ವಿಷಪೂರಿತ ಪತ್ರ ಕಳಿಸಿ ಹತ್ಯೆ, ಉಗ್ರರ ಸಂಚು
ನವದೆಹಲಿ, ಆ.20: ಹತ್ಯೆ ಮಾಡಬೇಕಾದ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ಅಂಥವರಿಗೆ ವಿಷಪೂರಿತ ಪತ್ರ ಕಳುಹಿಸುವ ಮೂಲಕ ಅವರನ್ನು ಮುಗಿಸುವ ಭೀಕರ ಸಂಚೊಂದನ್ನು ಇಂಡಿಯನ್ ಮುಜಾಹಿದೀನ್ (ಐಎಂ) ಸಂಘಟನೆ ರೂಪಿಸಿತ್ತು ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳ ತಯಾರಿಕೆ ಕಾರ್ಖಾನೆ ನಡೆಸುತ್ತಿದ್ದ ಆರೋಪಿ ಬಂಧಿಸಲಾಗಿರುವ 6 ಮಂದಿ ಶಂಕಿತ ವ್ಯಕ್ತಿಗಳ ವಿರುದ್ಧ ತಾವು ಸಲ್ಲಿಸಿರುವ ದೋಷಾರೋಪಟ್ಟಿಯಲ್ಲಿ ಪೊಲೀಸರು ಈ ಆಘಾತಕಾರಿ ವಿಷಯ ಬಹಿರಂಗಪಡಿಸಿದ್ದಾರೆ. ಬಂಹಧಿತ 6 ಜನ ಶಂಕಿತ ಇಂಡಿಯನ್ ಮುಜಾಹಿದೀನ್ ಸಂಘಟನೆ ಸದಸ್ಯರನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಈ ವಿಷಯ ಹೊರ ಬಂದಿದೆ ಎಂದಿದ್ದಾರೆ.

ಗುರಿಪಡಿಸಿದ ವೇಳೆ ತೆಹ್ಸೀನ್ ಅಕ್ತರ್ ಮತ್ತು ಮಹಮದ್ ವಖಾರ್ ಅಜರ್ ಎಂಬುವರು ಈ ವಿಷಯವನ್ನು ಹೊರಹಾಕಿದರು ಎಂದು ದೆಹಲಿ ಪೊಲೀಸರು ಚಾರ್ಜ್ ಶೀಟ್ ನಲ್ಲಿ ಹೇಳಿದ್ದಾರೆ. ತಮಗೆ ಲಭ್ಯವಿರುವ ಮ್ಯಾಗ್ನೀಷಿಯಂ ಸಲ್ಫೇಟ್, ಆಶೆಟೋನ್ ಹಾಗೂ ಕ್ಯಾಸ್ಟರ್ ಸೀಡ್ಸ್ ಬಳಸಿ ಇಂಥ ವಿಷಪೂರಿತ ಪತ್ರಗಳನ್ನು ತಯಾರಿಸಲು ನಾವು ಸಿದ್ಧತೆ ನಡೆಸಿದ್ದೆವು ಎಂದು ವಿಚಾರಣೆಗೊಳಪಟ್ಟ ವಖಾರ್ ಮತ್ತು ತೆಹ್ಸೀನ್ ತಿಳಿಸಿದ್ದಾರಂತೆ.
ಈ ವಿಷದ ಕಾಗದ ರವಾನಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರನ್ನು ಟಾರ್ಗೆಟ್ ವ್ಯಕ್ತಿಗಳಾಗಿ ಐಎಂ ಗುರುತಿಸಿತ್ತು. ಇಂಡಿಯನ್ ಮುಜಾಹಿದೀನ್ನ ತೆಹ್ಸೀನ್ ಅಕ್ತರ್, ಜಿಯಾ ಉರ್ ರೆಹಮಾನ್, ಮಹಮದ್ ವಖಾರ್-ಲಿಜರ್, ಮಹಮ್ಮದ್ ನೂರೂಫ್, ಮೊಹಮ್ಮದ್ ಸಾಕೇಬ್ ಅನ್ಸಾರಿ ಮತ್ತು ಇಮ್ತಿಯಾಜ್ ಅಲಂ ಬಂಧಿತರಾಗಿದ್ದು ಅವರ ಬಳಿ ಇದ್ದ ಎಲ್ಲಾ ರಾಸಾಯನಿಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸ್ಫೋಟಕವಸ್ತು ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಹಾಗೂ ಇತರ ಕಾಯ್ದೆಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಲಯಕ್ಕೆ ದೆಹಲಿ ಪೊಲೀಸರು ಹೇಳಿದ್ದಾರೆ.












Click it and Unblock the Notifications