ಈಶಾನ್ಯ ದೆಹಲಿ ಗಲಭೆ: ಶಿವ ದೇಗುಲ ರಕ್ಷಿಸಿದ ಮುಸ್ಲಿಮರು
ನವದೆಹಲಿ, ಫೆಬ್ರವರಿ 28: ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟವರ ಸಂಖ್ಯೆ 42ಕ್ಕೆ ಏರಿಕೆಯಾಗಿದೆ. ಪೌರತ್ವ ತಿದ್ದುಪಡಿ ಪರ-ವಿರೋಧ ಹೋರಾಟಗಾರರ ನಡುವೆ ಈಶಾನ್ಯ ದೆಹಲಿಯಲ್ಲಿ ಆರಂಭವಾದ ಗಲಭೆ, ಹಿಂಸಾಚಾರದಿಂದಾಗಿ ಜನರು ಆತಂಕಗೊಂಡಿದ್ದಾರೆ. ದೆಹಲಿ ಗಲಭೆ ಕೋಮುಗಲಭೆಯ ಸ್ವರೂಪವನ್ನು ಪಡೆದಿತ್ತು. ಇಂಥ ಪ್ರಕ್ಷುಬ್ದ ವಾತವರಣದಲ್ಲಿ ಶಿವ ದೇಗುಲವೊಂದನ್ನು ಮುಸ್ಲಿಮರು ರಕ್ಷಿಸಿದ ಘಟನೆ ಬೆಳಕಿಗೆ ಬಂದಿದೆ.
ಈಶಾನ್ಯ ದೆಹಲಿಯಲ್ಲಿ ಬೂದಿ ಮುಚ್ಚಿದ ಕೆಂಡದಂಥ ಪರಿಸ್ಥಿತಿ ಇರುವಾಗ ಇಂದಿರಾ ವಿಹಾರ್ ಪ್ರದೇಶದಲ್ಲಿ ಫೆಬ್ರವರಿ 25ರಂದು ಶಿವ ದೇಗುಲವೊಂದು ದುಷ್ಕರ್ಮಿಗಳ ದಾಳಿಗೆ ತುತ್ತಾಗುವ ಭೀತಿಯಲ್ಲಿತ್ತು.
ದೆಹಲಿ ಹಿಂಸಾಚಾರ ಹತ್ತಿಕ್ಕಲು ಬಂದ ಐಪಿಎಸ್ ಅಧಿಕಾರಿ ಯಾರು?
ಈ ಸಂದರ್ಭದಲ್ಲಿ ಸಮೀಪದ ನಿವಾಸಿ ಶಕೀಲ್ ಅಹ್ಮದ್ ಹಾಗೂ ಇತರೆ ನಿವಾಸಿಗಳು ಶಿವ ದೇಗುಲವನ್ನು ದೊಂಬಿಯಿಂದ ರಕ್ಷಿಸಿದ್ದಾರೆ. ಇಂದಿರಾ ವಿಹಾರ್ ಪ್ರದೇಶದ ಪ್ರಾರ್ಥನಾ ಮಂದಿರಗಳನ್ನು ಹಾಳುಗೆಡವಲು ಬರುತ್ತಿದ್ದ ಗಲಭೆಕೋರರು ಶಿವ ದೇಗುಲ ಹಾಗೂ ಮಸೀದಿಯ ಬಳಿ ಇರುವ ನಿರೀಕ್ಷೆಯಿತ್ತು. ಮುಸ್ಲಿಮರು ಹೆಚ್ಚಾಗಿ ಇರುವ ಪ್ರದೇಶದಲ್ಲಿ ಮಂದಿರವನ್ನು ಕೆಡವಲು ಬಿಟ್ಟು, ಮಸೀದಿಯನ್ನು ಉಳಿಸಿಕೊಂಡರು ಎಂಬ ಅಪವಾದ ಬರಬಾರದು ಎಂಬ ದೃಷ್ಟಿಯಿಂದ ಎಲ್ಲಾ ಪ್ರಾರ್ಥನಾ ಮಂದಿರ, ದೇಗುಲಗಳನ್ನು ರಕ್ಷಿಸತೊಡಗಿದೆವು. ಗಲಭೆಕೋರರೆಲ್ಲರೂ ಬೇರೆ ಪ್ರದೇಶದಿಂದ ಬಂದವರು ಎಂಬುದು ತಕ್ಷಣಕ್ಕೆ ಗೊತ್ತಾಯಿತು. ಸ್ಥಳೀಯ ನಿವಾಸಿಗಳು, ಎನ್ ಜಿಒಗಳು, ಸರ್ಕಾರದ ಅಧಿಕಾರಿಗಳ ನೆರವಿನಿಂದ ನಮ್ಮ ಪ್ರದೇಶದ ಮಂದಿರ, ಮಸೀದಿ ಉಳಿಸಿಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.
ಇಲ್ಲಿ ತನಕ 42 ಮಂದಿಯ ಬಲಿ ಪಡೆದಿರುವ ಗಲಭೆಗೆ ನೂರಾರು ಮಂದಿ ಗಾಯಾಳುವಾಗಿದ್ದಾರೆ. ಶಾಂತಿ ಸುವ್ಯವಸ್ಥೆ ಕಾಪಾಡಲು ಎಎಪಿ ಹಾಗೂ ಕೇಂದ್ರ ಸರ್ಕಾರ ಶ್ರಮ ಪಡುತ್ತಿವೆ.