ಯೋಧ ಪಳನಿ ಕಷ್ಟಪಟ್ಟು ಕಟ್ಟಿಸಿದ ಹೊಸ ಮನೆಗೆ ಕಾಲಿಡಲಾಗಲಿಲ್ಲ
ನವ ದೆಹಲಿ, ಜೂನ್ 17: ಚೀನಾ ಯೋಧರ ಅಟ್ಟಹಾಸಕ್ಕೆ ಭಾರತದ ಯೋಧ ಕೆ ಪಳನಿ ಹುತಾತ್ಮರಾಗಿದ್ದಾರೆ. ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಡುಕ್ಕಲೂರು ಗ್ರಾಮದ ಇವರು ಕಳೆದ 22 ವರ್ಷಗಳಿಂದ ಭಾರತೀಯ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದರು.
Recommended Video
ಕೆ ಪಳನಿ ಅವರು ಕಷ್ಟಪಟ್ಟು ಒಂದು ಮನೆ ಕಟ್ಟಿಸಿದ್ದರು. ತಮ್ಮ ಕಡುಕ್ಕಲೂರು ಗ್ರಾಮದ ಬದಲು ರಾಮನಾಥಪುರಂ ಪಟ್ಟಣದಲ್ಲಿ ಹೊಸ ಮನೆ ನಿರ್ಮಾಣ ಮಾಡಿಸಿದ್ದರು. ತಮ್ಮ ಮಕ್ಕಳಿಗೆ ಉತ್ತಮ ಶಾಲೆಯಲ್ಲಿ ವ್ಯಾಸಂಗ ಮಾಡಲು ಅನುಕೂಲ ಆಗುವಂತೆ ತಮ್ಮ ಗ್ರಾಮದಿಂದ 65 ಕಿ.ಮೀ ದೂರದಲ್ಲಿರುವ ರಾಮಂತಪುರಂ ಪಟ್ಟಣದ ಬಳಿ ಮನೆ ನಿರ್ಮಿಸಿದ್ದರು.
ಪಳನಿ ಅವರ ಹೊಸ ಮನೆಯ ಗೃಹಪ್ರವೇಶ ಕಾರ್ಯಕ್ರಮ ಕೇವಲ 15 ದಿನಗಳ ಹಿಂದೆ ನಡೆದಿತ್ತು. ಎರಡು ಸೇನೆಗಳ ನಡುವಿನ ಉದ್ವಿಗ್ನತೆಯನ್ನು ಗಮನದಲ್ಲಿಟ್ಟುಕೊಂಡು, ಅವರು ರಜೆ ತೆಗೆದುಕೊಂಡಿರಲಿಲ್ಲ. ಆಗ ಅವರ ಪತ್ನಿ ವನತಿದೇವಿ, ಮಗ ಪ್ರಸನ್ನ (10), ಮಗಳು ದಿವ್ಯಾ( 8) ಮತ್ತು ಇತರ ಸಂಬಂಧಿಕರು ಈ ಸಮಾರಂಭದಲ್ಲಿ ಭಾಗವಹಿಸಿದ್ದರು.

ಇನ್ನೊಂದು ವರ್ಷದಲ್ಲಿ ಪಳನಿ ನಿವೃತ್ತಿ ಹೊಂದುತ್ತಿದ್ದರು. ನಿವೃತ್ತಿ ಬಳಿಕ ಹೊಸ ಮನೆಯಲ್ಲಿ ಕುಟುಂಬದ ಜೊತೆಗೆ ಕಳೆಯುವ ಆಸೆ ಹೊಂದಿದ್ದರು. ಆದರೆ, ಅವರು ಎಂದಿಗೂ ಆ ಮನೆಗೆ ಕಾಲಿಡದಂತೆ ಆಗಿದೆ, ಹುತಾತ್ಮರಾಗಿ ಮನೆಗೆ ಬರುವಂತಾಗಿದೆ. ಗಾಲ್ವಾನ್ ಕಣಿವೆಯಲ್ಲಿ ಅವರು ಕೊಲ್ಲಲ್ಪಟ್ಟಿದ್ದಾರೆ.
ಪಳನಿಯ ಅವರಂತೆ ಅವರ ಕಿರಿಯ ಸಹೋದರ ಇಧಾಯಕಾನಿ ಸಹ ಸೇನೆಗೆ ಸೇರಿದ್ದರು. ಅವರು ಸದ್ಯ ರಾಜಸ್ಥಾನದಲ್ಲಿ ನೆಲೆಸಿದ್ದು, ಅಣ್ಣನ ಅಂತ್ಯಕ್ರಿಯೆಗೆ ಹಾಜರಾಗುತ್ತಿದ್ದಾರೆ. ಬುಧವಾರ ಪಳಾನಿ ಅವರ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.
ತಮಿಳುನಾಡು ಮುಖ್ಯಮಂತ್ರಿ ಕೆ ಪಲ್ನೈಸ್ವಾಮಿ ಪಳನಿ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಅವರ ಕುಟುಂಬಕ್ಕೆ 20 ಲಕ್ಷ ರೂಪಾಯಿಗಳ ಪರಿಹಾರ ಮತ್ತು ಅರ್ಹ ಕುಟುಂಬ ಸದಸ್ಯರಿಗೆ ಸರ್ಕಾರಿ ಉದ್ಯೋಗವನ್ನೂ ಘೋಷಿಸಿದ್ದಾರೆ. ಅಂತಿಮ ವಿಧಿಗಳನ್ನು ರಾಜ್ಯ ಸರ್ಕಾರದ ಗೌರವಗಳೊಂದಿಗೆ ನಡೆಸಲಾಗುವುದು ಎಂದಿದ್ದಾರೆ.












Click it and Unblock the Notifications