ಅಪನಗದೀಕರಣ ಸಾಂವಿಧಾನಿಕವೆ : ಕೇಂದ್ರಕ್ಕೆ ಸುಪ್ರೀಂ 9 ಪ್ರಶ್ನೆ
ಅಪನಗದೀಕರಣದ ನೀತಿಯನ್ನು ಪ್ರಕಟಿಸಿದಾಗ ಅದು ಗೌಪ್ಯವಾಗಿತ್ತೆ? ರಾಷ್ಟ್ರದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಜಿಲ್ಲೆಗಳಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡಲು ಹಳೆ ನೋಟುಗಳನ್ನು ಏಕೆ ಸ್ವೀಕರಿಸುತ್ತಿಲ್ಲ?
ನವದೆಹಲಿ, ಡಿಸೆಂಬರ್ 09 : ಹಳೆ ನೋಟುಗಳನ್ನು ನಿಷೇಧಿಸಿದ ನಂತರ ಕೇಂದ್ರ ಸರಕಾರ ತೆಗೆದುಕೊಂಡಿರುವ ಕ್ರಮಗಳನ್ನು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯ, ಅಪನಗದೀಕರಣದ ಮೊದಲು ಮತ್ತು ನಂತರದ ಘಟನಾವಳಿಗಳ ಬಗ್ಗೆ ಕೇಂದ್ರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಅಪನಗದೀಕರಣದ ನೀತಿಯನ್ನು ಪ್ರಕಟಿಸಿದಾಗ ಅದು ಗೌಪ್ಯವಾಗಿತ್ತೆ? ರಾಷ್ಟ್ರದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಜಿಲ್ಲೆಗಳಲ್ಲಿರುವ ಸಹಕಾರಿ ಬ್ಯಾಂಕುಗಳಲ್ಲಿ ಠೇವಣಿ ಇಡಲು ಹಳೆ ನೋಟುಗಳನ್ನು ಏಕೆ ಸ್ವೀಕರಿಸುತ್ತಿಲ್ಲ ಎಂದು ಕೇಂದ್ರ ಸರಕಾರವನ್ನು ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ.
ಅಪನಗದೀಕರಣ ಸಾಂವಿಧಾನಿಕವೋ, ಅಸಾಂವಿಧಾನಿಕವೋ ಎಂಬುದನ್ನು ಇತ್ಯರ್ಥಪಡಿಸಲು ಸರ್ವೋಚ್ಚ ನ್ಯಾಯಾಲಯ 9 ಪ್ರಶ್ನೆಗಳನ್ನು ಕೇಂದ್ರ ಸರಕಾರದ ಮುಂದಿಟ್ಟಿದೆ. ಸರಕಾರದ ಪರವಾಗಿ ಅಟಾರ್ನಿ ಜನರಲ್ ಮುಕುಲ್ ರೋಹಟ್ಗಿ ಅವರು ವಾದ ಮಂಡಿಸಿದ್ದಾರೆ. [ಟ್ವಿಟ್ಟರಲ್ಲಿ ಅಪಹಾಸ್ಯಕ್ಕೀಡಾದ ರಾಹುಲ್ 'ಭೂಕಂಪ'ದ ಮಾತು]
ಅಪನಗದೀಕರಣದ ನಂತರ ದೇಶದಲ್ಲಿ ಉದ್ಭವವಾಗಿರುವ ಗೊಂದಲದ ಪರಿಸ್ಥಿತಿಯನ್ನು ನಿವಾರಿಸಲು ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅರ್ಜಿ ಹಾಕಿದವರನ್ನು ಮತ್ತು ಕೇಂದ್ರ ಸರಕಾರವನ್ನು ಮುಖ್ಯ ನ್ಯಾಯಮೂರ್ತಿ ಟಿಎಸ್ ಠಾಕೂರ್, ನ್ಯಾ. ಎಎಂ ಖನ್ವಿಲ್ಕರ್ ಮತ್ತು ನ್ಯಾ. ಡಿವೈ ಚಂದ್ರಚೂಡ್ ಅವರಿದ್ದ ವಿಭಾಗೀಯ ಪೀಠ ಕೇಳಿದೆ.
ಪ್ರತಿ ಖಾತೆಯಿಂದ ವಾರಕ್ಕೆ 24 ಸಾವಿರ ರು. ಹಿಂತೆಗೆದುಕೊಳ್ಳಲು ಅವಕಾಶ ನೀಡಿದಾಗ, ಅದನ್ನು ಬ್ಯಾಂಕ್ ಗಳು ಅಲ್ಲಗಳೆಯಲು ಹೇಗೆ ಸಾಧ್ಯ? ಅದು ಗರಿಷ್ಠ ಮಿತಿಯಾಗಿದ್ದರೆ, ಕನಿಷ್ಠ ಮಿತಿಯನ್ನು 10 ಸಾವಿರಕ್ಕೆ ಏಕೆ ನಿಗದಿಪಡಿಸಲಿಲ್ಲ ಎಂಬಿತ್ಯಾದಿ ಪ್ರಶ್ನೆಗಳನ್ನು ಸರಕಾರಕ್ಕೆ ಕೋರ್ಟ್ ಕೇಳಿತು.
ಗ್ರಾಮೀಣ ಬ್ಯಾಂಕ್ ಗಳಲ್ಲಿ ಮಾತ್ರವಲ್ಲ ಹಲವಾರು ರಾಷ್ಟ್ರೀಯ ಬ್ಯಾಂಕ್ ಗಳಲ್ಲಿ ಕೂಡ ಹಣದ ಕೊರೆತೆ ಇದೆ. ಇದಕ್ಕೆ ಸರಕಾರ ಸೂಕ್ತವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಎಂದು ಮುಕುಲ್ ರೋಹಟ್ಗಿ ಅವರು ನ್ಯಾಯಾಲಯಕ್ಕೆ ವಿವರಿಸಿದರು. ಮುಂದಿನ ವಿಚಾರಣೆಯನ್ನು ಡಿಸೆಂಬರ್ 14ಕ್ಕೆ ಮುಂದೂಡಲಾಗಿದೆ. [ನಗದು ಬದಲು ಕಾರ್ಡ್ ಬಳಸುವವರಿಗೆ ಭರ್ಜರಿ ರಿಯಾಯಿತಿ]