ಕೆನ್ನೆಗೇಟು ಬಿದ್ದಷ್ಟೂ ಆಮ್ ಆದ್ಮಿ ದೇಣಿಗೆ ಹೆಚ್ತಿದೆ!
ನವದೆಹಲಿ, ಏ. 10: ಮದರ್ ತೆರೇಸಾ ಅವರು ಆರಂಭದ ದಿನಗಳಲ್ಲಿ ನಿರ್ಗತಿಕ ಮಕ್ಕಳಿಗಾಗಿ ಶ್ರೀಮಂತ ವ್ಯಾಪಾರಿಯ ಮುಂದೆ ಕೈಯೊಡ್ಡಿದರಂತೆ. ಆದರೆ ವ್ಯಾಪಾರಿ ಮದರ್ ಕೈ ಮೇಲೆ ಉಗಿದನಂತೆ. ಅದನ್ನು ತಮ್ಮ ಬಟ್ಟೆಗೆ ಒರೆಸಿಕೊಂಡ ತೆರೇಸಾ, ಮತ್ತೆ ಅದೇ ಕೈಯನ್ನು ಅದೇ ವ್ಯಕ್ತಿಯ ಮುಂದೆ ಒಡ್ಡುತ್ತಾ, ಅದು (ಉಗುಳು) ನನಗಿರಲಿ, ಈಗ ಈ ನಿರ್ಗತಿಕ ಮಕ್ಕಳಿಗಾಗಿ ಏನಾದರೂ ಸಹಾಯ ಮಾಡಿ ಅಂದರಂತೆ. ಇದರ ಸತ್ಯಾಸತ್ಯತೆ ಪಕ್ಕಕ್ಕಿಟ್ಟು ಹೇಳುವುದಾದರೆ ಅಪಮಾನಗಳನ್ನೇ ಬಹುಮಾನಗಳನ್ನಾಗಿ ಸ್ವೀಕರಿಸಿ ಮೇರುವ್ಯಕ್ತಿಗಳಾದವರಿದ್ದಾರೆ.

ಹಾಗೆ ಅರವಿಂದ ಕೇಜ್ರಿವಾಲ್ ಅವರು ದಾಳಿಗೊಳಗಾದಾಗೆಲ್ಲಾ ಆಮ್ ಆದ್ಮಿ ಪಕ್ಷಕ್ಕೆ ಹರಿದುಬರುತ್ತಿರುವ ದೇಣಿಗೆ ಸಿಕ್ಕಾಪಟ್ಟೆ ಹೆಚ್ಚಾಗುತ್ತಿದೆಯಂತೆ! ಅರವಿಂದ ಕೇಜ್ರಿವಾಲ್ ಮಂಗಳವಾರ ಕೆನ್ನೇಟು ತಿಂದ ಬಳಿಕ ಪಕ್ಷಕ್ಕೆ 85 ಲಕ್ಷ ರೂ ದೇಣಿಗೆ ಹರಿದುಬಂದಿದೆಯಂತೆ. ಹಿಂದಿನ ದಿನ 29 ಲಕ್ಷ ರೂ. ಸಂಗ್ರಹವಾಗಿತ್ತು. ಮಂಗಳವಾರ ಪಕ್ಷದ ವೆಬ್ ಸೈಟ್ ವಿಪರೀತ ಟ್ರಾಫಿಕ್ ನಿಂದಾಗಿ ಕ್ರಾಶ್ ಸಹ ಆಗಿದೆ.
ಆದರೆ ಇದಕ್ಕೆ ಅಪವಾದವೆಂಬಂತೆ ಅಹಮದಾಬಾದಿನಲ್ಲಿ ಮಾರ್ಚ್ 8ರಂದು ಕೇಜ್ರಿವಾಲ್ ಮೇಲೆ ದಾಳಿ ನಡೆದಾಗ ದೇಣಿಗೆ ಸಂಗ್ರಹ ಕುಸಿಯಿತಂತೆ. ರೂ 16.46 ಲಕ್ಷದಿಂದ 13 ಲಕ್ಷಕ್ಕೆ ಕುಸಿದಿದ್ದಂತೆ.
ಅಂದಹಾಗೆ ಕಳೆದ ಡಿಸೆಂಬರ್ 12ರಿಂದ 111 ರಾಷ್ಟ್ರಗಳಿಂದ 86,649 ದಾನಿಗಳು AAPಗೆ 24.53 ಕೋಟಿ ರೂ. ದೇಣಿಗೆ ನೀಡಿದ್ದಾರಂತೆ. ಆದರೆ ಇದು ಸಾಲದಾಗಿದೆ. ಏಕೆಂದರೆ ಪಕ್ಷದ ದೇಣಿಗೆ ಸಂಗ್ರಹ ಉದ್ದೇಶ 100 ಕೋಟಿ ರೂ. ನಷ್ಟಿದೆ.
ಏಪ್ರಿಲ್ 4ರಂದು ದಕ್ಷಿಣ ದಿಲ್ಲಿಯ ದಕ್ಷಿಣಾಪುರಿಯಲ್ಲಿ ವ್ಯಕ್ತಿಯೊಬ್ಬ ಗುದ್ದು ಕೊಟ್ಟನಲ್ಲಾ? ಅಂದೂ ಅಷ್ಟೆ 1.35 ಕೋಟಿ ರೂ ಅಂತರ್ಜಾಲದ ಮೂಲಕವೇ ತೇಲಿಬಂತಂತೆ. ಅದರ ಹಿಂದಿನ ದಿನ ಪಕ್ಷದ ಖಾತೆಗೆ 35 ಲಕ್ಷ ರೂ ಜಮೆಯಾಗಿತ್ತಂತೆ. ಮತ್ತೊಬ್ಬ ಆಪ್ ನಾಯಕನ ಮೇಲೆ ಮಾರ್ಚ್ 25ರಂದು ಇಂಕು, ಮೊಟ್ಟೆ ಎಸೆದಾಗಾಗ ಹಿಂದಿನ ದಿನ 19 ಲಕ್ಷ ರೂ ಇದ್ದಿದ್ದು 48 ಲಕ್ಷ ರೂ.ಗೆ ಏರಿತಂತೆ.












Click it and Unblock the Notifications