ಸಂಸತ್ತಿನಲ್ಲಿ ಸಭೆ ನಡೆಸಿದ ವಿರೋಧ ಪಕ್ಷಗಳ ನಾಯಕರು
ನವದೆಹಲಿ, ಜು.28: ಸಂಸತ್ತಿನಲ್ಲಿ ಮಾನ್ಸೂನ್ ಅಧಿವೇಶನದ ನಡುವೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅಧ್ಯಕ್ಷತೆಯಲ್ಲಿ ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಮಂಗಳವಾರ ಸಭೆ ನಡೆಸಿದ್ದಾರೆ. ಸಭೆಯಲ್ಲಿ ಪೆಗಾಸಸ್ ಸ್ಪೈವೇರ್ ಫೋನ್ ಹ್ಯಾಕಿಂಗ್ ಹಗರಣದ ವಿಚಾರದಲ್ಲಿ ಗೃಹ ಸಚಿವ ಅಮಿತ್ ಶಾ ಹಾಗೂ ಕೇಂದ್ರ ಸರ್ಕಾರದ ವಿರುದ್ದ ತನಿಖೆಗೆ ಒತ್ತಾಯಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.
ಪೆಗಾಸಸ್ ಹಗರಣದ ಬಗ್ಗೆ ಎಲ್ಲಾ ವಿರೋಧ ಪಕ್ಷಗಳು ಲೋಕಸಭೆಯಲ್ಲಿ ಬುಧವಾರ ಮುಂದೂಡಿಕೆ ನೋಟಿಸ್ ನೀಡುತ್ತವೆ ಎಂದು ಮೂಲಗಳು ತಿಳಿಸಿವೆ.
ಬುಧವಾರ ವಿರೋಧ ಪಕ್ಷಗಳು ಸಭೆ ನಡೆಸಿದೆ. ಈ ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಮುಖಂಡ, ವಯನಾಡು ಸಂಸದ ರಾಹುಲ್ ಗಾಂಧಿ ವಹಿಸಿದ್ದರು. ಬಿಜೆಪಿ ಸರ್ಕಾರದ ವಿರುದ್ದ ಪೆಗಾಸಸ್ ವಿಚಾರದಲ್ಲಿ ಪ್ರಹಾರ ನಡೆಸಲು ಎಲ್ಲಾ ವಿರೋಧ ಪಕ್ಷಗಳು ಒಂದಾಗಿದೆ ಎಂದು ಹೇಳಲಾಗಿದೆ.

ಪ್ರತಿಪಕ್ಷದ ನಾಯಕರ ಸಭೆಯಲ್ಲಿ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮಾತನಾಡಿ, ''ನಾವು ಸಂಸತ್ತನ್ನು ಕಾರ್ಯನಿರ್ವಹಿಸಲು ಅನುಮತಿಸುತ್ತಿಲ್ಲ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರವು ಪ್ರತಿಪಕ್ಷಗಳನ್ನು ಸುಮ್ಮನೆ ದೂಷಿಸುತ್ತಿದೆ,'' ಎಂದು ಹೇಳಿದರು.
ಹಾಗೆಯೇ ''ನಾವು ದೇಶದ ನಾಗರಿಕರು, ರೈತರು ಮತ್ತು ದೇಶದ ಭದ್ರತೆಗೆ ಸಂಬಂಧಿಸಿದ ವಿಷಯಗಳನ್ನು ಎತ್ತುತ್ತಿದ್ದೇವೆ,'' ಎಂದು ಕೂಡಾ ಹೇಳಿದರು. ಈ ವೇಳೆ ಪ್ರತಿಪಕ್ಷ ನಾಯಕರು ರಾಹುಲ್ಗೆ ಬೆಂಬಲ ಸೂಚಿಸಿದರು ಎಂದು ಎಎನ್ಐ ವರದಿ ಮಾಡಿದೆ.
ಇನ್ನು ಸಂಸತ್ತಿನಲ್ಲಿ ಪ್ರತಿಪಕ್ಷ ನಾಯಕರ ಸಭೆಯ ನಂತರ ಈ ಬಗ್ಗೆ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ''ಹಣದುಬ್ಬರ, ಪೆಗಾಸಸ್ ಮತ್ತು ರೈತರ ಸಮಸ್ಯೆಗಳ ವಿಚಾರದಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳಲು ಬಯಸುವುದಿಲ್ಲ. ನಾವು ಸದನದಲ್ಲಿ ಚರ್ಚೆಯನ್ನು ಬಯಸುತ್ತೇವೆ,'' ಎಂದು ತಿಳಿಸಿದ್ದಾರೆ.
ರಾಹುಲ್ ಗಾಂಧಿಯಲ್ಲದೆ, ಕಾಂಗ್ರೆಸ್ ಮುಖಂಡ ಅಧೀರ್ ರಂಜನ್ ಚೌಧರಿ ವಿರೋಧ ಪಕ್ಷದ ಸಭೆಯಲ್ಲಿ ಇದ್ದರು. ಹಾಗೆಯೇ ಡಿಎಂಕೆ ಪರವಾಗಿ ಟಿಆರ್ ಬಾಲು ಮತ್ತು ಕನಿಮೋಳಿ ಹಾಜರಾಗಿದ್ದರು, ಎನ್ಸಿಪಿಯ ಸುಪ್ರಿಯಾ ಸುಳೆ, ಶಿವಸೇನೆಯ ಅರವಿಂದ ಸಾವಂತ್, ಕೇರಳ ಕಾಂಗ್ರೆಸ್ (ಎಂ ) ನ ಥಾಮಸ್ ಚಾಜಿಕಾದನ್, ರಾಷ್ಟ್ರೀಯ ಸಮ್ಮೇಳನದ ಹಸ್ನೈನ್ ಮಸೂದಿ, ಆರ್ಎಸ್ಪಿಯ ಎನ್ಕೆ ಪ್ರೇಮಚಂದ್ರನ್, ಮುಸ್ಲಿಂ ಲೀಗ್ನ ಇಟಿ ಮೊಹಮ್ಮದ್ ಬಶೀರ್ ಮತ್ತು ಸಿಪಿಎಂನ ಎಸ್ ವೆಂಕಟೇಶನ್ ಮತ್ತು ಎಎಮ್ ಆರಿಫ್ ಈ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ವರದಿ ವಿವರಿಸಿದೆ.
''ಸಭೆಯಲ್ಲಿ, ಪ್ರತಿಪಕ್ಷದ ಕೆಲವು ನಾಯಕರು ಪ್ರತಿಪಕ್ಷಗಳ ಏಕತೆಯೇ ಬಿಜೆಪಿಗೆ ಸಂದೇಶವಾಗಬೇಕು. ನಮ್ಮಲ್ಲಿ ಯಾವುದೇ ವಿಭಜನೆ ಅಥವಾ ತಪ್ಪು ತಿಳುವಳಿಕೆ ಇರಬಾರದು,'' ಎಂದು ವಾದಿಸಿದರು. ಇನ್ನು ಮತ್ತೋರ್ವ ವಿಪಕ್ಷ ನಾಯಕರು, ''ಸದನದಲ್ಲಿ ಇನ್ನಷ್ಟು ತೀಕ್ಷ್ಣವಾಗಿ ನಾವು ಮಾತನಾಡಬೇಕು. ಸರ್ಕಾರದ ವಿರುದ್ದ ಘೋಷಣೆ ಕೂಗಬೇಕು,'' ಎಂದು ವಾದಿಸಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ಬಿಜೆಪಿಯ ಮಾಜಿ ಮೈತ್ರಿ ಪಕ್ಷ ಶಿರೋಮಣಿ ಅಕಾಲಿ ದಳ ನೇತೃತ್ವದ ಏಳು ವಿರೋಧ ಪಕ್ಷಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ಗೆ ಪತ್ರ ಬರೆದು ರೈತರ ಸಮಸ್ಯೆ ಮತ್ತು ಸಂಸತ್ತಿನಲ್ಲಿ ನಡೆಯುತ್ತಿರುವ ವಿವಾದಗಳ ಬಗ್ಗೆ ಚರ್ಚಿಸಲು ಸರ್ಕಾರವನ್ನು ನಿರ್ದೇಶಿಸುವಂತೆ ಒತ್ತಾಯಿಸಿದರು. ಬಿಎಸ್ಪಿ, ಎನ್ಸಿಪಿ, ಆರ್ಎಲ್ಪಿ, ನ್ಯಾಷನಲ್ ಕಾನ್ಫರೆನ್ಸ್, ಸಿಪಿಐ ಮತ್ತು ಸಿಪಿಐ (ಎಂ) ಪತ್ರಕ್ಕೆ ಸಹಿ ಹಾಕಿದ ಪಕ್ಷಗಳಾಗಿವೆ. ಪಂಜಾಬ್ನ ಅಕಾಲಿ ದಳದ ಪ್ರಮುಖ ಪ್ರತಿಸ್ಪರ್ಧಿ ಕಾಂಗ್ರೆಸ್ ಸಹಿ ಹಾಕಲಿಲ್ಲ.
(ಒನ್ಇಂಡಿಯಾ ಸುದ್ದಿ)












Click it and Unblock the Notifications