ಪ್ರಧಾನಿ ಮೋದಿ ನೇತೃತ್ವದ ಸರ್ವಪಕ್ಷ ಸಭೆಗೆ ಗೈರಾಗುವವರು ಯಾರ್ಯಾರು?
ನವದೆಹಲಿ, ಜೂನ್ 19: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನವದೆಹಲಿಯಲ್ಲಿಂದು(ಜೂನ್ 19) ನಡೆಯಲಿರುವ ಸರ್ವಪಕ್ಷ ಸಭೆಗೆ ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಡಿಎಂಕೆಯ ಎಂಕೆ ಸ್ಟಾಲಿನ್ ಸೇರಿದಂತೆ ಹಲವು ನಾಯಕರು ಗೈರಾಗಲಿದ್ದಾರೆ.
ನರೇಂದ್ರ ಮೋದಿ ಅವರ "ಒಂದು ದೇಶ, ಒಂದು ಚುನಾವಣೆ" ಆಶಯವನ್ನು ಜಾರಿಗೆ ತರುವ ಬಗ್ಗೆ ಮತ್ತು ಅದರ ಸಾಧಕ-ಬಾಧಕಗಳನ್ನು ತಿಳಿಯುವ ಬಗ್ಗೆ ಚರ್ಚಿಸಲು ಈ ಸಭೆ ಕರೆಯಲಾಗಿದೆ.
ಆದರೆ ಇಂಥ ಮಹತ್ವದ ವಿಷಯದ ಬಗ್ಗೆ ಚರ್ಚಿಸಲು ಒಂದೇ ದಿನದಲ್ಲಿ ಸಾಧ್ಯವಿಲ್ಲ ಎಂದಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಾವು ಸಭೆಗೆ ಹಾಜರಾಗುವುದಿಲ್ಲ ಎಂದಿದ್ದಾರೆ.

ಇತ್ತ ಡಿಎಂಕೆ ನಾಯಕ ಎಂಕೆ ಸ್ಟಾಲಿನ್ ಅವರೂ ಸಭೆಗೆ ಹಾಜರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟಿಆರ್ ಎಸ್ ಮುಖಂಡ, ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರೂ ಸಭೆಗೆ ಆಗಮಿಸುತ್ತಿಲ್ಲ. ಆದರೆ ಟಿಡಿಪಿಯಿಂದ ಸಂಸದ ಗಲ್ಲಾ ಜಯದೇವ್ ಅವರು ಸಭೆಗೆ ಆಗಮಿಸಲಿದ್ದಾರೆ.
"ಒಂದು ದೇಶ, ಒಂದು ಚುನಾವಣೆ" ಪರಿಕಲ್ಪನೆಯ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಭಾಗವಹಿಸಲಿರುವ ಕಾಂಗ್ರೆಸ್ ಈ ಪರಿಕಲ್ಪನೆಯನ್ನು ವಿರೋಧಿಸುವುದಾಗಿ ಈಗಾಗಲೇ ಹೇಳಿದೆ.
ಅಷ್ಟೇ ಅಲ್ಲದೆ, 2022 ರಲ್ಲಿ ಮಹಾತ್ಮಾ ಗಾಂಧಿಜೀ ಅವರ 150 ನೇ ಜಜನ್ಮದಿನೋತ್ಸವದ ಆಚರಣೆಯನ್ನು ಅದ್ಧೂರಿಯಾಗಿ ಆಚರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅದಕ್ಕೆ ಎಲ್ಲ ಪಕ್ಷಗಳ ಸಲಹೆ, ಸೂಚನೆಗಳನ್ನೂ ಆಲಿಸಲಿದೆ.












Click it and Unblock the Notifications