ಅಮ್ಮನ ಕ್ಷೇತ್ರದಲ್ಲಿ ಮಗಳ ಸ್ಪರ್ಧೆ: ರಾಯ್ ಬರೇಲಿಗೆ ಪ್ರಿಯಾಂಕಾ?
ನವದೆಹಲಿ, ಜನವರಿ 23: ಕೊನೆಗೂ ಸಕ್ರಿಯ ರಾಜಕಾರಣಕ್ಕೆ ಕಾಲಿಡುವ ಮೂಲಕ ಪ್ರಿಯಾಂಕಾ ಗಾಂಧಿ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿರುವ ಪ್ರಿಯಾಂಕಾ ಗಾಂಧಿ ರಾಜಕಾರಣದ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಅದರ ಬೆನ್ನಲ್ಲೇ ಅವರ ಲೋಕಸಭಾ ಚುನಾವಣೆಯ ಸ್ಪರ್ಧೆಯ ಬಗ್ಗೆಯೂ ಚರ್ಚೆ ಆರಂಭವಾಗಿದೆ.
Breaking news:ಪ್ರಿಯಾಂಕಾ ಗಾಂಧಿ ಸಕ್ರಿಯ ರಾಜಕಾರಣಕ್ಕೆ ಎಂಟ್ರಿ
ಸೋನಿಯಾ ಗಾಂಧಿ ಅವರು ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದು, ರಾಜಕೀಯ ಚಟುವಟಿಕೆಗಳಲ್ಲಿ ಹಿಂದಿನಂತೆ ಸಕ್ರಿಯರಾಗಿ ಭಾಗವಹಿಸುತ್ತಿಲ್ಲ. ಅಲ್ಲದೆ, ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಅನುಮಾನ. ಹೀಗಾಗಿ ಈ ಹಿಂದೆಯೇ ಪ್ರಿಯಾಂಕಾ ಗಾಂಧಿ ಚುನಾವಣಾ ಕಣಕ್ಕೆ ಇಳಿಯುವ ಬಗ್ಗೆ ಚರ್ಚೆಗಳು ಹುಟ್ಟಿಕೊಂಡಿದ್ದವು.
ಈಗ ಎಐಸಿಸಿ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಅವರ ನೇಮಕ ಈ ಚರ್ಚೆಯ ಕಾವನ್ನು ತೀವ್ರಗೊಳಿಸಿದೆ. ಉತ್ತರ ಪ್ರದೇಶದ ರಾಯ್ ಬರೇಲಿ ಸೋನಿಯಾ ಗಾಂಧಿ ಅವರ ಕಾಯಂ ಲೋಕಸಭಾ ಕ್ಷೇತ್ರವಾಗಿತ್ತು. ಸತತ ನಾಲ್ಕು ಅವಧಿಗಳಲ್ಲಿ ಸೋನಿಯಾ ಇಲ್ಲಿಂದ ಆರಿಸಿ ಬಂದಿದ್ದಾರೆ. ಈಗ ಅನಾರೋಗ್ಯದ ಕಾರಣ ಸೋನಿಯಾ ಸ್ಪರ್ಧೆಗೆ ಇಳಿಯುವ ಸಾಧ್ಯತೆ ತೀರಾ ಕಡಿಮೆ. ಹೀಗಾಗಿ ಪ್ರಿಯಾಂಕಾ ಗಾಂಧಿ ರಾಯ್ ಬರೇಲಿಯಿಂದ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತ.
ಸೋನಿಯಾ ಭೇಟಿ ರದ್ದು
ಎರಡು ದಿನಗಳ ಕ್ಷೇತ್ರ ಭೇಟಿಗಾಗಿ ಸೋನಿಯಾ ಗಾಂಧಿ ಅವರು ಬುಧವಾರ ರಾಯ್ ಬರೇಲಿಗೆ ಆಗಮಿಸಬೇಕಾಗಿತ್ತು. ಅನಾರೋಗ್ಯದ ಕಾರಣ ಅವರು ತಮ್ಮ ಕ್ಷೇತ್ರಕ್ಕೆ ಕೆಲವೇ ಬಾರಿ ಭೇಟಿ ನೀಡಿದ್ದಾರೆ. ಈ ಬಾರಿ ಕೂಡ ಸುಮಾರು ಒಂದೂವರೆ ವರ್ಷದ ಬಳಿಕ ಅವರು ಅಲ್ಲಿಗೆ ತೆರಳುವ ಯೋಜನೆ ಇತ್ತು. ಆದರೆ, ರಾಹುಲ್ ಗಾಂಧಿ ಅವರ ಅಮೇಥಿ ಭೇಟಿ ನಿಗದಿಯಂತೆ ನಡೆಯಲಿದೆ.
Array |
ಕಾರ್ಯಕರ್ತರ ಸಂಭ್ರಮ
ಪ್ರಿಯಾಂಕಾ ಗಾಂಧಿ ಅವರನ್ನು ಉತ್ತರ ಪ್ರದೇಶ ಪೂರ್ವ ಭಾಗದ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಿಸಿದ ಸುದ್ದಿ ತಿಳಿಯುತ್ತಿದ್ದಂತೆಯೇ ರಾಯ್ ಬರೇಲಿಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂಭ್ರಮ ಮನೆಮಾಡಿದೆ. ಉತ್ತರ ಪ್ರದೇಶದ ಪೂರ್ವ ಭಾಗದಲ್ಲಿನ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಖುಷಿಪಟ್ಟರು.
ಪ್ರಿಯಾಂಕಾ ನನ್ನ ಉತ್ತರಾಧಿಕಾರಿ ಎಂದಿದ್ದ ಇಂದಿರಾ ಗಾಂಧಿ!
ಕುಟುಂದವರಿಗಷ್ಟೇ ಅವಕಾಶ
ಪ್ರಿಯಾಂಕಾ ಗಾಂಧಿ ಅವರನ್ನು ಎಐಸಿಸಿ ಕಾರ್ಯದರ್ಶಿಯನ್ನಾಗಿ ನೇಮಿಸಿದ ರಾಹುಲ್ ಗಾಂಧಿ ನಿರ್ಧಾರವನ್ನು ಕಾಂಗ್ರೆಸ್ನ ಮಾಜಿ ಕಾರ್ಯಕರ್ತ ಶೆಹಜಾದ್ ಪೂನಾವಾಲಾ ಟೀಕಿಸಿದ್ದಾರೆ.
'ಮನೀಶ್ ತಿವಾರಿ ಒಮ್ಮೆ ನನ್ನ ಬಳಿ ಹೇಳಿದಂತೆ ಕಾಂಗ್ರೆಸ್ ಪಕ್ಷವು ಕುಟುಂಬ ಪೋಷಿತ ಮಾಲೀಕತ್ವದ್ದು. ಇಂದು ಪ್ರಿಯಾಂಕಾ ವಾದ್ರಾ ಅವರ ಪ್ರವೇಶವು ಪಕ್ಷವು ಕೇವಲ 'ನಾಮಧಾರರು' ಮತ್ತು ಕುಟುಂಬದ ಸದಸ್ಯರಿಗಷ್ಟೇ ಅವಕಾಶ ಕಲ್ಪಿಸುತ್ತದೆ ಹೊರತು ಪಕ್ಷಕ್ಕಾಗಿ ಶ್ರಮಿಸುವ ಕಾರ್ಯಕರ್ತರಿಗಲ್ಲ ಎಂಬುದನ್ನು ಸಾಬೀತುಪಡಿಸಿದೆ ಎಂದು ಅವರು ಹೇಳಿದ್ದಾರೆ.
ರಾಹುಲ್ ಅಸಮರ್ಥ ಎಂಬುದು ಸಾಬೀತಾಯಿತು
ಪಕ್ಷವನ್ನು ಮುನ್ನಡೆಸಲು ರಾಹುಲ್ ಗಾಂಧಿ ಅಸಮರ್ಥ ಎಂಬುದನ್ನು ಕೂಡ ಇದು ಸಾಬೀತುಪಡಿಸಿದೆ. ಅವರು ಮುಂದೆ ತಮ್ಮ ಅಮೇಥಿ ಕ್ಷೇತ್ರವನ್ನು ಮತ್ತು ಅಧ್ಯಕ್ಷತೆಯನ್ನು ಸಹೋದರಿ ಪ್ರಿಯಾಂಕಾ ವಾದ್ರಾ ಅವರಿಗೆ ಬಿಟ್ಟುಕೊಡಲಿದೆ. ಶೀಘ್ರದಲ್ಲಿಯೇ ಮುಂದೆ ರಾಬರ್ಟ್ ವಾದ್ರಾ ಅವರ ಪ್ರವೇಶವನ್ನೂ ಸ್ವಾಗತಿಸುತ್ತೇನೆ. ಸ್ವಾತಂತ್ರ್ಯಾನಂತರದ ಸುಮಾರು ಏಳು ದಶಕಗಳಲ್ಲಿ ಗಾಂಧಿ-ನೆಹರೂ ಕುಟುಂಬವೇ 45 ವರ್ಷ ಕಾಂಗ್ರೆಸ್ಅನ್ನು ಆಳಿದೆ. ಬೇಟನ್ಅನ್ನು ಮುಂದೆ ಪ್ರಿಯಾಂಕಾ ಅವರ ಮಕ್ಕಳಿಗೂ ಹಸ್ತಾಂತರಿಸಲಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ.
2019 ರಲ್ಲಿ ರಾಯ್ಬರೇಲಿಯಲ್ಲಿ ಧೂಳೆಬ್ಬಿಸಲಿದ್ದಾರಾ ಪ್ರಿಯಾಂಕಾ ವಾದ್ರಾ?