ಕೋವಿಡ್-19 ಸಾವಿನ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮದ ವರದಿಯನ್ನು ತಳ್ಳಿ ಹಾಕಿದ ಕೇಂದ್ರ
ನವದೆಹಲಿ, ಜೂನ್ 13: ಕೊರೊನಾವೈರಸ್ನಿಂದಾಗಿ ಭಾರತದಲ್ಲಿ ಮೃತಪಟ್ಟವರ ಸಂಖ್ಯೆಯನ್ನು 5-7 ಪಟ್ಟು ಕಡಿಮೆ ಮಾಡಿ ಅಧಿಕೃತ ಸಂಖ್ಯೆಯನ್ನು ತೋರಿಸಲಾಗಿದೆ ಎಂದು ಇತ್ತೀಚೆಗೆ ಅಂತಾರಾಷ್ಟ್ರೀಯ ಮ್ಯಾಗಝೀನ್ 'ದಿ ಎಕನಾಮಿಸ್ಟ್' ವರದಿ ಮಾಡಿತ್ತು. ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು ಈ ಮಾಹಿತಿಯನ್ನು ನೀಡಿರುವುದಾಗಿ ಅದು ಉಲ್ಲೇಖಿಸಿತ್ತು. ಆದರೆ ಅಂತಾರಾಷ್ಟ್ರೀಯ ಮಾಧ್ಯಮದ ಈ ವರದಿಯನ್ನು ಕೇಂದ್ರ ಸರ್ಕಾರ ತಳ್ಳಿ ಹಾಕಿದ್ದು ಇದು ಯಾವುದೇ ಆಧಾರ ಇಲ್ಲದ ವರದಿ ಎಂದಿದೆ.
ಈ ವರದಿಯ ಬಗ್ಗೆ ಕೇಂದ್ರ ಆರೋಗ್ಯ ತನ್ನ ಹೇಳಿಕೆಯಲ್ಲಿ ಇದೊಂದು ಊಹಾತ್ಮಕ ಲೇಖನವಾಗಿದೆ. ಯಾವುದೇ ಆಧಾರಗಳು ಇಲ್ಲದೆ ತಪ್ಪಾಗಿ ವಿಶ್ಲೇಷಣೆ ಮಾಡಿರುವ ವರದಿ ಇದಾಗಿದ್ದು, ಅಂಕಿಅಂಶಗಳನ್ನು ತಪ್ಪಾಗಿ ಉಲ್ಲೇಖಿಸಲಾಗಿದೆ ಎಂದು ಕೇಂದ್ರ ಸರ್ಕಾರ ಪ್ರತಿಕ್ರಿಯೆಯನ್ನು ನೀಡಿದೆ.
ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನೀಡಿದ ಮಾರ್ಗಸೂಚಿಯಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೊರೊನಾವೈರಸ್ಗೆ ಸಂಬಂಧಿಸಿದ ಸಾವುಗಳನ್ನು ದಾಖಲಿಸುತ್ತವೆ. ಜಿಲ್ಲಾವಾರು ಪ್ರಕರಣ ಮತ್ತು ಸಾವುಗಳ ಸಂಖ್ಯೆಯನ್ನು ಪ್ರತಿದಿನವೂ ವರದಿ ಮಾಡುವುದು ಅಗತ್ಯವಾಗಿದೆ ಎಂದು ಕೇಂದ್ರ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಇನ್ನು ಇದೇ ಸಂದರ್ಭದಲ್ಲಿ ಈ ವರದಿ ಮಾಡಿದ ಮಾಧ್ಯಮ ಹೆಚ್ಚುವರಿ ಸಾವಿನ ಪ್ರಮಾಣವನ್ನು ಅಂದಾಜಿಸಿದ ವಿಧಾನ ಯಾವುದೇ ದೇಶ ಅಥವಾ ಪ್ರದೇಶ ಸಾವಿನ ಪ್ರಮಾಣವನ್ನು ನಿರ್ಧರಿಸಲು ತೆಗದುಕೊಂಡ ಮಾನದಂಡವಾಗಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಮ್ಯಾಗಝೀನ್ ಉಲ್ಲೇಖಿಸಿದ ಸಾಕ್ಷಿಗಳು ವರ್ಜೀನಿಯಾ ಕಾಮನ್ವೆಲ್ತ್ ವಿಶ್ವವಿದ್ಯಾಲಯದ ಕ್ರಿಸ್ಟೋಫರ್ ಲಾಫ್ಲರ್ ಮಾಡಿದ ಅಧ್ಯಯನವಾಗಿದೆ. ಈ ವರದಿ ಅಧ್ಯಯನದ ಕಾರ್ಯವಿಧಾನವನ್ನು ಕೂಡ ಒದಗಿಸಿಲ್ಲ ಎಂದು ಹೇಳಿದೆ ಕೇಂದ್ರ ಸರ್ಕಾರ.
ಇನ್ನು ಈ ವರದಿಗೆ ಮತ್ತೊಂದು ಸಾಕ್ಷಿಯನ್ನಾಗಿ ತೆಲಂಗಾಣ ಮೂಲದ ವಿಮಾ ಹಕ್ಕುಗಳ ಆಧಾರವನ್ನು ನೀಡಲಾಗಿದೆ. ಇದಕ್ಕೆ ಕೂಡ ಪೂರಕ ವೈಜ್ಞಾನಿಕ ಅಂಕಿಅಂಶಗಳನ್ನು ನೀಡಲಾಗಿಲ್ಲ" ಎಂದು ಈ ಹೇಳಿಕೆಯಲ್ಲಿ ಸರ್ಕಾರ ತಿಳಿಸಿದೆ. ಇನ್ನು 'ಪ್ರಶ್ನಮ್' ಮತ್ತು 'ಸಿ-ವೋಟರ್' ಎಂಬ ಸಂಸ್ಥೆಗಳ ಅಧ್ಯಯನವನ್ನು ಉಲ್ಲೇಖಿಸಿರುವ ವಿಚಾರವಾಗಿ ಈ ಎರಡು ಸಂಸ್ಥೆಗಳು ಚುನಾವಣೆಗೆ ಸಂಬಂಧಿಸಿದ ಅಂಕಿಅಂಶಗಳನ್ನು ನೀಡುವಂತಾ ಸಂಸ್ಥೆಗಳಾಗಿದೆ. ಆರೋಗ್ಯ ಸಂಬಂಧಿತ ವಿಚಾರವಾಗಿ ಅಧ್ಯಯನ ಮಾಡುವ ಅನುಭವ ಈ ಸಂಸ್ಥೆಗಳಿಗೆ ಇಲ್ಲ. ಇವುಗಳ ಮತದಾನದ ಫಲಿತಾಂಶಗಳನ್ನು ಸಂಗ್ರಹಿಸುವ ಕಾರ್ಯವಿಧಾನಗಳು ಕೂಡ ಹಲವು ಸಂದರ್ಭದಲ್ಲಿ ತಪ್ಪಾಗಿದೆ ಎಂದು ಕೇಂದ್ರ ತಳ್ಳಿ ಹಾಕಿದೆ.












Click it and Unblock the Notifications