ನಿರಂತರ ಐಟಿ ದಾಳಿ : ಮೋದಿ ಕ್ಷಮೆ ಕೇಳಬೇಕೆಂದ ಕೇಜ್ರಿವಾಲ್
ನವದೆಹಲಿ, ಅಕ್ಟೋಬರ್ 10 : "ನಿರವ್ ಮೋದಿ, ವಿಜಯ್ ಮಲ್ಯ ಜೊತೆ ದೋಸ್ತಿ ಮತ್ತು ನಮ್ಮ ಮೇಲೆ ದಾಳಿ?" ಹೀಗೆಂದು ಕೆಂಡಾಮಂಡಲರಾಗಿ ಪ್ರತಿಕ್ರಿಯಿಸಿದವರು ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರು.
ಬುಧವಾರ ಬೆಳಿಗ್ಗೆಯಿಂದ ತಮ್ಮದೇ ಪಕ್ಷದ ನಾಯಕ, ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಅವರಿಗೆ ಸೇರಿದ ಕಂಪನಿಗಳ ಮೇಲೆ, ಸುಮಾರ್ 16 ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದೊಡ್ಡ ಮಟ್ಟದಲ್ಲಿ ದಾಳಿ ನಡೆಸಿದ್ದಕ್ಕೆ ಅರವಿಂದ್ ಕೇಜ್ರಿವಾಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಮೋದೀಜೀ, ನೀವು ನನ್ನ ಮೇಲೆ, ಸತ್ಯೇಂದ್ರ ಅವರ ಮೇಲೆ, ಮನೀಶ್ ಅವರ ಮೇಲೆ ಕೂಡ ಐಟಿ ದಾಳಿ ನಡೆಸಿದ್ದೀರಿ. ಅದರಿಂದ ಏನಾಯಿತು? ಏನಾದರೂ ಸಿಕ್ಕಿತಾ? ಸಿಗಲಿಲ್ಲವಲ್ಲ? ಆದ್ದರಿಂದ ಮುಂದಿನ ಬಾರಿ ದಾಳಿ ಮಾಡಿಸುವ ಮುನ್ನ, ದೆಹಲಿ ಜನರಿಂದಲೇ ಆಯ್ಕೆಯಾಗಿರುವ ಸರಕಾರವನ್ನು ನಿರಂತರವಾಗಿ ಕಾಡುತ್ತಿರುವುದಕ್ಕಾಗಿ ಕನಿಷ್ಠಪಕ್ಷ ಕ್ಷಮೆಯನ್ನಾದರೂ ಕೇಳಿರಿ" ಎಂದು ಅರವಿಂದ್ ಕೇಜ್ರಿವಾಲ್ ಅವರು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದಾರೆ.
ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್ ಅವರು, ಆಮ್ ಆದ್ಮಿ ಪಕ್ಷದ ನಾಯಕರ ಮೇಲೆ ದಾಳಿ ನಡೆಸಿದಾಗಲೆಲ್ಲ ಏನೇನು ಸಿಕ್ಕಿದೆ ಎಂಬುದನ್ನು ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂಥ ಅನೇಕ ದಾಳಿಗಳನ್ನು ಮಾಡಲಾಗಿದೆ. ಆದರೆ, ಏನೂ ಸಿಕ್ಕಿಲ್ಲ, ಚಾರ್ಜ್ ಶೀಟನ್ನೂ ಫೈಲ್ ಮಾಡಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications