ಶ್ರೀ ರಾಮಾಯಣ ಎಕ್ಸ್ಪ್ರೆಸ್ ರೈಲು ಸಂಚಾರ ನವೆಂಬರ್ನಲ್ಲಿ ಆರಂಭ
ಬೆಂಗಳೂರು, ಜು.18: ರಾಮಾಯಣ ಮಹಾಕಾವ್ಯದೊಂದಿಗೆ ತಳುಕುಹಾಕಿಕೊಂಡಿರುವ ಸ್ಥಳಗಳನ್ನು ಸಂದರ್ಶಿಸುವ ರಾಮಾಯಣ ಎಕ್ಸ್ಪ್ರೆಸ್ ವಿಶೇಷ ಪ್ರವಾಸಿ ರೈಲಿಗೆ ಭಾರತೀಯ ರೈಲ್ವೆ ನವೆಂಬರ್ 14ರಂದು ಚಾಲನೆ ನೀಡಲಿದೆ.
ನವದೆಹಲಿಯ ಸಫ್ಜರ್ಜಂಗ್ ರೈಲ್ವೆ ನಿಲ್ದಾಣದಿಂದ ಹೊರಡಲಿರುವ ರೈಲು ಆಯೋಧ್ಯೆಯಿಂದ ರಾಮೇಶ್ವರದವರೆಗೆ ಪ್ರಯಾಣಿಸಲಿದೆ. ಈ ಪ್ರಯಾಣ ಅವಧಿ 16 ದಿನಗಳದ್ದಾಗಿರುತ್ತದೆ. ಅಯೋಧ್ಯೆಯಲ್ಲಿ ಮೊದಲ ನಿಲುಗಡೆ ಮಾಡಲಿದೆ.
ರಾಮಾಯಣ ಸರ್ಕೀಟ್ ಪ್ರವಾಸ ರೈಲು ಹಂಪಿಗೂ ಬರಲಿದೆ
ಅಲ್ಲಿಂದ ಮುಂದೆ ನಂದಿಗ್ರಾಮ್, ಸೀತಾಮಡಿ, ಜನಕಪುರ, ವಾರಾಣಸಿ,ಪ್ರಯಾಗ್, ಶೃಂಗಾವೇರಪುರ, ಚಿತ್ರಕೂಟ, ಹಂಪಿ ಸಮೀಪದ ಹೊಸ ಪೇಟೆ, ನಾಸಿಕ್ ಮತ್ತು ರಾಮೇಶ್ವರದಲ್ಲಿ ರೈಲು ನಿಲುಗಡೆಯಾಗಲಿದ್ದು ಈ ಸ್ಥಳಗಳನ್ನು ಸಂದರ್ಶಿಸುವ ಅವಕಾಶ ಪ್ರವಾಸಿಗರಿಗೆ ಕಲ್ಪಿಸಲಾಗುತ್ತದೆ.
ರಾಮೇಶ್ವರದಿಂದ ಮುಂದೆ ಶ್ರೀಲಂಕಾದಲ್ಲಿರುವ ಕೊಲಂಬೊ, ನೆಗೊಂಬೊ ,ಕ್ಯಾಂಡಿ ಮತ್ತಿತರೆ ಸ್ಥಳಗಳನ್ನೂ ಸಂದರ್ಶಿಸಲು ಪ್ರಯಾಣಿಕರಿಗೆ ಪ್ರತ್ಯೇಕ ವೆಚ್ಚದಲ್ಲಿ ವಿಮಾನಯಾನದ ಪ್ಯಾಕೇಜ್ ವ್ಯವಸ್ಥೆ ಮಾಡಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯೆಲ್ ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಟಿಕೆಟ್ ದರ 15,120 ರೂ: ಹತ್ತು ಹಲವು ಸವಲತ್ತುಗಳಿರುವ 800 ಆಸನದ ವಿಶೇಷ ರೈಲು ಇದಾಗಿದೆ. 16 ದಿನಗಳ ಈ ರೈಲು ಪ್ರವಾಸ ಪ್ಯಾಕೇಜ್ನ ಟಿಕೆಟ್ ದ 15,120 ರೂ. ಇದರಲ್ಲಿ ಊಟ ಹಾಗೂ ವಸತಿಯಯೂ ಸೇರಿದೆ. ಶೀಘ್ರದಲ್ಲೇ ಐಆರ್ಸಿಟಿಸಿಯ ವೆಬ್ಸೈಟ್ ಮೂಲಕ ಬುಕ್ಕಿಂಗ್ಗೆ ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ಸಾಕಷ್ಟು ಆದಾಯವನ್ನೂ ಕೂಡ ಇದರಿಂದ ನಿರೀಕ್ಷಿಸಿದೆ.
ಶ್ರೀಲಂಕಾ ಪ್ರವಾಸಕ್ಕೆ ಪ್ರತ್ಯೇಕ ಶುಲ್ಕವನ್ನು ನೀಡಬೇಕಾಗುತ್ತದೆ. ಶ್ರೀಲಂಕಾವನ್ನು ಪ್ರಯಾಣಿಕರು ಆಯ್ಕೆ ಮಾಡಿಕೊಂಡರೆ ಚೆನ್ನೈನಿಂದ ಕೊಲಂಬೋಕ್ಕೆ ವಿಮಾನದಲ್ಲಿ ತೆರಳಬೇಕಾಗುತ್ತದೆ. ಐಆರ್ಸಿಟಿಸಿ ಐದು ರಾತ್ರಿ ಆರು ದಿನದ ಪ್ರವಾಸಕ್ಕೆ ಒಬ್ಬರಿಗೆ 39, 970 ರೂ. ಪಡೆಯಲಾಗುತ್ತದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.