ದೆಹಲಿಯ ಜಹಾಂಗೀರ್ಪುರಿ ಹಿಂಸಾಚಾರ: ಖಾಕಿ ಪಡೆಗೆ ಅಮಿತ್ ಶಾ ಖಡಕ್ ಆರ್ಡರ್
ನವದೆಹಲಿ, ಏಪ್ರಿಲ್ 18: ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗಳ ವಿರುದ್ಧ ಶಿಸ್ತುಕ್ರಮ ತೆಗೆದುಕೊಳ್ಳುವಂತೆ ದೆಹಲಿ ಪೊಲೀಸರಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಚಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಮತ್ತೊಮ್ಮೆ ಇಂಥ ಹಿಂಸಾಚಾರದ ಘಟನೆಗಳು ಮರು ಕಳಿಸದಂತೆ ಮುನ್ನೆಚ್ಚರಿಕೆ ವಹಿಸುವಂತೆ ಪೊಲೀಸರಿಗೆ ಸಚಿವ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.
ಜಹಾಂಗೀರ್ಪುರಿ ಘಟನೆಯ ಕುರಿತು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ವಿಶೇಷ ಪೊಲೀಸ್ ಆಯುಕ್ತ ದೇವೇಂದ್ರ ಪಾಠಕ್ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾತುಕತೆ ನಡೆಸಿದರು. ಈ ವೇಳೆ ಏನೆಲ್ಲಾ ವಿಷಯಗಳು ಚರ್ಚೆ ಆಗಿವೆ?, ದೆಹಲಿ ಪೊಲೀಸರಿಗೆ ಸಚಿವರು ನೀಡಿದ ಸೂಚನೆಗಳೇನು?, ದೆಹಲಿ ಜಹಾಂಗೀರ್ಪುರಿ ಹಿಂಸಾಚಾರದ ಬೆನ್ನಲ್ಲೇ ನಡೆಯುತ್ತಿರುವ ಬೆಳವಣಿಗೆಗಳೇನು ಎಂಬುದನ್ನು ಇಲ್ಲಿ ತಿಳಿಯೋಣ.

ಜಹಾಂಗೀರ್ಪುರಿ ಹಿಂಸಾಚಾರದ ಬೆನ್ನಲ್ಲೇ ನಡೆದ ಬೆಳವಣಿಗೆಗಳು:
- ಜಹಾಂಗೀರ್ಪುರಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಎರಡೂ ಸಮುದಾಯಗಳ 23 ಜನರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನ ಸೋಮವಾರ ತಿಳಿಸಿದ್ದಾರೆ.
- ಸೋನು ಅಲಿಯಾಸ್ ಇಮಾಮ್ ಅಲಿಯಾಸ್ ಯೂನಸ್ ದೆಹಲಿಯ ಜಹಾಂಗೀರಪುರಿ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಏಪ್ರಿಲ್ 16 ರಂದು ನಡೆದ ಗಲಭೆಯಲ್ಲಿ ಈ ಆರೋಪಿಯು ಗುಂಡು ಹಾರಿಸಿದ್ದು, ಅದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗಿತ್ತು.

- ವಾಯುವ್ಯ ದೆಹಲಿಯ ಜಹಾಂಗೀರ್ಪುರಿ ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಗಲಭೆ ನಿಗ್ರಹ ಪಡೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
- ಹನುಮ ಜಯಂತಿಯಂದು ವಾಯುವ್ಯ ದೆಹಲಿಯ ಜಹಾಂಗೀರ್ಪುರಿಯಲ್ಲಿ ನಡೆದ ಘರ್ಷಣೆಯ ಸಂದರ್ಭದಲ್ಲಿ ಎಸೆಯಲು ಬಳಸಲಾದ ಬಾಟಲಿಗಳನ್ನು ಸರಬರಾಜು ಮಾಡಿದ ಆರೋಪದ ಮೇಲೆ 36 ವರ್ಷದ ವ್ಯಕ್ತಿಯನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
- 500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಮತ್ತು ಆರು ಕಂಪನಿ ಹೆಚ್ಚುವರಿ ಪಡೆಯನ್ನು ಈ ಪ್ರದೇಶದಲ್ಲಿ ನಿಯೋಜಿಸಲಾಗಿದೆ.- ಒಟ್ಟು 80 ಅಶ್ರುವಾಯು ಗನ್ ತಂಡಗಳು ಮತ್ತು ಜಲಫಿರಂಗಿಗಳನ್ನು ನಿಯೋಜಿಸಲಾಗಿದೆ.
- ಮೇಲ್ಛಾವಣಿಯ ಕಣ್ಗಾವಲುಗಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಡ್ರೋನ್ಗಳನ್ನು ಬಳಸಲಾಗುತ್ತಿದೆ.
- ಯಾವುದೇ ಅಹಿತಕರ ಘಟನೆ ನಡೆಯದಂತೆ ಸ್ಥಳದಲ್ಲಿ ಇರುವಂತೆ ಎಲ್ಲ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ
- ಸೋಮವಾರ ಬೆಳಗ್ಗೆ ಕೂಡ ದೆಹಲಿಯ ಜಹಾಂಗೀರ್ಪುರಿಯಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ಈ ಪ್ರದೇಶದಲ್ಲಿ ಕಲ್ಲು ತೂರಾಟದ ಘಟನೆ ವರದಿಯಾಗಿತ್ತು.
- ಜಹಾಂಗೀರ್ಪುರಿಯಲ್ಲಿ ಗಲಭೆಯಲ್ಲಿ ಒಂದು ಸಮುದಾಯಕ್ಕೆ ಸೇರಿದವರನ್ನು ಮಾತ್ರ ಬಂಧಿಸಲಾಗುತ್ತಿರುವ ದೆಹಲಿ ಪೊಲೀಸರು ಏಕಪಕ್ಷೀಯ ತನಿಖೆ ನಡೆಸುತ್ತಿದ್ದಾರೆ ಸಿಪಿಐ(ಎಂ) ನಾಯಕಿ ಬೃಂದಾ ಕಾರಟ್ ಎಂದು ಟೀಕಿಸಿದರು.
ದೆಹಲಿಯಲ್ಲಿ ಶನಿವಾರ ನಡೆದ ಘರ್ಷಣೆಯ ಹಿನ್ನೆಲೆ
ದೆಹಲಿಯ ಜಹಾಂಗೀರ್ಪುರಿಯಲ್ಲಿ ಶನಿವಾರ ಸಂಜೆ ವೇಳೆಗೆ ಹನುಮಾನ್ ಜಯಂತಿ ಆಚರಿಸುತ್ತಿದ್ದ ಸಂದರ್ಭದಲ್ಲಿ ಎರಡು ಕೋಮುಗಳ ನಡುವೆ ಘರ್ಷಣೆ ನಡೆಯಿತು. ಪರಸ್ಪರ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಎರಡು ಕೋಮುಗಳ ಜನರು ಕಲ್ಲುತೂರಾಟ ನಡೆಸಿದರು. ಈ ವೇಳೆ 9 ಜನರಿಗೆ ಗಾಯಗಳಾಗಿದ್ದು, ಪೊಲೀಸ್ ಸಿಬ್ಬಂದಿ ಸಹ ಗಾಯಗೊಂಡಿದ್ದರು. ಸಂಜೆ 6 ಗಂಟೆ ವೇಳೆಗೆ ಕಲ್ಲುತೂರಾಟ ನಡೆಸುವುದರ ಜೊತೆಗೆ ಕೆಲವು ವಾಹನಗಳಿಗೆ ಬೆಂಕಿ ಹಚ್ಚಲಾಯಿತು. ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿದ ಪೊಲೀಸರು ಶನಿವಾರವೇ 23 ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದರು.












Click it and Unblock the Notifications