಎಂದು ತಮ್ಮ ಅವಧಿಯಲ್ಲಿ ನಿರ್ಮಿಸಿದ ಶೌಚಾಲಯಗಳ ಲೆಕ್ಕ, ನೀಡಿದ ಗ್ಯಾಸ್ ಕನೆಕ್ಷನ್, ವಿದ್ಯುತ್ ತಲುಪಿಸಿದ ಹಳ್ಳಿಗಳ ಸಂಖ್ಯೆಗಳನ್ನು ಸದನದ ಮುಂದಿಟ್ಟರು ಮೋದಿ. ಅವರ ಭಾಷಣದಲ್ಲಿ ಲೋಕಸಭೆ ಚುನಾವಣೆಯ ಪ್ರಚಾರದ ಅಂಶಗಳೂ ಇದ್ದವು.
ವಿರೋಧ ಪಕ್ಷಗಳು ಮೋದಿ ವಿರುದ್ಧ ಆಡಿದ ಆರೋಪಗಳಿಗೆ ಉತ್ತರ ನೀಡಿದ ಮೋದಿ, ತಮ್ಮ ಭಾಷಣದಲ್ಲಿ ಇಂದಿರಾ ಗಾಂಧಿ, ನೆಹರೂ ಅವರನ್ನು ಎಳೆದು ತಂದರು. ಮೋದಿ ಸರ್ಕಾರ ಕೇಂದ್ರ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡಿದೆ ಎಂಬ ಆರೋಪಕ್ಕೆ ಉತ್ತರಿಸಿದ ಮೋದಿ, ಇಂದಿರಾ ಗಾಂಧಿ ಅವರು ಕೇಂದ್ರ ಸಂಸ್ಥೆಗಳನ್ನು ಆಟಿಕೆಗಳಂತೆ ಬಳಸಿದ್ದರು ಎಂದರು. ಕನಿಷ್ಟ 50 ಸರ್ಕಾರಗಳನ್ನು ಇಂದಿರಾ ಗಾಂಧಿ ಉರುಳಿಸಿದ್ದರು ಎಂದು ಮೋದಿ ಹೇಳಿದರು.

'ಬಿಸಿ, ಎಡಿ' ವ್ಯಂಗ್ಯ ಮಾಡಿದ ಮೋದಿ
ತಮ್ಮ ಸುಧೀರ್ಘ ಭಾಷಣದಲ್ಲಿ ಕಾಂಗ್ರೆಸ್ನ 50 ವರ್ಷದ ಆಡಳಿತವನ್ನು ಪದೇ ಪದೇ ಟೀಕಿಸಿದ ಮೋದಿ, ಕಾಂಗ್ರೆಸ್ ಆಡಳಿತಕ್ಕೆ ಮುನ್ನಾ ಅವಧಿಯನ್ನು ಬಿಸಿ (ಬಿಫೋರ್ ಕಾಂಗ್ರೆಸ್) ಸ್ವಾತಂತ್ರ್ಯದ ನಂತರ (ಎಡಿ) ಆಫ್ಟರ್ ಡೈನೆಸ್ಟಿ (ವಂಶಪಾರಂಪರ್ಯದ ನಂತರ) ಎಂದು ಮೋದಿ ಗೇಲಿ ಮಾಡಿದರು. 'ಕಾಂಗ್ರೆಸ್ ಮುಕ್ತ ಭಾರತ' ನನ್ನ ಘೋಷಣೆ ಅಲ್ಲ, ಮಹಾತ್ಮಾ ಗಾಂಧಿಯದ್ದು ಅವರು ಅಂದೇ ಹೇಳಿದ್ದರು ಕಾಂಗ್ರೆಸ್ ಅನ್ನು ವಿಸರ್ಜಿಸಬೇಕು ಎಂದಿದ್ದರು ಎಂದರು.

'ಜನಕ್ಕೆ ಬೆರಕೆ ಸರ್ಕಾರ ಬೇಕಿಲ್ಲ'
ಮಹಾಘಟಬಂಧನ್ ಬಗ್ಗೆಯೂ ಮಾತನಾಡಿದ ಮೋದಿ, ಬೆರೆಕೆ ಸರ್ಕಾರ (ಸಮ್ಮಿಶ್ರ ಸರ್ಕಾರ) ಯಾವಾಗಲೂ ಒಳ್ಳೆಯದಲ್ಲ, ಅದು ಜನರಿಗೆ ಗೊತ್ತಿದೆ, ಈ ಬಾರಿ ಅಂತೂ ಮಹಾಬೆರಕೆ ಆಗಿಬಿಟ್ಟಿದೆ ಅವರು ಎಂದೂ ಸಂಸತ್ಗೆ ಬರುವುದಿಲ್ಲ ಎಂದರು. ಕೊಲ್ಕತ್ತದಲ್ಲಿ ಒಂದಾಗುವ ಅವರು ಕೇರಳಕ್ಕೆ ಹೋದರೆ ಒಬ್ಬರ ಮುಖ ಒಬ್ಬರು ನೋಡಿಕೊಳ್ಳಲಾರರು, ಎಂದು ಮಹಾಘಟಬಂಧನ್ ನಡುವೆ ಇರುವ ಪ್ರಾದೇಶಕ ರಾಜಕೀಯ ದ್ವೇಷದ ಬಗ್ಗೆ ಟೀಕೆ ಮಾಡಿದರು.

'ನೀವು ಸೇನೆಗೆ ಅಪಮಾನ ಮಾಡಿದ್ದೀರಿ'
ನೀವು ಕೇಂದ್ರದ ಸಂಸ್ಥೆಗಳಿಗೆ ಅವಮಾನ ಮಾಡಿದ್ದೀರಿ ಎಂದು ಆರೋಪ ಮಾಡಿದ ಮೋದಿ, ಅದರ ಜೊತೆಗೆ ಸೇನೆಯನ್ನೂ ಅವಮಾನಿಸಿದ್ದೀರಿ, ಸೇನೆಯ ಮುಖ್ಯಸ್ಥನನ್ನು ನೀವು ಗುಂಡಾ ಎಂದು ಕರೆದಿದ್ದೀರಿ, ಈ ಪಾಪಕ್ಕೆ ಜನ ಶಿಕ್ಷೆ ನೀಡುತ್ತಾರೆ ಎಂದರು. ಕಾಂಗ್ರೆಸ್ ಆಡಳಿತ ಇದ್ದಾಗ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯೋಚನೆ ಸಹ ಮಾಡುವ ಹಾಗಿರಲಿಲ್ಲ. ಆಗ ಸೇನೆಯವರಿಗೆ ಬುಲೆಟ್ ಫ್ರೂಫ್ ಜಾಕೆಟ್ ಇರಲಿಲ್ಲ, ಸರಿಯಾದ ಬೂಟುಗಳು ಇರಲಿಲ್ಲ, ಸೇನೆಯ ಬಳಿ ಸರಿಯಾದ ಆಯುಧಗಳು ಸಹ ಇರಲಿಲ್ಲ, ಆದರೆ ನಾವು ಅದನ್ನೆಲ್ಲಾ ನೀಡಿದೆವು ಎಂದು ಮೋದಿ ವಾಗ್ದಾಳಿ ನಡೆಸಿದರು.

ರಫೇಲ್ ಬಗ್ಗೆ ಮೋದಿ ಮಾತು
ರಫೇಲ್ ಬಗ್ಗೆ ಮಾಡಿದ ಆರೋಪದ ಬಗ್ಗೆಯೂ ಮಾತನಾಡಿದ ಮೋದಿ, ರಫೆಲ್ ಬಗ್ಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿಮ್ಮ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಸುಪ್ರಿಂ ಸಹ ನಾವು ಸರಿ ಇದ್ದೇವೆ ಎಂದಿದೆ. ಆದರೆ ನೀವೇಕೆ ಅದರ ಹಿಂದೆ ಬಿದ್ದಿದ್ದೀರಿ? ರಫೆಲ್ ಅಂತಹಾ ಶಸ್ತ್ರ ಸಜ್ಜಿತ ತಂತ್ರಜ್ಞಾನ ಸೇನೆಯನ್ನು ಸೇರಬಾರದು ಎಂಬ ದುರುದ್ದೇಶ ನಿಮ್ಮದು ಎಂದು ಕಾಂಗ್ರೆಸ್ ವಿರುದ್ಧ ಗುಟುರು ಹಾಕಿದರು.

'ದೇಶ ಬಿಟ್ಟು ಹೋದವರನ್ನು ಕರೆತರುತ್ತೇವೆ'
ಕೋಟ್ಯಂತರ ಸಾಲ ಪಡೆದು ದೇಶ ಬಿಟ್ಟು ಹೋದವರ ಬಗ್ಗೆಯೂ ಮಾತನಾಡಿದ ಮೋದಿ, ಅವರು 9000 ಕೋಟಿ ತೆಗೆದುಕೊಂಡರು ಹೋದರೆ ನಾವು ಕಾನೂನು ತಂದು ಅದರ ಎರಡರಷ್ಟು ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುತ್ತಿದ್ದೇವೆ. ಅಷ್ಟೆ ಅಲ್ಲ ಹೊಸ ಕಾನೂನು ತಂದು ಅವರನ್ನು ಭಾರತಕ್ಕೆ ಕರೆತರುತ್ತಿದ್ದೇವೆ ಎಂದು ಮೋದಿ ಹೇಳಿದರು.

ಕರ್ನಾಟಕದ ಉದಾಹರಣೆ
ಸಾಲಮನ್ನಾ ಬಗ್ಗೆ ಮಾತನಾಡಿದ ಮೋದಿ, ನಾವು ರೈತರ ಲಾಭ ಹೆಚ್ಚು ಮಾಡಲು ಯತ್ನ ಮಾಡುತ್ತಿದ್ದೇವೆ, ಸಾಲಮನ್ನಾ ಕೆಲವು ಕೋಟಿ ರೈತರಿಗಷ್ಟೆ ಉಪಯೋಗ ಆಗುತ್ತಿತ್ತು. ಆದರೆ ನಾವು ಮಾಡಿರುವ ಯೋಜನೆ ಬಡ ರೈತನಿಗೆ ಸೇರುತ್ತದೆ ಎಂದರು. ಕರ್ನಾಟಕದ ಉದಾಹರಣೆ ಹೇಳಿದ ಮೋದಿ, ದೇವೇಗೌಡ ಅವರು ಮಣ್ಣಿನ ಮಗ ಎಂದು ಕರೆದುಕೊಳ್ಳುತ್ತಿದ್ದಾರೆ ಅಲ್ಲಿಯೂ ಸಾಲಮನ್ನಾ ಮಾಡುತ್ತಿದ್ದಾರೆ ಆದರೆ ಈ ವರೆಗೆ 7000 ರೈತರ ಸಾಲಮಾತ್ರ ಮನ್ನಾ ಆಗಿದೆ ಎಂದರು. ರಾಜಸ್ಥಾನ ಹಾಗೂ ಮಧ್ಯ ಪ್ರದೇಶದಲ್ಲಿ ಸಹ ಇದೇ ಪರಿಸ್ಥಿತಿ ಇದೆ ಎಂದರು.

ಮೋದಿಯಿಂದ ಸುದೀರ್ಘ ಭಾಷಣ
ಸುದೀರ್ಘವಾದ ಭಾಷಣ ಮಾಡಿದ ಮೋದಿ, ಕಾಂಗ್ರೆಸ್ ಅನ್ನು ಅಡಿಗಡಿಗೆ ಟೀಕಿಸಿದರು. ಕವಿತೆಗಳ ಮೂಲಕ , ತಮಾಷೆ. ವ್ಯಂಗ್ಯದ ಮೂಲಕ ವಿರೋಧ ಪಕ್ಷಗಳನ್ನು ಕುಟುಕಿದರು. ಕಾಂಗ್ರೆಸ್ ಅವರು ಸರ್ಕಾರ ಉರುಳಿಸುವುದರಲ್ಲಿ ಖ್ಯಾತರು. ಅವರು ಈಗ ಮಹಾನ್ ಭ್ರಷ್ಟ್ರರ ಜೊತೆ ಸೇರಿದ್ದಾರೆ. ಆಧುನಿಕ ಮತದಾರ ಬುದ್ಧಿವಂತನಾಗಬೇಕಿದೆ ಎಂದು ಮೋದಿ ಹೇಳಿದರು.












Click it and Unblock the Notifications