ಕೇಂದ್ರ ಸಂಪುಟದಲ್ಲಿ ನಾಲ್ಕು ಸಚಿವ ಸ್ಥಾನ ಕೋರಿದ ನಿತೀಶ್ ಕುಮಾರ್!
ನವದೆಹಲಿ, ಜುಲೈ 06: ಕೇಂದ್ರ ಸರ್ಕಾರದ ಸಚಿವ ಸಂಪುಟ ಪುನಾರಚನೆಯಲ್ಲಿ ತಮ್ಮ ಪಕ್ಷದ ನಾಲ್ಕು ಸಂಸದರಿಗೆ ಮಂತ್ರಿಗಿರಿ ನೀಡುವಂತೆ ಬಿಹಾರ ಮುಖ್ಯಮಂತ್ರಿ ಹಾಗೂ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಬೇಡಿಕೆ ಇಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಬಿಹಾರದಲ್ಲಿ ಭಾರತೀಯ ಜನತಾ ಪಕ್ಷದ 17 ಮಂದಿ ಸಂಸದರಿದ್ದು, ಐವರಿಗೆ ಮಂತ್ರಿಗಿರಿ ನೀಡಲಾಗಿದೆ. ಅದೇ ರೀತಿ 16 ಸಂಸದರನ್ನು ಹೊಂದಿರುವ ನಮ್ಮ ಪಕ್ಷದ ನಾಲ್ವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬೇಡಿಕೆ ಇಟ್ಟಿರುವುದಾಗಿ ಮೂಲಗಳು ತಿಳಿಸಿವೆ.
2019ರ ಲೋಕಸಭಾ ಚುನಾವಣಾ ಫಲಿತಾಂಶದ ನಂತರದಲ್ಲಿ ನಿತೀಶ್ ಕುಮಾರ್ ಅನುಪಾತದ ನೀತಿಯನ್ನು ಖಂಡಿಸಲಾಗಿತ್ತು. ಬಿಜೆಪಿಯು ಸರ್ಕಾರ ರಚನೆಗೆ ಅಗತ್ಯವಿರುವ ಬಹುಮತದೊಂದಿಗೆ ಗೆಲುವು ಸಾಧಿಸಿದೆ. ಈ ಹಿನ್ನೆಲೆ ಮಿತ್ರಪಕ್ಷಗಳಿಗೆ ಸರ್ಕಾರದಲ್ಲಿ ಸಾಂಕೇತಿಕ ಪ್ರಾತಿನಿಧ್ಯ ನೀಡುವ ಉದ್ದೇಶದಿಂದ ತಲಾ ಒಂದು ಸಚಿವ ಸ್ಥಾನ ನೀಡುವುದಾಗಿ ಬಿಜೆಪಿ ಹೈಕಮಾಂಡ್ ಹೇಳಿತ್ತು.

ಗೆಲುವಿಗೆ ನೀಡಿದ ಕೊಡುಗೆ ಬಗ್ಗೆ ಉಲ್ಲೇಖ:
ಕೇಂದ್ರ ಸರ್ಕಾರದ ಅನುಪಾತ ನೀತಿ ಸರಿಯಾಗಿಲ್ಲ ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ವಾದಿಸಿದ್ದಾರೆ ಎನ್ನಲಾಗಿದೆ. ಎನ್ ಡಿಎ ಮೈತ್ರಿಕೂಟದ ಗೆಲುವಿಗೆ ಅತಿ ಕಡಿಮೆ ಕೊಡುಗೆ ನೀಡಿದ ಪಕ್ಷ ಹಾಗೂ ಗೆಲುವಿಗಾಗಿ ಶ್ರಮಿಸಿದ ಬೇರೆ ಪಕ್ಷಕ್ಕೆ ಒಂದು ಮಾನದಂಡವೇ. ಮೈತ್ರಿಕೂಟಕ್ಕೆ ಅಷ್ಟಾಗಿ ಕೊಡುಗೆ ನೀಡದ ಲೋಕಜನಶಕ್ತಿ ಪಕ್ಷ ಹಾಗೂ ಅಕಾಲಿ ದಳ ಪಕ್ಷವನ್ನು ಉದಾಹರಣೆಯಾಗಿ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ವಾದವನ್ನು ಬಿಜೆಪಿ ತಿರಸ್ಕರಿಸಿತ್ತು. ಹೀಗಾಗಿ ಕೇಂದ್ರ ಸರ್ಕಾರದಿಂದ ಅಂತರ ಕಾಯ್ದುಕೊಂಡಿರುವ ನಿತೀಶ್ ಕುಮಾರ್, ತಮ್ಮ ಅನುಪಾತದ ಪ್ರಾತಿನಿಧ್ಯ ನೀಡಿದಾಗ ಮಾತ್ರ ಕೇಂದ್ರದ ಜೊತೆ ಕೈಜೋಡಿಸುತ್ತಾರೆ ಎಂದು ಪಕ್ಷದ ಮೂಲಗಳು ತಿಳಿಸಿದ್ದವು. ಈ ಬಾರಿ ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ತಮ್ಮ ಅನುಪಾತ ಪ್ರಾತಿನಿಧ್ಯವನ್ನು ಪಡೆದುಕೊಳ್ಳುವ ಕಸರತ್ತು ನಡೆಸಲಾಗುತ್ತಿದೆ.
ದೆಹಲಿಗೆ ತೆರಳಿರುವ ಜೆಡಿಯು ಮುಖಂಡ ಆರ್ ಸಿಪಿ ಸಿಂಗ್:
ಕೇಂದ್ರ ಸಂಪುಟ ಪುನಾರಚನೆ ಕಸರತ್ತು ನಡೆಯುತ್ತಿರುವ ಬೆನ್ನಲ್ಲೇ ಜೆಡಿಯು ಮುಖಂಡ ಆರ್ ಸಿಪಿ ಸಿಂಗ್ ದೆಹಲಿಗೆ ತೆರಳಿದ್ದು, ಕೇಂದ್ರದ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ. "ಬಿಜೆಪಿಯ ನಾಲ್ವರು ಮೇಲ್ಜಾತಿ ಹಾಗೂ ಒಬ್ಬ ಯಾದವ್ ವರ್ಗದ ಸಂಸದರಿಗೆ ಸಚಿವಗಿರಿ ನೀಡಲಾಗಿದೆ. ನಮ್ಮ ಹಿಂದುಳಿತ ಜಾತಿ ಬಾಗೂ ಮಹಾ ದಲಿತ ವರ್ಗದ ನಾಯಕರಿಗೂ ಸಚಿವ ಸ್ಥಾನ ನೀಡಬೇಕಿದೆ. ಈ ಕುರಿತು ಚರ್ಚೆ ನಂತರವಷ್ಟೇ ನಾವು ಸಂಪುಟದಲ್ಲಿ ಸೇರುವುದಕ್ಕೆ ಸಮ್ಮತಿಸುತ್ತೇವೆ," ಎಂದು ಆರ್ ಸಿಪಿ ಸಿಂಗ್ ಸ್ಪಷ್ಟಪಡಿಸಿದ್ದಾರೆ.












Click it and Unblock the Notifications