ಎಎಪಿ ಪ್ರಣಾಳಿಕೆ ಬಿಡುಗಡೆ: ದೆಹಲಿಗೆ ಸಂಪೂರ್ಣ ರಾಜ್ಯ ಮಾನ್ಯತೆಗೆ ಹೋರಾಟ
ನವದೆಹಲಿ, ಏಪ್ರಿಲ್ 25: ದೆಹಲಿಯಲ್ಲಿ ಚುನಾವಣಾ ಅಖಾಡಕ್ಕೆ ಇಳಿದಿರುವ ಆಡಳಿತಾರೂಢ ಆಮ್ ಆದ್ಮಿ ಪಕ್ಷ, ತನ್ನ ಚುನಾವಣಾ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿದೆ.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದಲ್ಲಿ ಎಎಪಿ ದೆಹಲಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.
ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಪಡೆದುಕೊಳ್ಳುವುದಾಗಿ ಹೇಳಿರುವ ಎಎಪಿ, 'ನಾವು ಸಂಪೂರ್ಣ ರಾಜ್ಯ ಸ್ಥಾನಮಾನ ಪಡೆದುಕೊಳ್ಳುತ್ತೇವೆ' ಎಂಬುದನ್ನೇ ಪ್ರಣಾಳಿಕೆಯ ಶೀರ್ಷಿಕೆಯನ್ನಾಗಿಸಿದೆ. ಪಕ್ಷದ ಹಿರಿಯ ನಾಯಕರು ಮತ್ತು ದೆಹಲಿಯಿಂದ ಸ್ಪರ್ಧಿಸುತ್ತಿರುವ ಎಲ್ಲ ಏಳು ಎಎಪಿ ಅಭ್ಯರ್ಥಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ದೆಹಲಿಗೆ ಸಂಪೂರ್ಣ ರಾಜ್ಯ ಸ್ಥಾನಮಾನ ಸಿಗುವಂತೆ ಮಾಡುವುದೇ ಪಕ್ಷದ ಪ್ರಮುಖ ಹೋರಾಟವಾಗಲಿದೆ ಎಂದು ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರನ್ನು ತಡೆಯಲು ಎಲ್ಲ ಪ್ರಯತ್ನವನ್ನೂ ಮಾಡುತ್ತೇವೆ ಎಂದರು.
ದೇಶವನ್ನು ವಿಭಜಿಸುವ ಶಕ್ತಿಗಳನ್ನು ಸೋಲಿಸುವುದೇ ಪರಮಗುರಿಯಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯ ಪ್ರಣಾಳಿಕೆಗಳಲ್ಲಿ ಒಂದೇ ಧ್ಯೇಯವಿದೆ. ಒಂದು ವೇಳೆ ಮೋದಿ ಮತ್ತೆ ಪ್ರಧಾನಿಯಾದರೆ ಅದಕ್ಕೆ ರಾಹುಲ್ ಗಾಂಧಿ ಅವರೇ ಹೊಣೆಗಾರರಾಗುತ್ತಾರೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯ ಸ್ಥಾನಮಾನ
ದೆಹಲಿಗೆ ಎಎಪಿ ಸಂಪೂರ್ಣ ರಾಜ್ಯ ಸ್ಥಾನಮಾನ ತಂದುಕೊಡಲಿದೆ. ದೆಹಲಿಯ ಏಳು ಸೀಟುಗಳು ಕೇಂದ್ರದಲ್ಲಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಲಿವೆ. ರಾಜ್ಯ ಮಾನ್ಯತೆ ಪಡೆಯುವ ಮೂಲಕ ದೆಹಲಿ ಪೊಲೀಸರು ರಾಜ್ಯದ ಮುಖ್ಯಮಂತ್ರಿಗೆ ಉತ್ತರದಾಯಿಗಳಾಗಿರುವಂತೆ ಮಾಡಲಾಗುವುದು. ದೆಹಲಿ ಪೊಲೀಸ್ ಇಲಾಖೆಯಲ್ಲಿ ಮೂರನೇ ಎರಡರಷ್ಟು ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲಾಗುವುದು ಎಂದರು.

ಏಕತೆ ಅಪಾಯದಲ್ಲಿ
2019ರ ಚುನಾವಣೆ ಸಂಪೂರ್ಣವಾಗಿ ಭಾರತದ ಪ್ರಜಾಪ್ರಭುತ್ವವನ್ನು ಮತ್ತು ಸಂವಿಧಾನವನ್ನು ರಕ್ಷಿಸುವುದರ ಕುರಿತಾಗಿದೆ. ಇಂದು ಭಾರತದ ಏಕತೆಯು ಅಪಾಯದಲ್ಲಿದೆ. ಈ ಕಾರಣದಿಂದ ಪ್ರಸಕ್ತ ವರ್ಷ ಯಾವುದೇ ಒಂದು ಪಕ್ಷದ ಪ್ರಣಾಳಿಕೆಯಾಗಿಲ್ಲ,. ಈ ಚುನಾವಣೆ ದೇಶವನ್ನು ವಿಭಜನಾ ಶಕ್ತಿಗಳಿಂದ ರಕ್ಷಿಸುವುದಾಗಿದೆ.

ರಾಹುಲ್ ಗಾಂಧಿ ಹೊಣೆಗಾರ
ಕಾಂಗ್ರೆಸ್ ಏಳು ಸ್ಥಾನಗಳಲ್ಲಿ ಗೆಲ್ಲುವುದಾದರೆ ದೆಹಲಿಯ ಏಳೂ ಸ್ಥಾನಗಳನ್ನು ಬಿಟ್ಟುಕೊಡಲು ನಾವು ಸಿದ್ಧರಿದ್ದೆವು. ಆದರೆ, ಅದು ಒಂದೇ ಒಂದು ಸ್ಥಾನವನ್ನು ಗೆಲ್ಲುವ ಸ್ಥಿತಿಯಲ್ಲಿ ಇಲ್ಲ. ಕಾಂಗ್ರೆಸ್ ಹಿಂದೂ ಮತಗಳನ್ನು ಪಡೆಯುವುದಿಲ್ಲ. ಅದರ ಬಗ್ಗೆ ಮುಸ್ಲಿಮರು ಕೂಡ ಗೊಂದಲದಲ್ಲಿದ್ದಾರೆ. ಒಂದು ವೇಳೆ ಮೋದಿ ಮತ್ತೆ ಪ್ರಧಾನಿಯಾಗಿ ಸರ್ಕಾರ ರಚಿಸಿದರೆ ಅದಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೇ ಹೊಣೆಗಾರರು. ಚುನಾವಣೆ ಬಳಿಕ ಯಾವುದೇ ಜಾತ್ಯತೀತ ಮಹಾಘಟಬಂಧನವನ್ನು ಬೆಂಬಲಿಸಲು ಸಿದ್ಧ.

ಮೋದಿ-ಶಾ ತಡೆಯಲು ಹೋರಾಟ
ಅಮಿತ್ ಶಾ-ನರೇಂದ್ರ ಮೋದಿ ಜೋಡಿಯನ್ನು ತಡೆಯಲು ಎಲ್ಲವನ್ನೂ ಮಾಡಲಿದ್ದೇವೆ. ಯಾವುದೇ ಮಹಾಮೈತ್ರಿಕೂಟದ ಸರ್ಕಾರವನ್ನು ನಾವು ಬೆಂಬಲಿಸಲಿದ್ದೇವೆ. ನಾವು ಮೊದಲು ಭಾರತೀಯರು. ಬಳಿಕ ಹಿಂದೂ ಅಥವಾ ಮುಸ್ಲಿಮರು.

ರಾಜ್ಯದ ಸ್ಥಾನಮಾನ ದೊರೆತರೆ
ದೆಹಲಿಯ ದೆಹಲಿ ವಿಶ್ವವಿದ್ಯಾಲಯದಲ್ಲಿ 12ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡುವಂತೆ ಹೋರಾಟ. ದೆಹಲಿಯಲ್ಲಿ ನೆಲೆಸಿರುವವರಿಗೆ ಶೇ 85ರಷ್ಟು ದೆಹಲಿ ಸರ್ಕಾರದ ಉದ್ಯೋಗಗಳು ಮೀಸಲಾಗಿರಬೇಕು. ರಾಜ್ಯ ಮಾನ್ಯತೆ ಪಡೆದುಕೊಂಡ ವಾರದಲ್ಲಿಯೇ ಎಲ್ಲ ಗುತ್ತಿಗೆ ನೌಕರರನ್ನು ಕಾಯಂ ಉದ್ಯೋಗಿಗಳನ್ನಾಗಿ ನೇಮಕ ಮಾಡಿಕೊಳ್ಳಲಾಗುವುದು. ಸಂಪೂರ್ಣ ರಾಜ್ಯ ಮಾನ್ಯತೆಯಿಂದ ನಾವು ದೆಹಲಿ ನಾಗರಿಕರಿಗೆ ಸುಲಭ ಮತ್ತು ಅತಿ ಕಡಿಮೆ ಇಎಂಐಗಳಲ್ಲಿ ಹೆಚ್ಚು ಮನೆಗಳನ್ನು ನಿರ್ಮಿಸಿಕೊಡುವ ಗುರಿ ಹೊಂದಿದ್ದೇವೆ.












Click it and Unblock the Notifications