ಆಸ್ಪತ್ರೆ ನಿರ್ಲಕ್ಷ್ಯದಿಂದ ಪತ್ರಕರ್ತ ಸಾವು, ಆಸ್ಪತ್ರೆ ವಿರುದ್ಧ ಎಫ್ಐಆರ್
ನವದೆಹಲಿ, ಅಕ್ಟೋಬರ್ 09: ಸರ್ಕಾರಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಪತ್ರಕರ್ತ ದೀಪಾಂಶು ದುಬೇ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ದುಬೇ ಅವರ ಕುಟುಂಬದವರು ಆಸ್ಪತ್ರೆ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಆತ ಈ ಮುಂಚೆ ಟಿವಿ ಸುದ್ದಿ ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ, ಮನೆಗೆ ಆಧಾರವಾಗಿದ್ದ, ಕಳೆದ ವರ್ಷವಷ್ಟೇ ಆಘಾತದಿಂದ ಚೇತರಿಸಿಕೊಂಡಿದ್ದ, ಆದರೆ, ಈಗ ದುರಂತ ಅಂತ್ಯ ಕಂಡಿದ್ದಾನೆ.
ಶುಕ್ರವಾರದಂದು ಎದೆ ನೋವು ಕಾಣಿಸಿಕೊಂಡಿದ್ದರಿಂದ ದುಬೇ, ದೆಹಲಿ ಸರ್ಕಾರಿ ಹೆಡ್ಗೆವಾರ್ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದಿದ್ದಾರೆ. ಪ್ರಾಥಮಿಕ ಚಿಕಿತ್ಸೆಯಾದ ಬಳಿಕ, ತನ್ನ ಸ್ನೇಹಿತರೊಬ್ಬರಿಗೆ ಕರೆ ಮಾಡಿ ಬರುವಂತೆ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಒಂದಷ್ಟು ಮಾತ್ರೆಗಳನ್ನು ತರುವಂತೆ ದುಬೇ ಅವರಿಗೆ ಡಾಕ್ಟರ್ ಸೂಚಿಸಿದ್ದಾರೆ.

ನೋವಿನಿಂದ ಬಳಲಿದ್ದ ದುಬೇ ಅವರು ಔಷಧಾಲಯದ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ. ಮತ್ತೊಮ್ಮೆ ಎದೆ ನೋವು ಕಾಣಿಸಿಕೊಂಡಿದ್ದು, ಅಲ್ಲೇ ಕುಸಿದು ಬಿದ್ದು, ಮೃತಪಟ್ಟಿದ್ದಾರೆ.
ಕಾನ್ಪುರ್ ಮೂಲದ ದುಬೇ ಅವರು ದೆಹಲಿಯಲ್ಲಿ ಕಳೆದ ಒಂದು ದಶಕದಿಂದ ಸುದ್ದಿ ನಿರೂಪಕರಾಗಿ ಅನೇಕ ಚಾನೆಲ್ ಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇತ್ತೀಚೆಗೆ ತಮ್ಮದೇ ಆದ ವೆಬ್ ಸೈಟ್ ಆರಂಭಿಸಿದ್ದರು.
ನನಗೆ ಕರೆ ಬಂದ 30 ನಿಮಿಷಗಳಲ್ಲಿ ನಾನು ಆಸ್ಪತ್ರೆ ತಲುಪಿದೆ. ನನಗೆ ಈಗಲೂ ನಂಬಲು ಆಗುತ್ತಿಲ್ಲ. ಆತನಿಗೆ ಹೃದಯ ಸಂಬಂಧಿ ಕಾಯಿಲೆ ಇತ್ತು. ನಾನು ಆಸ್ಪತ್ರೆಗೆ ಹೋದಾಗ ಮೂರ್ನಾಲ್ಕು ಡಾಕ್ಟರ್ ಗಳು ಆತನ ಎದೆ ಮೇಲೆ ಕೈ ಇಟ್ಟು ಕೃತಕ ಉಸಿರಾಟ ಪ್ರಕ್ರಿಯೆಯಲ್ಲಿ ತೊಡಗಿದ್ದರು ಎಂದು ದುಬೇ ಅವರ ಗೆಳೆಯ ಅಂಜುಮನ್ ಗುಸೇನ್ ಹೇಳಿದ್ದಾರೆ.
ರೋಗಿಯೇ ಸ್ವತಃ ಹೋಗಿ ಔಷಧ ತರುವಂತೆ ಸೂಚಿಸಿದ್ದು ತಪ್ಪು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ದುಬೇ ಅವರ ಕುಟುಂಬಸ್ಥರು ದೂರು ನೀಡಿದ್ದಾರೆ. ಸರ್ಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ ಸುಶೀಲ್ ಕುಮಾರ್ ಅವರು ಈ ಬಗ್ಗೆ ಇನ್ನೂ ಪ್ರತಿಕ್ರಿಯೆ ನೀಡಿಲ್ಲ.












Click it and Unblock the Notifications