ಐತಿಹಾಸಿಕ ಕ್ಷಣ: ರಾಜ್ಯಸಭೆಯಲ್ಲೂ ತ್ರಿವಳಿ ತಲಾಖ್ ಪಾಸ್
ನವದೆಹಲಿ, ಜುಲೈ 30: ಎನ್ ಡಿಎ ಸರ್ಕಾರದ ಮಹಾತ್ವಾಕಾಂಕ್ಷಿ ಸಂಕಲ್ಪಗಳಲ್ಲೊಂದಾಗಿದ್ದ 'ತ್ರಿವಳಿ ತಲಾಖ್ ಮಸೂದೆ'ಗೆ ಕೊನೆಗೂ ರಾಜ್ಯ ಸಭೆಯಲ್ಲೂ ಅಂಗೀಕಾರ ದೊರಕಿದೆ.
ಎರಡು ಬಾರಿ ಲೋಕಸಭೆಯಲ್ಲಿ ಮಂಡನೆಯಾದರೂ ರಾಜ್ಯ ಸಭೆಯಲ್ಲಿ ಮಂಡನೆಯಾಗದೆ ಉಳಿದಿದ್ದ ಈ ಮಸೂದೆಯನ್ನು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ರಾಜ್ಯ ಸಭೆಯ ಮುಂದಿಟ್ಟಿದ್ದರು. 2017 ರ ಮುಸ್ಲಿಂ ಮಹಿಳೆಯರ ಕಾಯ್ದೆ(ವಿವಾಹ ಹಕ್ಕು ರಕ್ಷಣೆ) ಯನ್ನು ತ್ರಿವಳಿ ತಲಾಖ್ ಕಾನೂನು ಎಂದೇ ಕರೆಯಲಾಗುತ್ತದೆ.
ಅದರಲ್ಲಿ ಕೆಲವು ಮಹತ್ವದ ತಿದ್ದುಪಡಿಯನ್ನು ತಂದು ಇದೀಗ ಜಾರಿಗೆ ತರಲಾಗಿದ್ದು, ರಾಜ್ಯಸಭೆಯ ಸಮ್ಮತಿಯ ನಂತರ ರಾಷ್ಟ್ರಪತಿಗಳ ಅಂಕಿತವಷ್ಟೇ ಬಾಕಿ ಉಳಿದಿದೆ. ರಾಷ್ಟ್ರಪತಿಗಳು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆಯೇ ಈ ಮಸೂದೆ ಕಾನೂನಾಗಲಿದೆ.
ಮಸೂದೆಯ ಪರವಾಗಿ 99 ಮತ್ತು ಮಸೂದೆಯ ವಿರುದ್ಧ 84 ಮತಗಳು ಬಿದ್ದ ಕಾರಣ, ಮಸೂದೆಗೆ ಬಹುಮತ ದೊರೆತು ರಾಜ್ಯ ಸಭೆಯಲ್ಲಿ ಅಂಗೀಕಾರಗೊಂಡಿದೆ.
ಜುಲೈ 25 ರಂದು ಲೋಕಸಭೆಯಲ್ಲಿ ತ್ರಿವಳಿ ತಲಾಖ್ ನಿಷೇಧ ಮಸೂದೆ ಮಂಡಿಸಲಾಗಿತ್ತು. ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಈ ಮಸೂದೆಯನ್ನು ವಿರೋಧಿಸಿದ್ದರೂ, ಎನ್ ಡಿಎ ಸರ್ಕಾರ ಮಸೂದೆಯ ಪರ ಬಹುಮತ ಗಳಿಸಿತ್ತು.

ಆದರೆ ರಾಜ್ಯ ಸಭೆಯಲ್ಲಿ ಬಿಜೆಪಿಗೆ ಬಹುಮತವಿಲ್ಲದ ಕಾರಣ, ಮತ್ತು ಜೆಡಿಯು, ವೈಎಸ್ ಆರ್ ಕಾಂಗ್ರೆಸ್ ಮುಂತಾದ ಪಕ್ಷಗಳು ಕಾಯ್ದೆಯ ಪರ ಮತಚಲಾಯಿಸಲು ಒಪ್ಪದ ಕಾರಣ ಈ ಬಾರಿಯೂ ರಾಜ್ಯ ಸಭೆಯಲ್ಲಿ ಮಸೂದೆ ಮಂಡನೆಯಾಗುವುದು ಅನುಮಾನ ಎನ್ನಲಾಗಿತ್ತು.
ರಾಜ್ಯ ಸಭೆಯಲ್ಲಿ ಎನ್ ಡಿಎ ಬಲಾಬಲ 109(245) ಸಂಸದರು. ಆದರೆ ಅಗತ್ಯವಿರುವ ಮತಗಳು 123(245) ಆಗಿತ್ತು. ಸಂಸದರ ಗೈರಿನ ಆದಾರದ ಮೇಲೆ ಬಹುಮತಕ್ಕೆ ಅಗತ್ಯವಿದ್ದ ಸಂಖ್ಯೆಯೂ ಕಡಿಮೆಯಾಗಿದ್ದಲ್ಲದೆ, ಮಸೂದೆಯನ್ನು ವಿರೋಧಿಸುತ್ತಿದ್ದ ಜೆಡಿಯು, ಟಿಆರ್ ಎಸ್ ಪಕ್ಷಗಳು ಕಲಾಪದಿಂದ ಆಚೆ ನಡೆದಿದ್ದರಿಂದ 'ಮಸೂದೆಗೆ ಒಪ್ಪಿಗೆ ಇಲ್ಲ' ಎಂಬ ಮತಗಳೂ ಕಡಿಮೆಯಾದವು. ಇದು ಎನ್ ಡಿಎಗೆ ಉಪಕಾರಿಯಾಯಿತು.
ಪತ್ನಿಯರಿಗೆ ದಿಡೀರ್ ವಿಚ್ಛೇದನ ನೀಡುವ ಈ ತ್ರಿವಳಿ ತಲಾಖ್ ಪದ್ಧತಿಯ ವಿರುದ್ಧ ಕೆಲವು ಮುಸ್ಲಿಂ ಮಹಿಳೆಯರೇ ಧ್ವನಿ ಎತ್ತಿದ್ದರು. ತ್ರಿವಳಿ ತಲಾಖ್ ಅನ್ನು ಅಪರಾಧ ಎಂದು ಪರಿಗಣಿಸಿ, ಲಿಖಿತ ಕಾನೂನಾತ್ಮಕ ದಾಖಲೆಗಳಿಲ್ಲದೆ, ಮೌಖಿಕವಾಗಿ ಅಥವಾ ಎಸ್ ಎಂಎಸ್ ಮೂಲಕ ವಿಚ್ಛೇದನ ನೀಡುವವರಿಗೆ ಜೈಲು ಶಿಕ್ಷೆ ನೀಡುವ ಈ ಕಾಯ್ದೆಯನ್ನು ಇಂದು ರಾಜ್ಯಸಭೆಯಲ್ಲಿ ಮಂಡನೆ ಮಾಡಲಾಗಿದ್ದು, ರಾಷ್ಟ್ರಪತಿಗಳ ಅಂಕಿತ ದೊರೆಯುತ್ತಿದ್ದಂತೆಯೇ ಈ ಕಾನೂನಾಗಿ ಜಾರಿಗೆ ಬರಲಿದೆ.












Click it and Unblock the Notifications